- ಲಂಚ ಪಡೆಯುತ್ತಿರುವವರ ಜೊತೆ ಓಡಾಡುತ್ತಿರುವ ಪ್ರಧಾನಿ ಮೋದಿ
- ಶಾಂತಿ ಇರುವ ಕಡೆ ಅಶಾಂತಿ ಸೃಷಿಸುವ ಪ್ರವತ್ತಿ ಬಿಜೆಪಿಯದ್ದು
ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೋದಿ ಅವರೇ ಲಂಚ ಪಡೆಯುತ್ತಿರುವವರ ಜೊತೆಗೆ ಓಡಾಡಿ, ಅವರನ್ನು ಹೊಗಳುತ್ತಿದ್ದಾರೆ. ʼನಾ ಖಾವೂಂಗ, ನಾ ಖಾನೇದೂಂಗಾʼ ಎಲ್ಲಿ ಹೋಯಿತು? ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾತ್ರ ಖಾನೇವಾಲಾಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಈ ವಿಧಾನಸಭಾ ಚುನಾವಣೆ ದೇಶಕ್ಕೆ ಮತ್ತು ರಾಜ್ಯಕ್ಕೆ ಬಹಳ ಮಹತ್ತರ ಚುನಾವಣೆ. ದೇಶದ ಪ್ರಧಾನಿ ಮೋದಿ ಅವರು ಕಲಬುರಗಿ ಮೇಲೆ ಬಹಳ ಪ್ರೀತಿ. ಒಬ್ಬ ಪ್ರಧಾನಿ ಅವರು ಈ ಜಿಲ್ಲೆಗೆ 3 ಬಾರಿ ಬಂದಿದ್ದಾರೆ. ಒಂದು ಜಿಲ್ಲೆಯ ಚುನಾವಣೆಗೋಸ್ಕರ ನಾಲ್ಕು ನಾಲ್ಕು ಬಾರಿ ಬಂದಿದ್ದಾರೆ. ಅಂದರೆ ರಾಜ್ಯದ ಜನತೆಯ ಒಲವು ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂಬುದು ಸ್ಪಷ್ಟವಾಗಿದೆ” ಎಂದರು.
“ನಾನು ಮತ್ತು ನನ್ನ ಮಗ ಪ್ರಿಯಾಂಕ್ ಪ್ರಧಾನಿಗೆ ಅವರಿಗೆ ಅವಮಾನ ಮಾಡಿದ್ದೇವೆ ಎಂದು ಮೋದಿ ಆರೋಪಿಸಿದ್ದಾರೆ. ದೇಶದ ಪ್ರಧಾನಿಗೆ ನಾವು ಹೇಗೆ ಅವಮಾನ ಮಾಡಕಾಗುತ್ತೆ? ಯಾರೇ ಇದ್ದರೂ ನಮ್ಮವರು. ಅದೇ ನೀವು ಮಾತ್ರ (ಮೋದಿ) ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದೀರಿ” ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
“ನಾವು ಗುಲ್ಪಾರ್ಗದಲ್ಲಿ ಸುಮಾರು 400 ಕೋಟಿ ಅನುದಾನದೊಂದಿಗೆ ಕೇಂದ್ರೀಯ ವಿವಿ ತಂದಿದ್ದೇವೆ. ಅಲ್ಲಿ ವಿಭಾಗಗಳೇ ಇಲ್ಲ, ಅಲ್ಲಿರುವ ಖಾಲಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ. ಇಲ್ಲಿಯ ಜನ ಅರ್ಹರಿದ್ದರೂ ನೇಮಕಾತಿ ಮಾಡಿಲ್ಲ. ಈ ಭಾಗದಲ್ಲಿ ಇಎಸ್ಐ ಆಸ್ಪತ್ರೆಗಳನ್ನು ನಾವು ಇಲ್ಲಿ ಸ್ಥಾಪಿಸಿದ್ದೇವೆ. ಗುಲ್ಬಾರ್ಗಕ್ಕೆ ಒಂದು ಏಮ್ಸ್ ಮಾಡಲಿಲ್ಲ. ನಾವು ಮೂರು ವರ್ಷದಲ್ಲಿ ಖರ್ಚು ಸುಮಾರು ಸಾವಿರಾರು ಕೋಟಿ ಮಾಡಿ ತಂದು ನಿಲ್ಲಿಸಿದ್ದೇವೆ. ಆದರೆ ಈಗಿನ ಸರ್ಕಾರ ದನದ ಕೊಟ್ಟಿಗೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಬೀದರ್ ನಿಂದ ಮೈಸೂರಿನವರೆಗೆ, ಸೋಲಾಪುರದಿಂದ ಬೆಂಗಳೂರಿನವರೆಗೆ ನಾವು ತಂದ ಯೋಜನೆ ಅದನ್ನು ಇವರು ನಿಲ್ಲಿಸಿಬಿಟ್ಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಅವರಿಗೆ ದೊಡ್ಡ ಯೋಜನೆಗಳನ್ನು ತಂದು ಗೊತ್ತಿಲ್ಲ. ಧರ್ಮ ಧರ್ಮದೊಂದಿಗೆ ಬಡ ಜನರೊಳಗಡೆ ಜಗಳ ಹಚ್ಚೋದು ಗೊತ್ತು. ಬಾಯಿ ಬಿಟ್ಟರೆ ಹಿಂದೂ ಮುಸ್ಮಲ್ಮಾನ್ ಅಂತ ಹೇಳಿ ಸಾಮರಸ್ಯ ಕೆಡವಿ ಮತ ದ್ರುವೀಕರಣ ಮಾಡೋದೆ ಬಿಜೆಪಿಯ ಕೆಲಸ. ಬೇರೆ ಅವರು ಇಲ್ಲಿ ಬಂದು ಮತೀಯ ಸಾಮರಸ್ಯವನ್ನು ಕೆಡಿಸಲಿಕ್ಕೆ ಪ್ರಯತ್ನ ಮಾಡುತ್ತಾರೆ. ಸಮಾಜದ್ರೋಹ ಕೆಲಸ ಮಾಡುವ ಶಕ್ತಿಗಳಿಗೆ ಎಲ್ಲ ವಿಚ್ಛಿದ್ರಕಾರಿ ಶಕ್ತಿಗಳಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ನಾವು ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ. ಎಲ್ಲಿ ಶಾಂತಿ ಇರುತ್ತೊ ಅಲ್ಲಿ ಅಶಾಂತಿ ಮಾಡುವ ಪ್ರವತ್ತಿ ಬಿಜೆಪಿ ಅವರದ್ದು. ಇದು ನಮ್ಮ ನಿಮ್ಮ ರಕ್ಷಣೆಗಾಗಿ ಇರುವ ಚುನಾವಣೆ” ಎಂದರು.





