ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫ್ಸ್) ಸಮಾರೋಪದ ದಿನವಾದ ಶುಕ್ರವಾರ, ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳನ್ನು ಪೂರೈಸಿ ಅಪಾರ ಕೊಡುಗೆ ನೀಡಿದ ಗಣ್ಯರನ್ನು ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಖ್ಯಾತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಹಿರಿಯ ನಟಿ, ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಅವರಿಗೆ ವೇದಿಕೆಯಲ್ಲಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರ ಪರವಾಗಿ ಪುತ್ರಿ ಪೂರ್ಣಿಮಾ ರಾಮ್ಕುಮಾರ್ ಹಾಗೂ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರ ಪರವಾಗಿ ಸಹೋದರ ಶಂಕರ್ ಐತಾಳ್ ಸನ್ಮಾನ ಸ್ವೀಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮನವರ ಅನುಪಸ್ಥಿತಿಯಲ್ಲಿ ಚಿತ್ರರಂಗ ಎದುರಿಸುತ್ತಿರುವ ನಾಯಕತ್ವದ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಡಾ. ರಾಜ್ಕುಮಾರ್ ಕೆ.ಜಿ. ರಸ್ತೆಗೆ ಬರುತ್ತಿದ್ದರು. ಅವರು ಬಂದರೆ ಜನಸಾಗರವನ್ನು ತಡೆಯುವುದು ಕಷ್ಟ ಎಂದು ಪೊಲೀಸ್ ಆಯುಕ್ತರೇ ಹೇಳುತ್ತಿದ್ದರು. ಅಂತಹ ಶಕ್ತಿ ಅವರಲ್ಲಿತ್ತು. ಆದರೆ ಇಂದು ನಾಯಕರಿಲ್ಲದೆ ಚಿತ್ರರಂಗ ಅತಂತ್ರ ಸ್ಥಿತಿಯಲ್ಲಿದೆ,” ಎಂದು ವಿಷಾದಿಸಿದರು.
”ಹಿಂದೆ ಪಾರ್ವತಮ್ಮನವರು ಕಾದಂಬರಿ ಆಧಾರಿತ ಚಿತ್ರಗಳಿಗೆ ಒತ್ತು ನೀಡುತ್ತಿದ್ದರು. ಆದರೆ ಇಂದು ನಾಯಕ ನಟರು ಕಾದಂಬರಿಗಳನ್ನು ಪರಿಗಣಿಸುತ್ತಿಲ್ಲ. ಮಣ್ಣಿನ ವಾಸನೆ, ಸಂಸ್ಕೃತಿ ಬಿಂಬಿಸುವ ಕಥೆಗಳ ಕೊರತೆಯಿಂದಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿಯುವಂತಾಗಿದೆ,” ಎಂದು ಪ್ರಸ್ತುತ ಚಿತ್ರರಂಗದ ನಡೆಗೆ ಕನ್ನಡಿ ಹಿಡಿದರು. ಅಲ್ಲದೇ, ಜಿಲ್ಲಾ ಮಟ್ಟದಲ್ಲಿ ಚಿತ್ರೋತ್ಸವ ವಿಸ್ತರಣೆ ಮತ್ತು ಅಕಾಡೆಮಿಗೆ ಪ್ರತ್ಯೇಕ ನಿರ್ದೇಶನಾಲಯದ ಅಗತ್ಯವನ್ನು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಮಾತನಾಡಿ, “ನಿರ್ಮಾಪಕರು ಸಂಕಷ್ಟದಲ್ಲಿದ್ದು, ಸರ್ಕಾರ ನೀಡುತ್ತಿರುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಯಶಸ್ವಿನಿ ಯೋಜನೆಯನ್ನು ಚಿತ್ರರಂಗಕ್ಕೂ ವಿಸ್ತರಿಸಬೇಕು ಮತ್ತು ಚಿತ್ರರಂಗಕ್ಕೆ ಶೀಘ್ರವೇ ಉದ್ಯಮದ ಸ್ಥಾನಮಾನ ನೀಡಬೇಕು,” ಎಂದು ಒತ್ತಾಯಿಸಿದರು. ಅಲ್ಲದೆ, ಫಿಲ್ಮ್ ಸಿಟಿ ನಿರ್ಮಾಣದ ಜೊತೆಗೆ ಕಲಾವಿದರು ಮತ್ತು ತಂತ್ರಜ್ಞರಿಗೆ ವಸತಿಗಾಗಿ ಜಾಗ ಮೀಸಲಿಡುವಂತೆ ಮನವಿ ಮಾಡಿದರು.

ತಮ್ಮ ಎಂಟು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಎಸ್. ರಾಮಚಂದ್ರ ಅವರನ್ನು ಸ್ಮರಿಸಿದ ಗಿರೀಶ್ ಕಾಸರವಳ್ಳಿ, “ರಾಮಚಂದ್ರ ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ನಿರ್ದೇಶಕರ ಮಾಧ್ಯಮ ಇದಾಗಿದ್ದರೂ, ತಮಗೆ ಸರಿ ಎನಿಸದಿದ್ದನ್ನು ನೇರವಾಗಿ ಹೇಳುವ ಎದೆಗಾರಿಕೆ ಅವರಲ್ಲಿತ್ತು,” ಎಂದು ತಿಳಿಸಿದರು.
ಪೂರ್ಣಿಮಾ ರಾಮ್ಕುಮಾರ್ ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಯಶಸ್ಸಿನ ಹಿಂದೆ ಚಿ. ಉದಯಶಂಕರ್, ದೊರೈ-ಭಗವಾನ್ ಸೇರಿದಂತೆ ಅನೇಕ ಗಣ್ಯರ ಶ್ರಮವಿದೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು, ಚಿತ್ರರಂಗದ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಚಲನಚಿತ್ರ ಅಕಾಡೆಮಿ ಪರವಾಗಿ ಡಾ. ಸಾಧು ಕೋಕಿಲ ಗಣ್ಯರನ್ನು ಸ್ವಾಗತಿಸಿದರು. ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್ ಕಾರ್ಯಕ್ರಮ ನಿರೂಪಿಸಿದರು.





