ನಿನ್ನೆ (ಜ.೨೩) ಬಿಡುಗಡೆಯಾದ ‘ಲ್ಯಾಂಡ್ಲಾರ್ಡ್’ ಕನ್ನಡ ಸಿನೆಮಾ ಕೇವಲ ಮನರಂಜನೆಗಷ್ಟೇ ಸೀಮಿತವಾಗದೇ, ಸಮಾಜದಲ್ಲಿ ಅಡಗಿರುವ ಅನ್ಯಾಯಗಳನ್ನು ಪ್ರಶ್ನಿಸುವ ಧೈರ್ಯಶಾಲಿ ಪ್ರಯತ್ನವಾಗಿದೆ. ಸಮಾನತೆ, ಮಾನವನ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡಿರುವ ಈ ಚಿತ್ರ, ಇಂದಿನ ಕಾಲಕ್ಕೂ ಅತೀ ಮುಖ್ಯ ಎನ್ನಿಸುವ ಭೂಮಿ ಮತ್ತು ಮನುಷ್ಯನ ಸಂಬಂಧವನ್ನು ಗಾಢವಾಗಿ ಚಿತ್ರಿಸುತ್ತದೆ.
ಈ ಸಿನಿಮಾದ ಜೀವಾಳವೇ “ಭೂಮಿ ಅನ್ನೋದು ಮನುಷ್ಯನ ಘನತೆ” ಎಂಬ ಆಲೋಚನೆ. ತಾಯಿಯ ಆಶಯವನ್ನು ಈಡೇರಿಸಲು ತುಂಡು ಭೂಮಿಗಾಗಿ ಹೋರಾಡುವ ಮುಖ್ಯ ಪಾತ್ರ ರಾಚಯ್ಯನದ್ದು, ಊರಿನ ಫ್ಯೂಡಲ್ ವ್ಯವಸ್ಥೆ ಮತ್ತು ಜಮೀನ್ದಾರರ ದರ್ಪವನ್ನು ಎದುರಿಸುವ ಪಾತ್ರ, ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಪಾಳೆಗಾರ ಸಂಸ್ಕೃತಿಯನ್ನು ಬಿಚ್ಚಿಡುತ್ತದೆ. ಇಲ್ಲಿ ಪ್ರಶ್ನಿಸಲಾಗುವುದು ಕೇವಲ ಭೂಮಿಯ ಸ್ವಾಮ್ಯವಲ್ಲ, ಬದಲಾಗಿ ಯಾವ ಕಾನೂನು ನಮ್ಮನ್ನಾಳಬೇಕು ಅನ್ನೋದು? ಸಂವಿಧಾನವೋ ಅಥವಾ ಊರನ್ನಾಳುವ ಜಮೀನ್ದಾರರ ಅಘೋಷಿತ ನಿಯಮಗಳೋ ಎಂಬ ಗಂಭೀರ ಪ್ರಶ್ನೆ ಇದರಲ್ಲಿದೆ.
ಈ ಚಿತ್ರವು ಸಂವಿಧಾನವನ್ನು ಕೇವಲ ಪುಸ್ತಕದ ಮಾತಾಗಿಯಷ್ಟೇ ಉಳಿಸದೆ, ಅದು ಸಾಮಾನ್ಯ ಜನರ ಬದುಕಿಗೆ ಹೇಗೆ ನೆರಳಾಗಬಲ್ಲದು ಎಂಬುದನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ರಾಚಯ್ಯನ ಹೋರಾಟದಲ್ಲಿ ನಮಗೆ ಕಾಣಿಸುವುದು ಕೇವಲ ಒಬ್ಬ ವ್ಯಕ್ತಿಯ ಹಠವಲ್ಲ, ಬದಲಾಗಿ ಅದೊಂದು ಮೌಲ್ಯಯುತವಾದ ಪ್ರತಿರೋಧವಾಗಿ. ಈ ಅರ್ಥದಲ್ಲಿ ‘ಲ್ಯಾಂಡ್ ಲಾರ್ಡ್’ Political and progressive ಆಲೋಚನೆ ಹೊಂದಿರುವ ಸಿನೆಮಾ.

ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಚಿತ್ರದಲ್ಲಿ ದೇವದಾಸಿ ಪದ್ಧತಿಯ ಉಲ್ಲೇಖ. ಈ ಪುರಾತನ ಪದ್ಧತಿ ಹೇಗೆ ಮಹಿಳೆಯನ್ನು ಶೋಷಣೆಯ ವಸ್ತುವಾಗಿಸಿತ್ತು ಎಂಬುದನ್ನು ಸಿನಿಮಾ ಸಂವೇದನಾಶೀಲವಾಗಿ, ದೃಢವಾಗಿ, ಖಚಿತವಾಗಿ ಎತ್ತಿ ತೋರಿಸುತ್ತದೆ. ಜೊತೆಗೆ, ಸ್ತ್ರೀ ಸ್ವಾತಂತ್ರ್ಯ ಮತ್ತು ಗೌರವವನ್ನು ಪ್ರತಿಪಾದಿಸುವ ದೃಶ್ಯಗಳು ಮನಮುಟ್ಟುತ್ತವೆ. ಇಲ್ಲಿ ಮಹಿಳಾ ಪಾತ್ರಗಳು ಕೇವಲ ಸಹಾಯಕ ಪಾತ್ರಗಳಾಗಿ ಉಳಿಯದೇ, ಕಥೆಯ ನೈತಿಕ ಶಕ್ತಿಯಾಗಿ ಮೂಡಿಬರುತ್ತವೆ.
ನಿರ್ದೇಶಕ Jadesh Kumar Hampi ಅವರಿಗಂತೂ ಬಿಗ್ ಸೆಲ್ಯೂಟ್. ಯಾವುದೇ ಅತಿರೇಕವಿಲ್ಲದೆ, ವಿಷಯದ ಗಂಭೀರತೆಯನ್ನು ಪ್ರಾಮಾಣಿಕವಾಗಿ ಹಿಡಿದಿಟ್ಟಿರುವ ಶೈಲಿ, ಕನ್ನಡ ಸಿನೆಮಾ ರಂಗಕ್ಕೆ ಹೊಸ ಭರವಸೆಯನ್ನು ಮೂಡಿಸುತ್ತದೆ.
ಈ ಸಿನಿಮಾದಲ್ಲಿ Duniya Vijay ಅವರ ನಟನೆ ಅದ್ಭುತ. ರಾಚಯ್ಯನ ಪಾತ್ರಕ್ಕೆ ಅವರು ತುಂಬಿರುವ physical language, ನೋವು, ಕೋಪ, ಹಠ, ಆಕ್ರೋಶ ಎಲ್ಲವೂ extraordinary. ರಾಜ್ ಬಿ ಶೆಟ್ಟಿ ಅವರ ಅಭಿನಯವೂ ಅದ್ಭುತ ಮತ್ತು ಪರಿಣಾಮಕಾರಿ ಮೂಡಿ ಬಂದಿದೆ. ರಚಿತಾ ರಾಮ್ ಅವರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಮಾಶ್ರೀ ಅವರ ಅಭಿನಯ ಎಂದಿನಂತೆ ಅಮೋಘ.
ಈ ಸಿನಿಮಾದಲ್ಲಿ ವಿಶೇಷವಾಗಿ ಗಮನಸೆಳೆಯುವುದು ದುನಿಯಾ ವಿಜಯ್ ಅವರ ಮಗಳ ಪಾತ್ರ. ಅವರು ದುನಿಯಾ ವಿಜಯ್ ಅವರ ಸ್ವಂತ ಮಗಳು ಕೂಡ. ಇದು ಅವರ ಮೊದಲ ಸಿನಿಮಾ ಅನ್ನುವುದನ್ನು ಮರೆಸುವಷ್ಟು ಆತ್ಮವಿಶ್ವಾಸ ಮತ್ತು ಸಹಜತೆ ಅವರ ನಟನೆಯಲ್ಲಿ ಕಂಡುಬರುತ್ತದೆ. ದೇವಿ ಪಾತ್ರ ಮಾಡಿರುವ ನಟನಿಗೆ ಉತ್ತಮ ಭವಿಷ್ಯವಿದೆ. ಮಾಸ್ತಿ ಅವರ ಡೈಲಾಗ್ಸ್ ಅಂತೂ ಕಾಟೇರಾ ಸಿನೆಮಾಗಿಂತಲೂ ಚೆನ್ನಾಗಿದೆ.
‘ಲ್ಯಾಂಡ್ ಲಾರ್ಡ್’ ಒಂದು ಸಮಾಜಮುಖಿ, ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವ ಮತ್ತು ಮಾನವ ಘನತೆಯ ಪರ ನಿಲ್ಲುವ ಸಿನೆಮಾ. ಇದು ಕೇವಲ ಒಂದು ಕಥೆಯಲ್ಲ, ಒಂದು ಪ್ರಶ್ನೆ, ಒಂದು ಎಚ್ಚರಿಕೆ ಮತ್ತು ಒಂದು ಎತ್ತರದ ಉದಾತ್ತ ಆಶಯ. ಕನ್ನಡ ಸಿನೆಮಾ ಪ್ರೇಕ್ಷಕರೆಲ್ಲರೂ ತಪ್ಪದೇ ನೋಡಬೇಕಾದ ಸಿನೆಮಾ.
-ರುದ್ರು ಪುನೀತ್ (ಫೇಸ್ಬುಕ್ ಬರಹ)





