- ʼಆದಿಪುರುಷ್ʼ ಸಿನಿಮಾ ನಿಷೇಧಿಸುವಂತೆ ಬಲಪಂಥೀಯರ ಆಗ್ರಹ
- ಹನುಮಂತನ ಪಾತ್ರಕ್ಕೆ ಆಕ್ಷೇಪಾರ್ಹ ಸಂಭಾಷಣೆ ಬರೆದಿರುವ ಮನೋಜ್
ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ ʼಆದಿಪುರುಷ್ʼ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ದೇಶಾದ್ಯಂತ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಬಲಪಂಥೀಯ ಸಂಘಟನೆಗಳು ಪಟ್ಟು ಹಿಡಿದಿವೆ. ಇದೇ ವೇಳೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಿತ್ರ ಸಾಹಿತಿ ಮನೋಜ್ ಮುಂತಾಶಿರ್ಗೆ ಜೀವ ಬೆದರಿಕೆ ಎದುರಾಗಿದ್ದು, ಮುಂಬೈ ಪೊಲೀಸರು ಅಗತ್ಯ ಭದ್ರತೆ ಒದಗಿಸಿದ್ದಾರೆ.
ʼಆದಿಪುರುಷ್ʼ ಚಿತ್ರದಲ್ಲಿರುವ ಹನುಮಂತನ ಪಾತ್ರಕ್ಕೆ “ಕಪಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಜಲೇಗಿ ಭೀ ತೆರೆ ಬಾಪ್ ಕಿ” ಎಂಬ ಕೀಳು ಮಟ್ಟದ ಸಂಭಾಷಣೆಗಳನ್ನು ಮನೋಜ್ ಬರೆದಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಚಿತ್ರದ ಪ್ರದರ್ಶನವನ್ನು ವಿರೋಧಿಸಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ʼಕ್ಷತ್ರೀಯ ಕರ್ಣಿ ಸೇನಾʼ ಸಂಘಟನೆಯ ಮುಂಖಡ ರಾಜ್ ಶೇಖಾವತ್ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದಾರೆ. ʼಆದಿಪುರುಷ್ʼ ಚಿತ್ರತಂಡ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ಚಿತ್ರದ ನಿರ್ದೇಶಕ ಓಂ ರಾವತ್ ಮತ್ತು ಸಂಭಾಷಣೆಕಾರ ಮನೋಜ್ ಮುಂತಾಶಿರ್ ಇಬ್ಬರನ್ನೂ ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಹನುಮಂತ ಮತ್ತು ರಾವಣನ ಕುರಿತ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಹಲವು ಬಲಪಂಥೀಯರು ಮನೋಜ್ಗೆ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಬೆದರಿಕೆ ಸಂದೇಶಗಳು ಮತ್ತು ಕರೆಗಳು ಬಂದ ಬೆನ್ನಲ್ಲೇ ಭದ್ರತೆ ಕೋರಿ ಮನೋಜ್ ಮುಂಬೈ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಚಿತ್ರ ಸಾಹಿತಿಯ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆದಿಪುರುಷ್ ಚಿತ್ರದಲ್ಲಿ ತಾವು ಬರೆದ ಸಂಭಾಷಣೆಗಳು ವಿವಾದಕ್ಕೆ ಸಿಲುಕುತ್ತಲೇ ಎಚ್ಚೆತ್ತುಕೊಂಡ ಮನೋಜ್, ಆಕ್ಷೇಪಾರ್ಹ ಸಂಭಾಷಣೆಗಳನ್ನು ಒಂದು ವಾರದ ಒಳಗಾಗಿ ಸಿನಿಮಾದಿಂದ ತೆಗೆದು ಹಾಕಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಹಿಂದೂಗಳ ಕ್ಷಮೆಯಾಚಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸದಂತೆಯೂ ಮನವಿ ಮಾಡಿದ್ದರು.





