ರಾಮನಗರದ ಬೆಟ್ಟಗುಡ್ಡಗಳಲ್ಲಿ 1974ರಲ್ಲಿ 'ಶೋಲೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ವೃತ್ತಿಪರ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆಟ್ಗೆ ಭೇಟಿ ನೀಡಿದ್ದರ ಒಂದು ನೆನಪು...
‘ಶೋಲೆ’ ಹಿಂದಿ ಸಿನಿಮಾದಲ್ಲಿ ಛಾಯಾಗ್ರಾಹಕ ದ್ವಾರಕಾ ದಿವೇಚಾ ಅವರು ರಾಮನಗರ ಬೆಟ್ಟಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ರಾಮಘಡ ಗ್ರಾಮ ಸೇರಿದಂತೆ ಡಕಾಯಿತ ಗಬ್ಬರ್ ಸಿಂಗ್ ಅಡ್ಡಾಗಳನ್ನು ಇಲ್ಲಿ ಚಿತ್ರಿಸಲಾಗಿದೆ. 1974ರಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ವೃತ್ತಿಪರ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆಟ್ಗೆ ಭೇಟಿ ನೀಡಿದ್ದರು. ಆಗ ಬೆಂಗಳೂರಿನಲ್ಲಿ ಹಿಂದಿ ಸಿನಿಮಾಗಳ ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಹೀರಾನಾಥ್ ರಾವ್ ಅವರ ಕರೆಯ ಮೇರೆಗೆ ಅವರು ಸೆಟ್ಗೆ ತೆರಳಿದ್ದರು.
ಈ ಸಂದರ್ಭದ ಬಗ್ಗೆ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಹೇಳುವುದು ಹೀಗೆ- ‘ಆಗ ನಾನು ಮೇನಕಾ ಚಲನಚಿತ್ರ ಪತ್ರಿಕೆ ಸೇರಿದಂತೆ ಇತರೆ ಕೆಲವು ಪತ್ರಿಕೆಗಳಿಗೂ ಫೋಟೊಗಳನ್ನು ಒದಗಿಸುತ್ತಿದ್ದೆ. PRO ಹೀರಾನಾಥ್ ರಾವ್ ಅವರ ಆಹ್ವಾನದ ಮೇರೆಗೆ ಸೆಟ್ಗೆ ಭೇಟಿ ನೀಡಿದ್ದೆ. ರಾಮನಗರದ ಬೆಟ್ಟ ಪ್ರದೇಶವನ್ನು ಈ ರೀತಿ ತೋರಿಸಬಹುದು ಎನ್ನುವ ಚಿತ್ರದ ನಿರ್ದೇಶಕ ರಮೇಶ್ ಸಿಪ್ಪಿ ಅವರ ಕಲ್ಪನೆಯೇ ನನಗೆ ಇಷ್ಟವಾಗಿತ್ತು. ನಾನು ಭೇಟಿ ನೀಡಿದಾಗ ಚಿತ್ರದ ಸುಮಾರು ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು ಎಂದು ಕಾಣುತ್ತದೆ. ಕ್ಲೋಸ್ ಅಪ್, ವೈಡ್ ಆಂಗಲ್ ಸೇರಿದಂತೆ ಅಲ್ಲಿ ಹಲವು ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆ. ಲ್ಯಾಂಡ್ಮಾರ್ಕ್ ಹಿಂದಿ ಚಿತ್ರವೊಂದರ ಮೇಕಿಂಗ್ ಸೆರೆಹಿಡಿಯುವ ಅಪೂರ್ವ ಅವಕಾಶ ನನ್ನದಾಯ್ತು…’
ಇದನ್ನು ಓದಿದ್ದೀರಾ?: ಬಾಲಿವುಡ್ನ ಸ್ಫುರದ್ರೂಪಿ ನಟ ಧರ್ಮೇಂದ್ರ… ಇನ್ನು ನೆನಪು ಮಾತ್ರ
ಇಲ್ಲಿ ರಾಮಘಡ ಗ್ರಾಮದ ಸಂಪೂರ್ಣ ಚಿತ್ರಣ ನೀಡುವ ಒಂದು ವೈಡ್ ಆಂಗಲ್ ಫೋಟೊ ಇದೆ. ಈ ಫೋಟೊ ನೋಡುತ್ತಿದ್ದಂತೆ ಇಲ್ಲಿ ಚಿತ್ರಣಗೊಂಡಿರುವ ಚಿತ್ರದ ಹಲವು ಸನ್ನಿವೇಶಗಳು ಸಿನಿಪ್ರೇಮಿಗಳ ಮನಸ್ಸಿನಲ್ಲಿ ಮೂಡಬಹುದು. ಧರ್ಮೇಂದ್ರ ಅವರು ಕೂಲ್ಡ್ರಿಂಕ್ ಬಾಟಲ್ ಹಿಡಿದಿರುವ ಮತ್ತೊಂದು ಫೋಟೊ ಇದೇ ಸಂದರ್ಭದ್ದು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಸೆರೆಯಾದ ಚಿತ್ರವಿದು. ಧರ್ಮೇಂದ್ರ ಅವರು ಉಪಾಹಾರ ಸೇವಿಸುತ್ತಿರುವ ಮತ್ತೊಂದು ಫೋಟೊ ಬೆಂಗಳೂರಿಗೆ ಮತ್ತೊಂದು ಬಾರಿ ಅವರು ಭೇಟಿ ನೀಡಿದ್ದಾಗಿನ ಸಂದರ್ಭ. ‘ಇದು ಹಿಂದಿ ಸಿನಿಮಾವೊಂದರ ಔತಣಕೂಟದ ಸಂದರ್ಭ. ಯಾವ ಸಿನಿಮಾ ಎನ್ನುವುದು ನನಗೆ ನೆನಪಾಗುತ್ತಿಲ್ಲ’ ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.
(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಬರಹ: ಶಶಿಧರ ಚಿತ್ರದುರ್ಗ)






