ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದ್ದ ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ಹೊರಡಿಸಿದ್ದು, “ಕಾನೂನಿಗೆ ಎಲ್ಲರೂ ಸಮಾನರು; ಯಾರೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಸ್ಪಷ್ಟಪಡಿಸಿದೆ. ವಿಶೇಷ ಸವಲತ್ತುಗಳು ಜೈಲು ಶಿಸ್ತಿಗೆ ಧಕ್ಕೆ ತರುವುದರ ಜೊತೆಗೆ ಇತರ ಕೈದಿಗಳೂ ಅದೇ ಬೇಡಿಕೆ ಇಡುವ ಸಾಧ್ಯತೆಯಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜೈಲು ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಕಳೆದ ವರ್ಷ ಡಿಸೆಂಬರ್ 29 ಮತ್ತು ಜನವರಿ 12ರಂದು 57ನೇ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶಗಳಿಗೆ ತಡೆ ನೀಡಿದೆ. ಮೂಲ ಆದೇಶದಲ್ಲಿ ಪವಿತ್ರಾ ಗೌಡ ಅವರಿಗೆ ಪ್ರತಿದಿನ ಮನೆ ಊಟ ನೀಡುವಂತೆ ಹೇಳಲಾಗಿತ್ತು; ಪೊಲೀಸ್ ಮೇಲ್ಮನವಿ ಬಳಿಕ ಅದನ್ನು ವಾರಕ್ಕೊಮ್ಮೆಗೆ ಕಡಿಮೆಗೊಳಿಸಲಾಗಿತ್ತು.





