ತೀವ್ರ ವಿವಾದಕ್ಕೆ ಕಾರಣವಾಗಿರುವ ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಅರ್ಜಿಯ ವಿಚಾರಣೆ ಸಂಪೂರ್ಣವಾಗಿ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ಚಿತ್ರತಂಡಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಅರ್ಜಿದಾರರು ವ್ಯಕ್ತಪಡಿಸಿರುವ ಕಳವಳವು “ಬಹುಶಃ ನೈಜವಾಗಿದೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಈ ವಿಷಯದ ಕುರಿತು ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವವರೆಗೆ ಕಾಯುವಂತೆ ನಿರ್ಮಾಪಕರಿಗೆ ಸೂಚಿಸಿದೆ.
ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಮತ್ತು ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರವು ಫೆಬ್ರವರಿ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿತ್ತು. ಆದರೆ, ಚಿತ್ರದಲ್ಲಿ ಭಾರತೀಯ ಮುಸ್ಲಿಮರನ್ನು ಬಿಂಬಿಸಿರುವ ರೀತಿ ಮತ್ತು ಉತ್ಪ್ರೇಕ್ಷಿತ ಅಂಶಗಳ ಕಾರಣಕ್ಕಾಗಿ ಚಿತ್ರವು ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನು ಓದಿದ್ದೀರಾ? ’ನ್ಯಾಯಾಂಗವನ್ನು ದೂಷಿಸಲು ಯಾರಿಗೂ ಬಿಡೆವು’: ಎನ್ಸಿಇಆರ್ಟಿ ಪಠ್ಯದ ವಿರುದ್ಧ ಸಿಜೆಐ ಆಕ್ರೋಶ
ಜೀವಶಾಸ್ತ್ರಜ್ಞ ಶ್ರೀದೇವ್ ನಂಬೂದಿರಿ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಚಿತ್ರವು ಕೇರಳ ರಾಜ್ಯವನ್ನು “ದುರುದ್ದೇಶಪೂರಿತ”ವಾಗಿ ಬಿಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಚಿತ್ರದ ಬಿಡುಗಡೆ ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಚಿತ್ರತಂಡಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. “ನಿಮಗೆ ವಾದ ಮಂಡಿಸಲು ನಾನು ಸಾಕಷ್ಟು ಸಮಯಾವಕಾಶ ನೀಡುತ್ತೇನೆ. ಆದರೆ, ವಿಚಾರಣೆ ಬಾಕಿ ಇರುವಾಗ ಚಿತ್ರವನ್ನು ಬಿಡುಗಡೆ ಮಾಡಬೇಡಿ. ವಿಚಾರಣೆ ಮುಕ್ತಾಯಗೊಂಡು, ಅರ್ಜಿಗಳ ಮೇಲೆ ನ್ಯಾಯಾಲಯವು ತೀರ್ಪು ನೀಡುವವರೆಗೆ ಕಾಯಿರಿ,” ಎಂದು ಸೂಚಿಸಿದ್ದಾರೆ.
ಇದಕ್ಕೂ ಮುನ್ನ, ಪ್ರಕರಣದ ಆಳ ತಿಳಿಯಲು ಖುದ್ದಾಗಿ ಚಿತ್ರವನ್ನು ವೀಕ್ಷಿಸಲು ನ್ಯಾಯಾಲಯ ಸಿದ್ಧವಿತ್ತು. ಆದರೆ, ನ್ಯಾಯಪೀಠಕ್ಕೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲು ಚಿತ್ರತಂಡವು ಹಿಂದೇಟು ಹಾಕಿತ್ತು ಎಂದು ವರದಿಯಾಗಿದೆ





