ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 19 ಮಂದಿ ಆತನ ಸಹಚರರನ್ನು ಬೆಂಗಳೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ನಟನ ಹಿಂದಿನ ಕರಾಳ ಮುಖಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.
ಮೈಸೂರಿನ ಪಬ್ನಲ್ಲಿ ಉದ್ಯಮಿ ಹಾಗೂ ಡಿಜೆಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ವಿಡಿಯೋವೊಂದು ಎಲ್ಲಡೆ ವೈರಲ್ ಆಗುತ್ತಿದೆ. ಈ ಘಟನೆಯು ಕಳೆದ ವರ್ಷ ಫೆ. 26ರಂದು ನಡೆದಿದೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಕಳೆದ ವರ್ಷ ಫೆ.26ರಂದು ದರ್ಶನ್ ಹಾಗೂ ಆತನ ಸಹಚರರು ಉದ್ಯಮಿ ಯಶವಂತ್ ಎಂಬುವವರ ಪಬ್ಗೆ ತನ್ನ ಪತ್ನಿಯ ಹುಟ್ಟುಹಬ್ಬ ಆಚರಿಸಲು ತೆರಳಿದ್ದ. ರಾತ್ರಿ 12. 30ರ ಸಮಯದಲ್ಲಿ ಯಶವಂತ್ ಡಿಜೆಗೆ ಆಗಷ್ಟೆ ಕೆಲವು ತಿಂಗಳ ಹಿಂದೆ ಮೃತಪಟ್ಟ ಪುನೀತ್ ರಾಜ್ಕುಮಾರ್ ಅವರ ಹಾಡುಗಳನ್ನು ನುಡಿಸಲು ಡಿಜೆ ಅವರಿಗೆ ತಿಳಿಸಿದ್ದಾರೆ. ಉದ್ಯಮಿ ಈ ರೀತಿ ಹೇಳಿರುವುದನ್ನು ಕೇಳಿ ದರ್ಶನ್ ಹಾಗೂ ಆತನ ಸಂಗಡಿಗರು ಕೋಪಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೊಲೀಸ್ ಭಾಷೆಯಲ್ಲಿ ದರ್ಶನ್ ವಿಚಾರಣೆ: ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಆರೋಪಿ ನಟ?
ಈ ಸಂದರ್ಭದಲ್ಲಿ ದರ್ಶನ್ ಹಾಗೂ ಆತನ ಸಂಗಡಿಗರು ತನ್ನ ಸಿನಿಮಾದ ಚಿತ್ರಗಳನ್ನು ಮಾತ್ರ ನುಡಿಸುವಂತೆ ಗಲಾಟೆ ಶುರು ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಗಲಾಟೆ ತಾರಕಕ್ಕೆ ಹೋಗಿದ್ದು, ದರ್ಶನ್ ಹಾಗೂ ಆತನ ಸಂಗಡಿಗರು ಯಶವಂತ್ ಹಾಗೂ ಡಿಜೆ ಮೇಲೆ ನಿಂದಿಸುವುದರ ಜೊತೆ ಬೆದರಿಕೆಯೊಡ್ಡುವುದಕ್ಕೆ ಶುರು ಮಾಡಿದ್ದಾರೆ. ಇವೆಲ್ಲವೂ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ಆತನ ಸಂಗಡಿಗರ ವಿರುದ್ಧ ದೂರು ದಾಖಲಾದರೂ ಎಫ್ಐಆರ್ ದಾಖಲಾಗಲಿಲ್ಲ.
ದರ್ಶನ್ ವಿರುದ್ಧದ ಹಳೆಯ ಪ್ರಕರಣಗಳು
- ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ದರ್ಶನ್ ವಿರುದ್ಧ 2011ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಅವರು 28 ದಿನ ಜೈಲಿನಲ್ಲಿದ್ದರು
- 2019ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಸಹ ನಟನ ಮೇಲೆ ದರ್ಶನ್ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ದೂರು ದಾಖಲಾಗಿರಲಿಲ್ಲ.
- 2021ರಲ್ಲಿ ಸಾಲ ಹಾಗೂ ವಂಚನೆ ಸಂಬಂಧ ನಿರ್ಮಾಪಕರೊಬ್ಬರು ಹಾಗೂ ದರ್ಶನ್ ನಡುವೆ ಆರೋಪ- ಪ್ರತ್ಯಾರೋಪ ನಡೆದಿತ್ತು
- ಮೈಸೂರಿನ ಹೋಟೆಲ್ ಸಿಬ್ಬಂದಿಯ ಮೇಲೆ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕರೊಬ್ಬರು ಆರೋಪಿಸಿದ್ದರು. ಪೊಲೀಸರು ಹೋಟೆಲ್ಗೆ ತೆರಳಿ ತನಿಖೆ ನಡೆಸಿದ್ದರು.
- 2023ರ ನವೆಂಬರ್ನಲ್ಲಿ ದರ್ಶನ್ ಮನೆಯ ಸಾಕು ನಾಯಿ ಮಹಿಳಾ ವಕೀಲರೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ಠಾಣಾ ಪೊಲೀಸರು ದರ್ಶನ್ಗೆ ನೋಟಿಸ್ ನೀಡಿದ್ದರು.
- ‘ಕಾಟೇರ’ ಸಿನಿಮಾ ಯಶಸ್ಸಿಗೆ ಸಂಬಂಧಿಸಿ ಬೆಂಗಳೂರಿನ ಜೆಟ್ಲ್ಯಾಗ್ ಪಬ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ದರ್ಶನ್ ಸೇರಿ ಹಲವರು ನಿಯಮ ಉಲ್ಲಂಘಿಸಿ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ್ದ ಆರೋಪವಿತ್ತು. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.





