ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಸಹಚರರಿಗೆ ಜಾಮೀನು ಮಂಜೂರಾಗಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ದರ್ಶನ್ ಸೇರಿ 7 ಆರೋಪಿಗಳ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ನ ಕ್ರಮವನ್ನು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಎಲ್ಲ ಜಾಮೀನು ಅರ್ಜಿಗಳಿಗೂ ಹೈಕೋರ್ಟ್ ಒಂದೇ ರೀತಿಯ ಆದೇಶ ನೀಡುತ್ತದೆಯೇ?” ಎಂದು ಪ್ರಶ್ನಿಸಿದ ಪೀಠ, “ಈ ರೀತಿಯ ಪ್ರಕರಣದಲ್ಲಿ ಜಾಮೀನು ನೀಡಿರುವ ಕ್ರಮದಿಂದ ನಮಗೆ ತೊಂದರೆಯಾಗುತ್ತಿದೆ. ಹೈಕೋರ್ಟ್ ನ್ಯಾಯಾಧೀಶರಿಂದ ಈ ರೀತಿಯ ತಪ್ಪನ್ನು ನಿರೀಕ್ಷಿಸಿರಲಿಲ್ಲ. ಸೆಷನ್ಸ್ ನ್ಯಾಯಾಲಯದಿಂದ ಈ ತಪ್ಪಾಗಿದ್ದರೆ ಸುಮ್ಮನಿರಬಹುದಿತ್ತು. ಹೈಕೋರ್ಟ್ ನ್ಯಾಯಾಧೀಶರು ಈ ರೀತಿಯ ತಪ್ಪು ಮಾಡುತ್ತಾರೆಯೇ?” ಎಂದು ವಿಷಾದ ವ್ಯಕ್ತಪಡಿಸಿತು.
ಪೀಠವು, ಈ ಮಾದರಿಯ ತೀರ್ಪು ನೀಡುವ ಮೊದಲು ಹೈಕೋರ್ಟ್ ತನಿಖಾ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿದೆಯೇ ಎಂಬುದರ ಕುರಿತು ಅನುಮಾನ ವ್ಯಕ್ತಪಡಿಸಿದೆ. “ಇದು ಕೊಲೆ ಮತ್ತು ಪಿತೂರಿ ಪ್ರಕರಣವಾಗಿರುವುದರಿಂದ ನಾವು ಹೆಚ್ಚು ಗಂಭೀರವಾಗಿ ವಿಚಾರಿಸುತ್ತೇವೆ,” ಎಂದು ಸ್ಪಷ್ಟಪಡಿಸಿತು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, “ನಾವು ಖುಲಾಸೆ ಅಥವಾ ಶಿಕ್ಷೆಯ ತೀರ್ಪು ನೀಡುವುದಿಲ್ಲ. ಆದರೆ ಹೈಕೋರ್ಟ್ನ ನ್ಯಾಯಾಂಗ ಕ್ರಮವನ್ನು ಪರಿಶೀಲಿಸಿ ಅಂತಿಮ ತೀರ್ಮಾನಕ್ಕೆ ಬರುವೆವು” ಎಂದು ಹೇಳಿ ವಿಚಾರಣೆಯನ್ನು ಪೀಠ ಮುಕ್ತಾಯಗೊಳಿಸಿತು.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಂಡಿಸಿ ಪ್ರಕರಣದ ಬಗ್ಗೆ ಕೋರ್ಟ್ಗೆ ವಿವರಣೆ ನೀಡಿದ್ದಾರೆ. ಸರ್ಕಾರ ಸಲ್ಲಿಸಿರುವ ದಾಖಲೆಯನ್ನು ಕೋರ್ಟ್ ಪರಿಶೀಲಿಸಿ, 17 ಜನರಲ್ಲಿ 7 ಜನರ ಜಾಮೀನು ಅರ್ಜಿ ರದ್ದಾಗಬೇಕೆಂದು ಬಯಸಿದ್ದೀರಾ ಎಂದು ಕೋರ್ಟ್ ಪ್ರಶ್ನೆ ಕೇಳಿತು. ಇದಕ್ಕೆ ಉತ್ತರಿಸಿದ ಸಿದ್ದಾರ್ಥ್ ಲೂಥ್ರಾ ಅವರು 7 ಜನರ ಜಾಮೀನು ರದ್ದಾದ ಬಳಿಕ ಉಳಿದವರ ಜಾಮೀನು ರದ್ದು ಮಾಡಲು ಅರ್ಜಿ ಸಲ್ಲಿಸುತ್ತೇವೆ ಎಂದರು.
ಇದನ್ನು ಉತ್ತರಿಸಿದ್ದೀರಾ? ಈ ದಿನ ಸಂಪಾದಕೀಯ | ಮೋಶಾ ಕಂಪನಿಯ ಮತ್ತೊಂದು ನಿಗೂಢ ನಾಟಕ!
ಸಾಂದರ್ಭಿಕ ಸಾಕ್ಷಿಯ ಮೇಲೆ ಕೇಸ್ ದಾಖಲಾಯಿತಾ? ಎಂದು ಕೋರ್ಟ್ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರಿಸಿದ ಸಿದ್ದಾರ್ಥ್ ಅವರು ಪ್ರತ್ಯಕ್ಷದರ್ಶಿಗಳು ಕೂಡ ಇದ್ದಾರೆ ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದರು. ಆ ಬಳಿಕ ಅವರಿಗೆ ಸಂಪೂರ್ಣ ಜಾಮೀನು ದೊರೆತಿತ್ತು. ಇದನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಈಗ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೆ, ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಬಗ್ಗೆ ಅಸಮಾಧಾನ ಹೊರಹಾಕಿದೆ.





