‘ಲಕ್ಕಿ ಭಾಸ್ಕರ್’ ತರಹದ ಸಿನಿಮಾಗಳ ಅಪಾಯಗಳು

Date:

ಫೇಸ್‌ಬುಕ್‌ನಲ್ಲಿ ನಡೆದ ಕೆಲವು ಚರ್ಚೆಗಳ ಹಿನ್ನೆಲೆಯಲ್ಲಿ ನಿನ್ನೆ ‘ಲಕ್ಕಿ ಭಾಸ್ಕರ್’ ನೋಡಿದೆ. ಈವತ್ತಿನ ‘ನೈತಿಕತೆ’ಯ ಮಟ್ಟವನ್ನು 90ರ ದಶಕದ ನೈಜ ಘಟನೆಯೊಂದನ್ನು ಬಳಸಿಕೊಂಡು ಕನ್ವೀನಿಯಂಟಾಗಿ ಮುಂದಿಡುವ ಈ ಚಿತ್ರ ಈವತ್ತಿನ ಅರೆಬರೆ AI ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಅನ್ನಿಸಿತು.

90ರ ದಶಕದ ಆರಂಭದಲ್ಲಿ, ಸರ್ಕಾರದ ಸೆಕ್ಯುರಿಟಿಗಳ ಅಂತರ್ ಬ್ಯಾಂಕ್ ವ್ಯವಹಾರದಲ್ಲಿ ಮಧ್ಯೆ ತಲೆತೂರಿಸಿದ ದಳ್ಳಾಲಿಗಳು ಕಾಗದದ ಮೇಲೆ (ಬ್ಯಾಂಕರ್ ರಶೀದಿ-BR) ಈ ವ್ಯವಹಾರ ನಿಜಕ್ಕೂ ಆಗಿರುವಂತೆ ತೋರಿಸಿ, ಆ ಹಣವನ್ನು ಅಕ್ರಮವಾಗಿ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಊಹಾಪೋಹದ ವ್ಯಾಪಾರಗಳ ಮೂಲಕ ಅಂದಾದುಂದು ಲಾಭಗಳಿಸುವ ಆಟ ಆರಂಭಿಸಿದ್ದರು. ಸಾಮಾನ್ಯವಾಗಿ ಒಂದೆರಡು ವಾರಗಳಲ್ಲಿ ಹಿಂದಿರುಗಿಸುವ ನೂರಾರು ಬ್ಯಾಂಕುಗಳ ರೆಡಿಫಾರ್ವರ್ಡ್ ಡೀಲುಗಳನ್ನು ಮ್ಯಾನುವಲ್ ಆಗಿ ದಾಖಲಿಸಿಕೊಳ್ಳುವುದು ನಿಯಂತ್ರಕ ಸಂಸ್ಥೆಯಾದ ರಿಸರ್ವ್ ಬ್ಯಾಂಕಿಗೆ ಪ್ರಾಕ್ಟಿಕಲಿ ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಹರ್ಷದ್ ಮೆಹ್ತಾನಂತಹ ಖದೀಮರಿಗೆ ಹಾದಿ ಸಲೀಸಾಗಿತ್ತು. ಇದು ಎಲ್ಲಿಯ ತನಕ ಹೋಗಿತ್ತೆಂದರೆ, ಬ್ಯಾಂಕು ಭದ್ರತಾಪತ್ರ ಹೊಂದಿಲ್ಲದಿದ್ದರೂ BR ನೀಡಿದ ಘಟನೆಗಳಿದ್ದವು. ಕಡೆಗೆ ಹರ್ಷದ್ ವಿರುದ್ಧ 27 ಕ್ರಿಮಿನಲ್ ಪ್ರಕರಣಗಳು ದಾಖಲಾಗಿ, ಅವುಗಳಲ್ಲಿ 4ರಲ್ಲಿ ಶಿಕ್ಷೆ ಆಗಿತ್ತು. (ಈ ಘಟನೆಯ ಸಂಪೂರ್ಣ ವಿವರಗಳನ್ನು ನಾನು ಅನುವಾದಿಸಿದ “M ಡಾಕ್ಯುಮೆಂಟ್”ನಲ್ಲಿ ಸ್ವತಃ ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ| ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರು ದಾಖಲಿಸಿದ್ದಾರೆ.)

