"ಬಸವಣ್ಣ ನಮ್ಮವರು ಎಂದು ದಲಿತರೂ ಒಪ್ಪಿಕೊಳ್ಳುತ್ತಾರೆ ಹಾಗೂ ಮೇಲಿನವರೂ ಒಪ್ಪಿಕೊಳ್ಳುತ್ತಾರೆ. ಅಂಬೇಡ್ಕರ್ ಅವರನ್ನು ಮಾತ್ರ ಕೇರಿಗೆ ಹಂಚಿಬಿಡುತ್ತಾರೆ" ಎಂದು ವಿಷಾದಿಸಿದರು.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪರಿಶಿಷ್ಟ ಜಾತಿಗೆ ಸೀಮಿತ ಮಾಡಲಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅವರನ್ನು ಮಹಾರ್ ಜಾತಿಗಷ್ಟೇ ಮಿತಿಗೊಳಿಸಲಾಗುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಬೇಸರ ವ್ಯಕ್ತಪಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ದಲಿತ ಸಂಸ್ಕೃತಿ ಅಧ್ಯಯನ ಪೀಠ’ ಮತ್ತು ‘ಈದಿನ ಡಾಟ್ ಕಾಮ್’ ಸಹಯೋಗದಲ್ಲಿ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅರಿವೇ ಅಂಬೇಡ್ಕರ- ವಿಶೇಷ ಉಪನ್ಯಾಸ’ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ದಲಿತರಿಗೆ ಮಾತ್ರ ಆರೋಪಿಸಲಾಗುತ್ತಿದೆ. ಹೀಗೆ ಆರೋಪ ಮಾಡುವವರು ಅಂಬೇಡ್ಕರ್ ಅವರನ್ನು ಸ್ವೀಕರಿಸಲಿಲ್ಲ. ಆದರೆ ಬಸವಣ್ಣ ನಮ್ಮವರು ಎಂದು ದಲಿತರೂ ಒಪ್ಪಿಕೊಳ್ಳುತ್ತಾರೆ ಹಾಗೂ ಮೇಲಿನವರೂ ಒಪ್ಪಿಕೊಳ್ಳುತ್ತಾರೆ. ಅಂಬೇಡ್ಕರ್ ಅವರನ್ನು ಮಾತ್ರ ಕೇರಿಗೆ ಹಂಚಿಬಿಡುತ್ತಾರೆ ಎಂದು ವಿಷಾದಿಸಿದರು.
ಅಂಬೇಡ್ಕರ್ ಅವರನ್ನು ಅರಿತುಕೊಳ್ಳುವಲ್ಲಿ ಬಹುತೇಕ ವಿಫಲರಾಗಿದ್ದೇವೆ. ಅಂಬೇಡ್ಕರ್ ಅವರು ಜಾಗತಿಕ ಅರ್ಥಶಾಸ್ತ್ರಜ್ಞ ಎಂದು ನಾವು ಹೇಳಲಿಲ್ಲ. ಸಂವಿಧಾನ ಶಿಲ್ಪಿ ಎನ್ನುವುದಕ್ಕಷ್ಟೇ ಸೀಮಿತಗೊಳಿಸಲಾಯಿತು. ಅವರನ್ನು ಅರ್ಥಶಾಸ್ತ್ರ ಪ್ರಾಧ್ಯಾಪಕರು ಓದಲಿಲ್ಲ. ಬಾಬಾಸಾಹೇಬರು ಸಂಸ್ಕೃತವನ್ನು ಕಲಿತಿದ್ದರೂ, ಅವರಿಗೆ ಸಂಸ್ಕೃತ ಬರುತ್ತಿರಲಿಲ್ಲವೆಂದು ಸುಳ್ಳು ಹಬ್ಬಿಸಲಾಗುತ್ತಿದೆ. ಇತ್ತ ಬಾಬಾಸಾಹೇಬರು ಬರೆದ ಸಂವಿಧಾನದ ಫಲಾನುಭವಿಗಳಾದ ಮಹಿಳೆಯರು ಅವರನ್ನು ಮರೆತ್ತಿದ್ದಾರೆ. ನಾವು ಸಂಘದ ಫಲಾನುಭವಿಗಳು ಎನ್ನುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಇದನ್ನೂ ಓದಿರಿ: ಆರ್ಎಸ್ಎಸ್ – ತಾಲಿಬಾನ್: ಒಂದೇ ನಾಣ್ಯದ ಎರಡು ಮುಖಗಳಲ್ಲವೇ?
