ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್-12ರ ಮನೆಗೆ ಮಂಗಳವಾರ ಅಧಿಕಾರಿಗಳು ಬೀಗ ಜಡಿದು ಹೋಗಿದ್ದರು. ಬೀಗ ಹಾಕಿದ ಕೇವಲ 24 ಗಂಟೆಗಳ ಒಳಗೆ ಬಿಗ್ ಬಾಸ್ ಮನೆ ಮತ್ತೆ ತೆರೆಯಲು ಅಣಿಯಾಗಿದೆ. ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಗೆ ಮರಳುವ ಉತ್ಸಾಹದಲ್ಲಿದ್ದಾರೆ. ರಿಯಾಲಿಟಿ ಶೋ ಮುಂದುವರೆಯುವುದು ಖಚಿತವೆಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಸ್ಟುಡಿಯೋ ಮಾಲೀಕರು ಉಲ್ಲಂಘಿಸಿದ್ದಾರೆ. ಸ್ಟುಡಿಯೋದಿಂದ ಹೊರಬರುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಮಾತ್ರವಲ್ಲದೆ, ಬಿಗ್ ಬಾಸ್ ಶೋ ಕೂಡ ಅನುಮತಿ ಪಡೆಯದೇ ಆರಂಭವಾಗಿದೆ ಎಂದು ದೂರಲಾಗಿತ್ತು.
ನೋಟಿಸ್ ನೀಡಿದ ಬಳಿಕವೂ ಎಚ್ಚೆತ್ತುಕೊಳ್ಳದೆ, ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳದೆ ಬಿಗ್ ಬಾಸ್ ಶೋ ಆರಂಭಿಸಿದ್ದು ಮತ್ತಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಅದೇ ಕಾರಣದಿಂದಾಗಿ, ಮಂಗಳವಾರ ಸಂಜೆ, ಜಾಲಿವುಡ್ ಸ್ಟುಡಿಯೋಗೆ ಧಾವಿಸಿದ ಅಧಿಕಾರಿಗಳು ಸ್ಟುಡಿಯೋಗೆ ಬೀಗ ಹಾಕಿದ್ದರು. ಬಿಗ್ ಬಾಸ್ ಸ್ಪರ್ಧಿಗಳು ಮತ್ತು ಸಿಬ್ಬಂದಿಗಳು ಹೊರಕಳಿಸಿದ್ದರು.
ಆದರೆ, ಇದೀಗ ಜಾಲಿವುಡ್ ಸ್ಟುಡಿಯೋ ಮತ್ತು ಬಿಗ್ ಬಾಸ್ ಮನೆ ಮತ್ತೆ ತೆರೆದಿವೆ. ಅಂದರೆ, ಬೀಗ ಜಡಿದ ಕಳೆದ 24 ಗಂಟೆಗಳೊಳಗೆ ಜಾಲಿವುಡ್ ಸ್ಟುಡಿಯೋ ಮಾಲೀಕರು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡುಬಿಟ್ಟರೇ? ಅಥವಾ ನ್ಯಾಯಾಲಯವು ಜಿಲ್ಲಾಡಳಿತದ ಆದೇಶಕ್ಕೆ ತಡೆಯಾಜ್ಞೆ ನೀಡಿತೇ? ಎರಡೂ ಆಗಿಲ್ಲ.
ಆಗಿದ್ದೇನು? ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕೃಪಾಕಟಾಕ್ಷ ಬಿಗ್ ಬಾಸ್ ಮನೆ ಮೇಲೆ ಬಿದ್ದಿದೆ. ಜಾಲಿವುಡ್ ಸ್ಟುಡಿಯೋಗೆ ಮತ್ತೊಂದು ಅವಕಾಶ ನೀಡುವಂತೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಡಳಿತಕ್ಕೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ಮಣಿದು ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋದ ಬೀಗ ತೆಗೆಯಲು ಮುಂದಾಗಿದ್ದಾರೆ.