ಮ್ಯಾನುವಲ್ ಶ್ರಮದ ಅಗತ್ಯ ಇರುವಲ್ಲಿ ಸಕಾಲಕ್ಕೆ ಕೆಲಸ ಆಗದ ಕಾರಣಕ್ಕೆ ಸಂಭವಿಸಿದ ಈ ಲೋಪದ ಅಂತಿಮ ಫಲಶ್ರುತಿ ಎಂದರೆ, ಬ್ಯಾಂಕುಗಳ ಕಂಪ್ಯೂಟರೀಕರಣಕ್ಕೆ ವೇಗ ದೊರೆತದ್ದು ಮತ್ತು ಅಮೆರಿಕಕ್ಕಿಂತಲೂ ಮೊದಲೇ ಭಾರತದಲ್ಲಿ ಸ್ಟಾಕ್‌ಮಾರುಕಟ್ಟೆ “ರಿಯಲ್ ಟೈಮ್”ಗೆ ಡಿಜಿಟಲೀಕರಣಗೊಂಡದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೇಲೆ ವಿವರಿಸಿದ ವಂಚನೆಯ ಕಥೆಯ ಎಳೆ ಹಿಡಿದುಕೊಂಡು, ಕಾನೂನು ಪುಸ್ತಕದ ನಿಯಮಗಳಿಗೆ ಧಕ್ಕೆ ಆಗದಂತೆ ಯಾವುದೇ ವಂಚನೆ ನಡೆದರೆ, ಸಿಕ್ಕಿ ಬೀಳದಿದ್ದರೆ ‘ತೊಂದರೆ ಇಲ್ಲ’ ಎಂದು ಬಿಂಬಿಸುವ ಈ ಚಿತ್ರ, ಈವತ್ತಿನ ಸಾರ್ವಜನಿಕ ‘ನೈತಿಕತೆ’ಯ ದರ್ಜೆಯ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ, ರಿಗ್ರೆಸಿವ್ ಮತ್ತು ನೋಡುಗರಲ್ಲಿ ಕಳ್ಳತನದ ಕಿಕ್ಕಿಗೆ, ಮತ್ತಿಗೆ-ಗಮ್ಮತ್ತಿಗೆ ‘ಅಡ್ರೀನಾಲಿನ್’ ಪಂಪ್ ಮಾಡುವಂತಹ ಚಿತ್ರ.

ಈ ವರದಿ ಓದಿದ್ದೀರಾ?: ಬಿಜೆಪಿ ಭಿನ್ನಮತ ಶಮನವಾಗದಿರಲು ಬಿ ಎಲ್ ಸಂತೋಷ್ ಕಾರಣವೇ?

ಇಂದು ನಾವು ಮತ್ತೆ ಅಂತಹದೇ ಸ್ಥಿತಿಯಲ್ಲಿದ್ದೇವೆ. AI/ಡೇಟಾ ಮೈನಿಂಗ್ ಆಧರಿತ ನಿರ್ಧಾರಗಳ ಜಗತ್ತಿನಲ್ಲಿ ಕಳ್ಳತನಕ್ಕೆ ಮತ್ತೆ ನೂರಾರು ಹೊಸ ಹಾದಿಗಳನ್ನು ‘ಮನುಷ್ಯ ಬುದ್ಧಿವಂತಿಕೆ’ ತೆರೆದುಕೊಂಡಿದೆ. ಹಿಂದೆ ಅತಿಯಾದ ದುಡ್ಡು ಹರಿದಾಡಿದರೆ ಅದೇಕೆ ಹಾಗೆ ಎಂದು ಪರಿಶೀಲಿಸಬಲ್ಲ ನಿಯತ್ತು, ಕಾನೂನು ಪಾಲನೆಯ ನೈತಿಕತೆ ಇತ್ತು. ಇಂದು ಮೂಲಭೂತ ಸಾಂವಿಧಾನಿಕ ಸಂಗತಿಗಳಲ್ಲಿ ಲೋಪಗಳನ್ನು ಎತ್ತಿ ತೋರಿಸಿದಾಗಲೂ ‘ಹಾಗಾಗಿರಬಹುದೇ?’ ಎಂದು ಯೋಚಿಸುವ ನೈತಿಕತೆಯೂ ಆಳುವವರಲ್ಲಿ ಉಳಿದಿಲ್ಲ. ಅವರು ಆಗಿರುವುದನ್ನು ಶತಾಯಗತಾಯ ತಮ್ಮ ಪರವಾಗಿ ಸಮರ್ಥಿಸಿಕೊಳ್ಳುವುದರಲ್ಲೇ ತಮ್ಮ ಶ್ರಮ ತೊಡಗಿಸುವುದರಲ್ಲಿ ನಿರತರು. ಅದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಕೆಲ ಸಮಯಗಳಿಂದ ಚರ್ಚೆ ಆಗುತ್ತಿರುವ EVM-VVPAT ಅಕ್ರಮದ ಸಾಧ್ಯತೆಗಳು. ಇಲ್ಲೀಗ ಮಾಲು ಸಮೇತ ಸಿಕ್ಕಿಬೀಳುವ ತನಕ ಎಲ್ಲರೂ ಹರ್ಷದ್ ಮೆಹ್ತಾನ ಹಾಗೆ, ಈ ಚಿತ್ರದ ನಾಯಕನ ಹಾಗೆ ಹೀರೋಗಳೇ!!

ಈ ಕಾರಣಕ್ಕಾಗಿ ಅತ್ಯಂತ ಅಪಾಯಕಾರಿ ಸಿನಿಮಾ ಇದು. ‘ಅಡ್ರೀನಾಲಿನ್’ ಪಂಪ್ ಮಾಡಿಕೊಳ್ಳದೇ ಎಚ್ಚರಿಕೆಯಿಂದ ನೋಡುವುದಿದ್ದರೆ ಮಾತ್ರ ಒಮ್ಮೆ ನೋಡಬಹುದಾದ ಸಿನಿಮಾ ಇದು.

90ರ ದಶಕವನ್ನು ಚಿತ್ರಿಸಲು ಸಿನಿಮಾ ಹಾಕಿದ ಶ್ರಮವೊಂದೇ ಚಿತ್ರದಲ್ಲಿ ನನ್ನ ಮಟ್ಟಿಗೆ ಪಾಸಿಟಿವ್ ಅಂಶ. ಮೂಲ ತೆಲುಗು ಚಿತ್ರದ ನಿರ್ದೇಶಕರು ವೆಂಕಿ ಅಟ್ಲೂರಿ. (ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.)

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...