‘ಪಾಶ್ಚಾತ್ಯರ ದಾಸ್ಯದಿಂದ ಮುಕ್ತರಾಗುವುದರ ಜೊತೆಗೆ ದೇಶದ ಒಳಗಿರುವ ಗುಲಾಮಗಿರಿಯ ಕೊಳಕು ತೊಲಗಿಸಬೇಕು. ಮೊದಲು ಜನರ ಮನಸ್ಸಿನಲ್ಲಿರುವ ಗುಲಾಮಗಿರಿ ಹೋಗಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ’ ಎಂದು ಅಂಬೇಡ್ಕರ್ ನಂಬಿದ್ದರು. ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಹೋರಾಟಗಾರ ಮಂಗ್ಳೂರ ವಿಜಯ, “ಅಂಬೇಡ್ಕರ್ ಅವರು ವಿವೇಚನಾ ಶಕ್ತಿಯಿಂದ, ಬುದ್ಧಿಶಕ್ತಿಯಿಂದ, ತ್ಯಾಗದಿಂದ ವಿಶೇಷ ವ್ಯಕ್ತಿಗಳಾಗಿ ಹೊರಹೊಮ್ಮಿದರು. ಸಮಾಜದ ಬಗ್ಗೆ ತೀವ್ರ ಕಾಳಜಿ ಹಾಗೂ ತುಡಿತವಿತ್ತು. ಸಮಾಜವನ್ನು ಅವರು ಚೆನ್ನಾಗಿ ಅರ್ಥೈಸಿಕೊಂಡಿದ್ದರು. ವೈಚಾರಿಕ ಮಟ್ಟದಲ್ಲಿ ಆಲೋಚಿಸುತ್ತಿದ್ದರು. ಜಾತಿ ಪದ್ಧತಿ, ಅಸ್ಪೃಶ್ಯತೆ ನಿರ್ಮೂಲನೆಗಾಗಿ ಸಾಕಷ್ಟು ಶ್ರಮಪಟ್ಟರು. ಇಂದು ತಾಂತ್ರಿಕವಾಗಿ ಜಾತಿ ಪದ್ಧತಿಯಿಲ್ಲ, ಆದರೆ ವಾಸ್ತವವಾಗಿ ಜಾತಿ ಪದ್ಧತಿ ಜಾರಿಯಲ್ಲಿದೆ. ಅದನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಎಚ್ಚರಿಸಿದರು.

“ಅಂಬೇಡ್ಕರ್ ಅವರು ಮಹಿಳೆಯರ ಹಕ್ಕು ಮತ್ತು ಸಮಾನತೆ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟ ನಡೆಸಿದ್ದಾರೆ. ಮಹಿಳೆಯರ ವಿಮೋಚನೆಗಾಗಿ ವಿಶೇಷ ಸೌಲಭ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಆದರೆ ಅಂಬೇಡ್ಕರ್ ಅವರು ಮಹಿಳಾ ಲೋಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚೆಯಾಗುವುದು ತುಂಬಾ ವಿರಳ” ಎಂದು ಅಭಿಪ್ರಾಯಪಟ್ಟರು.
