ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಚಿತ್ರವನ್ನು ಕಟುವಾಗಿ ಟೀಕಿಸಿದ್ದು, ಇದೊಂದು ‘ಪ್ರೇಕ್ಷಕರ ತಾಳ್ಮೆಯ ಪರೀಕ್ಷೆ’ ಎಂದು ಜರಿದಿದ್ದಾರೆ.
“ಭರವಸೆ ಮೂಡಿಸಿದ್ದ ಕಥೆಯೊಂದನ್ನು ಇಷ್ಟೊಂದು ಬೋರಿಂಗ್ ಆಗಿ ಮಾಡುವುದು ಹೇಗೆ ಎಂಬುದಕ್ಕೆ ಈ ಚಿತ್ರವೇ ಉದಾಹರಣೆ. ಅತ್ಯಂತ ನೀರಸವಾದ ಪಠ್ಯಪುಸ್ತಕದ ಮುಗಿಯದ ಅಧ್ಯಾಯಗಳನ್ನು ಓದಿದಂತೆ ಭಾಸವಾಗುವ ಈ ಚಿತ್ರ, ಒಂದು ಹಂತದಲ್ಲಿ ಪ್ರೇಕ್ಷಕರು ಹತಾಶೆಯಿಂದ ನಗುವಂತೆ ಮಾಡುತ್ತದೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ. ಇದೇನಿದ್ದರೂ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಮಾತ್ರ ಸೀಮಿತವಾದ ಕಂಟೆಂಟ್. ಚಿತ್ರ ನೋಡುತ್ತಾ ಮಧ್ಯೆ ‘ಪಾಸ್’ ಮಾಡಿ, ಮೊಬೈಲ್ ಸ್ಕ್ರೋಲ್ ಮಾಡುತ್ತಾ ನಮ್ಮ ಆಯ್ಕೆಯನ್ನೇ ನಾವೇ ಪ್ರಶ್ನಿಸಿಕೊಳ್ಳಲು, ಬೋರಾದಾಗ ಒಂದೇ ಕ್ಲಿಕ್ನಲ್ಲಿ ಎಸ್ಕೇಪ್ ಆಗಲು ಇದು ಹೇಳಿ ಮಾಡಿಸಿದಂತಿದೆ” ಎಂದು ರಮ್ಯಾ ಲೇವಡಿ ಮಾಡಿದ್ದಾರೆ.
ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಅವರು, “ನಿರ್ದೇಶನ, ಸಂಭಾಷಣೆ, ಸಂಕಲನ, ಹಿನ್ನೆಲೆ ಸಂಗೀತ ಮತ್ತು ನಟನೆ – ಹೀಗೆ ಎಲ್ಲವೂ ಕಳಪೆಯಾಗಿವೆ. ಚಿತ್ರತಂಡಕ್ಕೆ ಮಾರ್ಚ್ 19ರ ಬಿಡುಗಡೆಯ ಗಡುವು ಹತ್ತಿರವಾಗುತ್ತಿರುವುದು ತಿಳಿದಿರಲಿಲ್ಲವೇನೋ ಅಥವಾ ಎಲ್ಲವೂ ಗೊತ್ತಿದ್ದರೂ, ‘ಹಾಂ.. ಪರ್ಫೆಕ್ಟ್ ಆಗಿದೆ, ಕಳುಹಿಸಿಬಿಡಿ’ ಎಂದು ಕಣ್ಮುಚ್ಚಿ ಬಿಡುಗಡೆ ಮಾಡಿದಂತಿದೆ. ಮೊದಲ ಭಾಗದಲ್ಲಿ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆದರೆ ಈ ಚಿತ್ರದಲ್ಲಿ ಪ್ರೇಕ್ಷಕರ ಸಾಮೂಹಿಕ ನಿರಾಸೆ ಎದ್ದು ಕಾಣುತ್ತಿತ್ತು” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ʼಧುರಂಧರ್ʼ ಸೀಕ್ವೆಲ್ಗೆ ʼAʼ ಸರ್ಟಿಫಿಕೇಟ್; 21 ಕಡೆ ಕತ್ತರಿ, ರನ್ಟೈಮ್ ಎಷ್ಟು ಗೊತ್ತೇ?
