ಮಾರಿ ಸೆಲ್ವರಾಜ್ ಇಲ್ಲಿ ಕೇವಲ ಜಾತಿ ಸಂಘರ್ಷವನ್ನೇ ಹೈಲೈಟ್ ಮಾಡಲು ಹೊರಟಿದ್ದಾರೆ ಎಂದಲ್ಲ. ಮಧ್ಯಮ ಮಾರ್ಗ ಹಿಡಿದಿದ್ದಾರೆ. ಉದಾಹರಣೆಗೆ, ಕಬಡ್ಡಿ ಆಟದಲ್ಲಿ ಸಾಧನೆಯ ಮೆಟ್ಟಿಲುಗಳನ್ನೇರಲು ದಲಿತ ಸಮುದಾಯದ ಕಿಟ್ಟಾನ್ಗೆ ಇತರ ಸಮುದಾಯದವರೂ ನೆರವಾಗುತ್ತಾರೆ.
ತಳಸಮುದಾಯದ ಸಾಧಕನೊಬ್ಬನ ಸಾಧನೆಯ ಪಯಣ ಅದು ಸುಮ್ಮನೆ ನಡೆಯುವ ಸಲೀಸು ಯಾನವಲ್ಲ. ಸ್ವಲ್ಪ ಯಾಮಾರಿದರೂ ಆತನ ಬದುಕು ನರಕವಾಗಿ ಬಿಡುತ್ತದೆ. ಮಾರಿ ಸೆಲ್ವರಾಜ್ ನಿರ್ದೇಶನದ ಮತ್ತು ಪ.ರಂಜಿತ್ ನಿರ್ಮಾಣದ, ಧ್ರುವ ವಿಕ್ರಮ್ (‘ಸೇತು’, ‘ಅನ್ನಿಯನ್’ ಖ್ಯಾತಿ ನಟ ವಿಕ್ರಮ್ ಪುತ್ರ) ನಟನೆಯ ‘ಬೈಸನ್ ಕಾಳಮಾಡನ್’ ಸಿನಿಮಾ ತಳ ಸಮುದಾಯದ ಸಾಧಕನೊಬ್ಬನ ಅಂತಹ ಬದುಕನ್ನು ಹಿಡಿದಿಡುತ್ತದೆ. ಹ್ಞಾಂ, ಇಷ್ಟೇ ಅಂದರೆ ಅದು ಅಕ್ಷರಶಃ ಚಿತ್ರದ ತಪ್ಪು ನಿರೂಪಣೆಯಾಗುತ್ತದೆ.
ಚಿತ್ರ ಅದರಾಚೆ, ಅದರ ನೂರು ಗಜದಾಚೆ ಏನೇನನ್ನೊ ಹೇಳುತ್ತದೆ?- ಆ ಕೂಗನ್ನು ಚಿತ್ರ ನೋಡಿಯೇ ಅನುಭವಿಸಬೇಕು.
ಆರಂಭದ ದೃಶ್ಯವೊಂದರಲ್ಲಿ ಶಾಲಾ ಬಾಲಕ (ನಾಯಕ ನಟ) ಕಿಟ್ಟಾನ್ (ಧ್ರುವ ವಿಕ್ರಮ್) ತನ್ನ ತರಗತಿಯಲ್ಲಿ, ಇತರೆ ಮಕ್ಕಳು ಪ್ರಾರ್ಥನೆಗೆ ಹೋಗಿರುವ ವೇಳೆಯಲ್ಲಿ ಹತ್ತಾರು ಊಟದ ಡಬ್ಬಿಗಳನ್ನು ಓಪನ್ ಮಾಡಿ ಗಬಗಬ ತಿನ್ನುತ್ತಿರುತ್ತಾನೆ. ಆಗ ಪಿಟಿ ಮಾಸ್ಟರ್ಗೆ ಸಿಕ್ಕಿ ಬೀಳುವ ಆತನ ಬದುಕು ಅಲ್ಲಿಂದ ಬದಲಾಗುತ್ತದೆ. ಪಿಟಿ ಮಾಸ್ಟರ್ ಆತನ ತಪ್ಪಿಗೆ ಮೈದಾನ ಪೂರ್ತಿ ಓಡಲು ಹೇಳುತ್ತಾರೆ. ಓಡಲು ಆರಂಭಿಸುವ ಕಿಟ್ಟಾನ್ ಓಟವನ್ನು ನಿಲ್ಲಿಸುವುದೇ ಇಲ್ಲ! ಇಲ್ಲಿ ಓಟವು ಒಂದು ರೂಪಕ. ಓಟ ಅದು ಆ ಮೈದಾನದ ಓಟವಲ್ಲ. ತಳ ಸಮುದಾಯದ ಸಾಧಕನೊಬ್ಬನ ಬದುಕಿನ ಓಟ. ಕೊನೆಗೆ ಪಿಟಿ ಮಾಸ್ಟರ್ ಓಡುವುದನ್ನು ನಿಲ್ಲಿಸುವಂತೆ ಹೇಳಿ ಆತನ ಆ ಹಸಿವು ಅರಿಯುತ್ತಾರೆ. ಆತನ ಆ ಹಸಿವು ಅದು ಆತನ ಕಬಡ್ಡಿ ಆಟದ ಹಸಿವು.