“ಅಂಬೇಡ್ಕರ್ ಒಬ್ಬ ಮಹಾನ್ ಚೇತನ. ಅವರು ದುರ್ಬಲ ವರ್ಗಗಳು, ಮಹಿಳೆಯರು, ಕಾರ್ಮಿಕರು ಹೀಗೆ ವಿವಿಧ ಜನ ವರ್ಗಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಅಂಬೇಡ್ಕರ್ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಮಾತನಾಡಿ, “ಇತಿಹಾಸವೆಂದರೆ ವರ್ತಮಾನವೂ ಹೌದು. ಬಾಬಾಸಾಹೇಬರು ಭಾರತದ ಇತಿಹಾಸವೆಂದರೆ ಬೌದ್ಧರಿಗೂ ಬ್ರಾಹ್ಮಣರಿಗೂ ನಡೆದ ಮಾರಕ ಕಾಳಗದ ಚರಿತ್ರೆ ಎಂದು ಬಣ್ಣಿಸಿದ್ದಾರೆ. ವರ್ತಮಾನದಲ್ಲೂ ಬೌದ್ಧ ಚಿಂತನೆಗಳಿಗೂ ಬ್ರಾಹ್ಮಣೀಯ ವಿಚಾರಗಳಿಗೂ ಸಂಘರ್ಷ ಏರ್ಪಟ್ಟಿದೆ. ಬೌದ್ಧರಾದ ಕಾರಣಕ್ಕೆ ಸಿಜೆಐ ಬಿ.ಆರ್.ಗವಾಯಿಯವರ ಮೇಲೆ ಶೂ ತೂರಲಾಗಿದೆ” ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, “ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸರ್ಕಾರ ಹಾಗೂ ಜನರು ಸಂವಿಧಾನದ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡು ಅಭಿವೃದ್ಧಿ ಕಂಡಿದ್ದಾರೆ ಎಂಬುದು ಇಂದು ಮುಖ್ಯವಾಗುತ್ತದೆ” ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, “ಸಮಾನತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು ಸುಲಭ, ಆದರೆ ಆಚರಣೆಗೆ ತರುವುದು ಕಷ್ಟ. ಅರಿವು ಅಂತರಂಗ ಹಾಗೂ ಬಹಿರಂಗದ ವಿಚಾರಗಳ ಕುರಿತು ಮಾತನಾಡುತ್ತದೆ. ಅರಿವು ಶಬ್ದಕ್ಕೆ ಬಹಳ ವಿಶಾಲವಾದ ಅರ್ಥವಿದೆ. ಅಂಬೇಡ್ಕರ್ ವಿಚಾರ ಬಂದಾಗ ಇದುವರೆಗೂ ಏನು ಅರ್ಥೈಸಿಕೊಂಡಿದ್ದೇವೆ ಎನ್ನುವುದನ್ನು ಹೊರತುಪಡಿಸಿ ನಿರ್ಲಕ್ಷ್ಯಕ್ಕೆ ಒಳಪಡಿಸಿದ ಕ್ಷೇತ್ರಗಳ ಕೊಡುಗೆಯನ್ನು ತಿಳಿದುಕೊಳ್ಳಬೇಕಾಗಿದೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಮಾತನಾಡುತ್ತೇವೆ. ಆದರೆ ಅವರ ಚಿಂತನೆಗಳನ್ನು ಶೇ.10ರಷ್ಟರಾದರೂ ಅಳವಡಿಸಿಕೊಳ್ಳಬೇಕು. ನೈತಿಕವಾಗಿ ನಾವು ಸರಿಯಿದ್ದಾಗ, ಪರಿಶುದ್ದ ಆಲೋಚನೆಗಳು ಮನಸ್ಸಿನಲ್ಲಿ ಮೂಡಿದಾಗ ಮಾತ್ರ ಇವರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯ” ಎಂದು ಹೇಳಿದರು.
ಇದನ್ನೂ ಓದಿರಿ: ನಿಮ್ಮ ಮಕ್ಕಳು ಆರ್ಎಸ್ಎಸ್ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಚಿನ್ನಸ್ವಾಮಿ ಸೋಸಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಈದಿನ ಡಾಟ್ ಕಾಮ್ನ ಪ್ರತಿನಿಧಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಸಂಶೋಧನಾರ್ಥಿ ಪ್ರದೀಪ್ ನಿರೂಪಿಸಿದರು. ಮಂಜುಳಾ ವಂದಿಸಿದರು.