ಹೇಳಿ ಕೇಳಿ, ರಾಮನಗರ ಜಿಲ್ಲೆ ಡಿ.ಕೆ ಶಿವಕುಮಾರ್ ಅವರ ಭದ್ರಕೋಟೆ. ಅದರಲ್ಲೂ, ಬಿಡದಿ ಪ್ರದೇಶವು ಅವರ ನೇರ ರಾಜಕೀಯದ ಭಾಗ. ಹೀಗಾಗಿ, ಅಲ್ಲಿನ ಚಟುವಟಿಕೆಗಳ ಮೇಲೆ ಡಿ,ಕೆ ಶಿವಕುಮಾರ್ ಅವರಿಗೆ ಹಿಡಿತವಿದೆ.
ಈ ಹಿಂದೆ, ಇದೇ ಡಿ.ಕೆ ಶಿವಕುಮಾರ್ ಅವರು ‘ಸಿನಿಮಾದವರು ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ಅವರ ನಟ್ಟು-ಬೋಲ್ಟು ಹೇಗೆ ಟೈಟ್ ಮಾಡಬೇಕು ಎಂಬುದು ನಮಗೂ ಗೊತ್ತಿದೆ’ ಎಂದಿದ್ದರು. ಬಿಗ್ ಬಾಸ್ ಮನೆ ಮುಚ್ಚುತ್ತಿದ್ದಂತೆಯೇ, ಅವರ ಈ ಹೇಳಿಕೆ ಮತ್ತೆ ವೈರಲ್ ಆಗಿತ್ತು.
ಡಿ.ಕೆ ಶಿವಕುಮಾರ್ ಅವರೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಬಿಗ್ ಬಾಸ್ ಮನೆಗೆ (ಜಾಲಿವುಡ್ ಸ್ಟುಡಿಯೋ) ಬೀಗ ಹಾಕಿಸಿದ್ದಾರೆ. ತಮ್ಮ ಅಧಿಕಾರದ ಪರಾಕ್ರಮ ತೋರಿಸಿದ್ದಾರೆ. ಸಿನಿಮಾ ಮಂದಿ ತಮ್ಮ ಎದುರು ಮಂಡಿಯೂರುವಂತೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈಗ, ಡಿ.ಕೆ ಶಿವಕುಮಾರ್ ಅವರೇ ಜಾಲಿವುಡ್ಗೆ ಅವಕಾಶ ನೀಡಲು ಸೂಚಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಧಾನಸೌಧ ಆಯ್ತು, ಇನ್ನು ರಾಜಭವನ ತೆರೆಯಲಿದೆ ಪ್ರವಾಸಿಗರ ವೀಕ್ಷಣೆಗೆ
ಸದ್ಯ, “ಖಾಸಗಿಯವರು ಹೂಡಿಕೆ ಮಾಡಿ ಏನೋ ತಪ್ಪು ಮಾಡಿರುತ್ತಾರೆ. ಅದನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಜಾಲಿವುಡ್ ಸ್ಟುಡಿಯೋಸ್ಗೆ ಇದೊಂದು ಬಾರಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಸರಿ ಮಾಡಿಕೊಳ್ಳಲು ಒಮ್ಮೆ ಅವಕಾಶ ಕೊಡಿ ಎಂದಿದ್ದೇನೆ. ಉದ್ಯೋಗ ಮುಖ್ಯ. ಜೊತೆಗೆ, ಮನೋರಂಜನೆ ಕೂಡ ಮುಖ್ಯ” ಎಂದು ಹೇಳಿದ್ದಾರೆ.
ಬೀಗ ಹಾಕಿದ ಮತ್ತು ತೆಗೆದ ನಡುವಿನ ಸಮಯದಲ್ಲಿ ಜಾಲಿವುಡ್ ಸ್ಟುಡಿಯೋ ಮಾಲೀಕರು ಮತ್ತು ಬಿಗ್ ಬಾಸ್ ಆಯೋಜಕರು ಡಿ.ಕೆ ಶಿವಕುಮಾರ್ ಅವರ ಮನೆಯ ಕದ ತಟ್ಟಿರಬಹುದು. ಮಾತುಕತೆ, ಮನವಿ ಇತ್ಯಾದಿಗಳು ನಡೆದಿರಬಹುದು ಎಂದು ಹೇಳಲಾಗುತ್ತಿದೆ.