ಕಿಟ್ಟಾನ್ ಅಪ್ಪ (ನಟ ಪಶುಪತಿ) ಕಬಡ್ಡಿಗೆ ವಿರುದ್ಧ. ಹಾಗಂತ ಆತ ಆ ಆಟದ ವಿರುದ್ಧವಲ್ಲ. ಊರಿನ ಪರಿಸ್ಥಿತಿಗಳು ಹಾಗೆ ಮಾಡುತ್ತವೆ. ಕತೆ ನಡೆಯುವ ಕಾಲ 1985ರಿಂದ 1995ರ ದಶಕ. ಸ್ಥಳ ದಕ್ಷಿಣ ತಮಿಳುನಾಡು. ಆ ದಶಕ ಕೇವಲ ತಮಿಳುನಾಡು ಅಷ್ಟೇ ಅಲ್ಲ, ದೇಶದ ಉದ್ದಗಲಕ್ಕೂ ದಲಿತರು ಮತ್ತು ಪ್ರಬಲ ಜಾತಿಗಳ ನಡುವಿನ ಹೋರಾಟದ ಯುಗ. ಚಿತ್ರ ನೋಡುತ್ತ ಬಹುಶಃ ನಮ್ಮ ನಮ್ಮ ಪ್ರದೇಶಗಳಲ್ಲಿನ ಅಂತಹ ಚಳವಳಿಗಳನ್ನು ನಾವು ನೆನಪಿಸಿಕೊಳ್ಳಬಹುದು. ಅಂತಹ ಜಾತಿ ಸಂಘರ್ಷದ ಯುಗದಲ್ಲಿ ದಲಿತರ ಪರ ಪಾಂಡ್ಯರಾಜಾ(ನಟ ಅಮೀರ್) ಮತ್ತು ಪ್ರಬಲ ಜಾತಿಗಳ ಪರ ಕಂದಸಾಮಿ (ನಟ ಲಾಲ್) ಈರ್ವರ ಗುಂಪು ಪರಸ್ಪರ ಭೀಕರ ಸಂಘರ್ಷಕ್ಕಿಳಿಯುತ್ತವೆ. ಅಕ್ಷರಶಃ ಹಿಂಸಾತ್ಮಕ ಸಂಘರ್ಷ. ಅಂತಹ ಜಾತಿ ಸಂಘರ್ಷಕ್ಕೆ ಸಿಲುಕಿ ದಲಿತ ಸಮುದಾಯದ ಕಬಡ್ಡಿ ಆಟಗಾರನೊಬ್ಬ ಸಾವಿಗೀಡಾಗುತ್ತಾನೆ. ಅದನ್ನು ಕಣ್ಣಾರೆ ಕಂಡಿದ್ದ ಅಪ್ಪ ವೇಲುಸಾಮಿ ತನ್ನ ಮಗನಿಗೂ ಆ ಪರಿಸ್ಥಿತಿ ಬಾರದಿರಲಿ ಎಂದು ಕಬಡ್ಡಿಗೆ ಹೋಗದಂತೆ ಮಗನನ್ನು ತಡೆಯುತ್ತಿರುತ್ತಾನೆ.