ರಣವೀರ್ ಸಿಂಗ್ ನಟನೆಯನ್ನು ಕಟುವಾಗಿ ಟೀಕಿಸಿರುವ ರಮ್ಯಾ, “ರಣವೀರ್ ಸಿಂಗ್ ಒಬ್ಬರೇ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾರೆ ಎಂದು ಹೇಳುವವರು, ನಿಖರವಾಗಿ ಅವರು ಏನನ್ನು ಹೊತ್ತು ಸಾಗಿದ್ದಾರೆ ಎಂಬುದನ್ನು ಹೇಳಬೇಕು. ಏಕೆಂದರೆ ಇಡೀ ಚಿತ್ರದಲ್ಲಿ ನನಗೆ ಕಂಡಿದ್ದು ಅವರ ಕೂದಲು ಮಾತ್ರ. ಮೊದಲ ಭಾಗದಲ್ಲಿ ಅವರ ಕೂದಲಿಗೆ ಒಂದು ಕಳೆ ಇತ್ತು, ಆದರೆ ಇದರಲ್ಲಿ ಅದು ದೃಶ್ಯಗಳನ್ನು ಮರೆಮಾಚುತ್ತಾ ಕೇವಲ ಅಡ್ಡಿಯಾಗುವಂತೆ ಇದೆ. ಅವರ ಕೂದಲಿಗೆ ಬೇಕಾದರೆ ಪೋಷಕ ನಟ ಪ್ರಶಸ್ತಿಯನ್ನು ನೀಡಬಹುದು!” ಎಂದು ವ್ಯಂಗ್ಯವಾಡಿದ್ದಾರೆ.
ಚಿತ್ರದ ಅತಿರೇಕದ ಹಿಂಸೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಸಿರಿಂಜ್, ಸ್ಪ್ಯಾನರ್, ಚಾಕು, ಸರಪಳಿ, ಬಂದೂಕು, ಬಜೂಕಾ ಹೀಗೆ ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ಆಯುಧಗಳನ್ನಾಗಿ ಬಳಸಿ ಹಿಂಸೆಯನ್ನು ಸೃಷ್ಟಿಸಲಾಗಿದೆ. ನಿರ್ದೇಶಕರು ಪ್ರತಿ ದೃಶ್ಯದಲ್ಲೂ ಹಿಂದಿನ ದೃಶ್ಯಕ್ಕಿಂತ ಹೆಚ್ಚು ಹಿಂಸೆ ಅಥವಾ ಹಾಸ್ಯವನ್ನು ತುಂಬಲು ತಮ್ಮೊಂದಿಗೆ ತಾವೇ ಸ್ಪರ್ಧೆಗೆ ಇಳಿದಂತಿದೆ. ಎರಡೂ ಕಾಲುಗಳನ್ನು ಕತ್ತರಿಸಿ, ಮುಂಡವನ್ನು ಸೀಮೆಎಣ್ಣೆಯಲ್ಲಿ ನೆನೆಸಿದರೂ ಆ ವ್ಯಕ್ತಿ ‘ಟೆಡ್ ಟಾಕ್’ ನೀಡುವಂತೆ ಡೈಲಾಗ್ ಹೇಳುತ್ತಾನೆ! ಇಂತಹ ಅದ್ಭುತ ವೈದ್ಯಕೀಯ ಚಮತ್ಕಾರಕ್ಕೆ ಆಸ್ಕರ್ ಬದಲು ನೊಬೆಲ್ ಪ್ರಶಸ್ತಿಯೇ ಬರಬೇಕು” ಎಂದು ಅಣಕಿಸಿದ್ದಾರೆ.
‘ಧುರಂಧರ್ 2’ ಒಂದು ಅತಿ ದೊಡ್ಡ ನಿರಾಸೆ ಹಾಗೂ ನಿದ್ರೆ ಬರಿಸುವ ಚಿತ್ರ. ರಣವೀರ್ ಸಿಂಗ್ ಇದಕ್ಕಿಂತ ಉತ್ತಮ ಪಾತ್ರಗಳಿಗೆ ಅರ್ಹರು. ಇನ್ನು ನಿರ್ದೇಶಕ ಆದಿತ್ಯ ಧರ್ ಅವರು ತಮ್ಮ ಅತಿಯಾದ ರಾಷ್ಟ್ರೀಯತೆ ಮತ್ತು ಪ್ರೊಪಗಾಂಡಾದಿಂದ ಹೊರಬರಬೇಕಿದೆ. ಏಕೆಂದರೆ ಆ ಟ್ರೆಂಡ್ ಈಗ ಬಹಳ ಹಳೆಯದಾಗಿದೆ ಎಂದು ರಮ್ಯಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.





