ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು (ಗುರುವಾರ) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ದರ್ಶನ್ ಅವರನ್ನು ಪರದೆಯ ಮೇಲೆ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳಗ್ಗೆ 6:30ಕ್ಕೆ ಪ್ರದರ್ಶನ ಆರಂಭಗೊಂಡಿದೆ.
‘ದಿ ಡೆವಿಲ್’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ದಿನದಿಂದ ಅಭಿಮಾನಿಗಳಲ್ಲಿ ಸಂತಸ ಆರಂಭವಾಗಿತ್ತು. ದರ್ಶನ್ ಹಿಂದಿನ ಚಿತ್ರ ‘ಕಾಟೇರ’ 2023ರಲ್ಲಿ ಬಿಡುಗಡೆಯಾಗಿ ಯಶ್ವಸಿ ಕಂಡಿತ್ತು. ಅದೇ ರೀತಿ ಈ ಸಿನಿಮಾವನ್ನು ಗೆಲ್ಲಿಸಬೇಕೆಂದು ಚಿತ್ರತಂಡ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ದರ್ಶನ್ ಆಪ್ತ ಧನ್ವೀರ್ ಮತ್ತು ದರ್ಶನ್ ಸಹೋದರ ಹಾಗೂ ಚಿತ್ರ ನಿರ್ದೇಶಕ ದಿನಕರ ತೂಗುದೀಪ ಚಿತ್ರ ಅಭಿಮಾನಿಗಳ ಜೊತೆಗೆ ಚಿತ್ರ ವೀಕ್ಷಿಸಿದ್ದಾರೆ.
ಈಗ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಬರೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ‘ಡೆವಿಲ್’ ಸಿನಿಮಾಗೆ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ವಿಮರ್ಶೆ ನೀಡುವ ಭಯ ಇದೆ ಎಂದು ಚಿತ್ರತಂಡ ಕೋರ್ಟ್ನಿಂದ ಆದೇಶ ತಂದಿದ್ದು, ಟಿಕೆಟ್ ಬುಕಿಂಗ್ ಆ್ಯಪ್ ಬುಕ್ ಮೈ ಶೋನಲ್ಲಿ ರೇಟಿಂಗ್ ನೀಡಲು ತಡೆಹಿಡಿದಿದೆ.

ಸಿನಿಮಾವನ್ನು ನೋಡಿದ ಬಳಿಕ ಬುಕ್ ಮೈ ಶೋ ಮೂಲಕ ಎಲ್ಲರೂ ರೇಟಿಂಗ್ ನೀಡಬಹುದು. ಸಿನಿಮಾ ವೀಕ್ಷಣೆ ಮಾಡಿದ್ದರೆ ಮಾತ್ರ ರೇಟಿಂಗ್ ನೀಡಲು ಅವಕಾಶ ಇರುತ್ತದೆ. ಈ ರೇಟಿಂಗ್ ನೂರಕ್ಕೆ ನೂರರಷ್ಟು ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸಿನಿಮಾ ಚೆನ್ನಾಗಿದ್ದರೂ ದ್ವೇಷದ ಕಾರಣಕ್ಕೆ ನೆಗೆಟಿವ್ ವಿಮರ್ಶೆ ಕೊಡುವ ಸಾಧ್ಯತೆ ಇರಬಹುದು. ಹಾಗಾಗಬಾರದು ಎಂಬ ಕಾರಣದಿಂದಲೇ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡುವ ಅವಕಾಶಕ್ಕೆ ಚಿತ್ರತಂಡ ಬ್ರೇಕ್ ಹಾಕಿದೆ.
ಸಿನಿಮಾ ವೀಕ್ಷಿಸಿದ ಬಳಿಕ ಅನೇಕರು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಹೋಗಿದ್ದಾರೆ. ಆದರೆ, ಅದು ಸಾಧ್ಯವಾಗದಿದ್ದಾಗ, ‘ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎನ್ನುವ ಸಂದೇಶ ಕಾಣುತ್ತದೆ.
ಈ ಬಗ್ಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಮಾತನಾಡಿ “ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಮುಚ್ಚಿದ್ದೇವೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಆಗುತ್ತಾ ಇದೆ. ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ. ಆಗ ಬೇಕೆಂದು ಸಿನಿಮಾಗೆ ನೆಗೆಟಿವ್ ವಿಮರ್ಶೆ ಕೊಡಿಸಿದ್ದರು. ಆ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿ ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿರುವಾಗಲೇ ಚಿತ್ರ ಬಿಡುಗಡೆಯಾಗಿದೆ. ಜೈಲಿನಲ್ಲಿರುವಾಗ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. ಮೊದಲು 2011 ರಲ್ಲಿ ‘ಸಾರಥಿ’ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ಅವರ ದೂರಿನ ಅನ್ವಯ ಜೈಲಿಗೆ ಹೋಗಿದ್ದರು.
ದಿ ಡೆವಿಲ್ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ರಚನಾ ರೈ, ಹಾಗೂ ಮುಖ್ಯಪಾತ್ರದಲ್ಲಿ ಅಚ್ಯುತ್ ಕುಮಾರ್, ವಿನಯ್ ಗೌಡ, ಶೋಭರಾಜ್, ಶರ್ಮಿಳಾ ಮಾಂಡ್ರೆ, ಗಿಲ್ಲಿ ನಟ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.