ಇದನ್ನೂ ಓದಿರಿ: SVR @ 50: ರುಚಿಶುದ್ಧ ರಂಜನೆಯ ಚಿತ್ರಗಳ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ (ಬಾಬು)
ಜಾತಿ ದ್ವೇಷವನ್ನು ಚಿತ್ರ ಯಾವ ಬಗೆಯಲ್ಲಿ ಕಟ್ಟಿಕೊಡುತ್ತದೆ ಎಂಬುದನ್ನು ನೋಡಬೇಕು. ಯಾಕೆಂದರೆ ಭಾರತದ ಶಿಷ್ಟಾಚಾರದ ಸಮಾಜದಲ್ಲಿ ಜಾತಿ ಸಂಘರ್ಷ ನಡೆಯುತ್ತಿದ್ದರೂ ಅದರ ಬಗ್ಗೆ ಮಾತಾಡಬಾರದು ಎಂಬ ಪೊಳ್ಳು ನಿಯಮವಿದೆ. ಮಾತಾಡಿದವ ಜಾತಿವಾದಿ, ಅಕ್ಷರಶಃ ಜಾತಿ ದೌರ್ಜನ್ಯ ನಡೆಸುವವ, ಆದರೆ ಅದರ ಬಗ್ಗೆ ಬಾಯ್ಬಿಡದವ ಉತ್ತಮ ಮನುಷ್ಯ ಎಂಬ ಅಘೋಷಿತ ನಿರ್ಧಾರ ಸಮಾಜದಲ್ಲಿದೆ. ಈ ನಿಟ್ಟಿನಲ್ಲಿ ಯಥಾಪ್ರಕಾರ ಮಾರಿ ಸೆಲ್ವರಾಜ್ ಅದನ್ನು ಬ್ರೇಕ್ ಮಾಡುತ್ತಾರೆ. ಹಾಗಿದ್ದರೆ ಯಾವ ರೀತಿ? ಉದಾಹರಣೆಗೆ, ದೃಶ್ಯವೊಂದರಲ್ಲಿ ಕಿಟ್ಟಾನ್ನ ಕುಟುಂಬ ಮನೆ ದೇವರಾದ ಕಾಳಮಾಡನಿಗೆ ಬಲಿಕೊಡಲು ಆಡು ಬಿಟ್ಟು, ಅದನ್ನು ಬಸ್ನಲ್ಲಿ ಕೊಂಡೊಯ್ಯುತ್ತಿರುತ್ತದೆ. ಆಗ ಆ ಆಡುಮರಿ ಅಕಸ್ಮಾತ್ ಕಾಲು ತುಳಿಯಿತು ಎಂಬ ಸಣ್ಣ ಕಾರಣಕ್ಕೆ ಪ್ರಬಲ ಜಾತಿ ಜನರ ಗುಂಪು ಆ ಇಡೀ ಆಡುಮರಿಯನ್ನು ಚುಚ್ಚಿ ಚುಚ್ಚಿ ಸಾಯಿಸುತ್ತದೆ!
ಮತ್ತೊಂದು ದೃಶ್ಯ: ಪ್ರಬಲ ಜಾತಿಗೆ ಸೇರಿದ ಪಿಟಿ ಮಾಸ್ಟರ್ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಕಿಟ್ಟಾನ್ನನ್ನು ಸ್ಕೂಟರ್ ಹಿಂದೆ ಕೂರಿಸಿಕೊಂಡು ಹೋಗುತ್ತಿರುತ್ತಾರೆ. ಆಗ ಎದುರಾಗುವ ಜಾತಿ ಜನ “ಸ್ಕೂಟರ್ ಹಿಂದೆ ಕುಳಿತಿರುವ ಅವ ಯಾರು?” ಎನ್ನುತ್ತ ಇದ್ದಕ್ಕಿದ್ದಂತೆ ಹಲ್ಲೆಗೆ ಮುಂದಾಗುತ್ತಾರೆ! ಇಂತಹ ಮತ್ತಷ್ಟು ಜಾತಿ ಸಂಘರ್ಷದ ದೃಶ್ಯಗಳು ಚಿತ್ರದುದ್ದಕ್ಕೂ ಇವೆ.
ಹಾಗಂತ ಮಾರಿ ಸೆಲ್ವರಾಜ್ ಇಲ್ಲಿ ಕೇವಲ ಜಾತಿ ಸಂಘರ್ಷವನ್ನೇ ಹೈಲೈಟ್ ಮಾಡಲು ಹೊರಟಿದ್ದಾರೆ ಎಂದಲ್ಲ. ಮಧ್ಯಮ ಮಾರ್ಗ ಹಿಡಿದಿದ್ದಾರೆ. ಉದಾಹರಣೆಗೆ ಕಬಡ್ಡಿ ಆಟದಲ್ಲಿ ದಲಿತ ಸಮುದಾಯದ ಕಿಟ್ಟಾನ್ ಆ ಹಳ್ಳಿಯ ತಂಡದಿಂದ ಹಿಡಿದು ಕ್ಲಬ್ ಮಟ್ಟ, ರಾಜ್ಯ ಮಟ್ಟ, ಅಂತಾರಾಷ್ಟ್ರೀಯ ಮಟ್ಟ- ಹೀಗೆ ವಿವಿಧ ಹಂತಗಳನ್ನು ದಾಟಲು ನೆರವಾಗುವುದು ಅದೇ ಪ್ರಬಲ ಜಾತಿಯ ಕಂದಸಾಮಿ, ಪಿಟಿ ಮಾಸ್ಟರ್, ಓರ್ವ ಆಯ್ಕೆ ಸಮಿತಿ ಸದಸ್ಯ- ಮೊದಲಾದವರ ಸಹಾಯದಿಂದ. ಅಂದರೆ ಮುಂದುವರಿದ ಜಾತಿಗಳ ಜನರೇ ದಲಿತ ಸಮುದಾಯದ ನಾಯಕ ಕಿಟ್ಟಾನ್ನ ಕಬಡ್ಡಿ ಆಟಕ್ಕೆ ನೆರವಾಗುತ್ತಾರೆ. ಈ ನಿಟ್ಟಿನಲ್ಲಿ ಜಾತಿ ಕಥನ ಹೇಳುತ್ತಲೇ ವಿವಿಧ ಜಾತಿಗಳು ಪರಸ್ಪರ ಸಾಧಿಸಬೇಕಾದ ಮೈತ್ರಿಯನ್ನು ಹೇಳುವ ಮಾರಿ ಸೆಲ್ವರಾಜ್, ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರುವಂತೆ ರೂಪಕಗಳ ಮೂಲಕ ಮನಮೋಹಕವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿರಿ: ದುರಂತದಲ್ಲಿ ಮರೆಯಾಗಿ ಜನಸಾಗರವ ಸೆಳೆದ ಈ ಹಾಡುಗಾರ ಯಾರು?
ಹ್ಞಾಂ, ಚಿತ್ರದಲ್ಲಿ ಪ್ರೇಮ ಕಥನವೂ ಇದೆ. ಅನುಪಮ ಪರಮೇಶ್ವರ್ ಮತ್ತು ಹದಿ ಹರೆಯದ ಕಬಡ್ಡಿ ಆಟಗಾರ ಕಿಟ್ಟಾನ್ ನಡುವಣ ಪ್ರೇಮದ ದೃಶ್ಯಗಳು ಬೆಚ್ಚಗಿನ ಭಾವ ಉಂಟುಮಾಡುವಲ್ಲಿ ಯಶಸ್ವಿಯಾಗಿವೆ. ಇಷ್ಟೆಲ್ಲ ಇರುವಾಗ ಪ್ರಮುಖ ಪಾತ್ರವೊಂದರ ಬಗ್ಗೆ ಹೇಳಲೇ ಬೇಕು. ಅದು ಕಿಟ್ಟಾನ್ ತಂದೆ ವೇಲುಸಾಮಿ ಪಾತ್ರಧಾರಿ ಪಶುಪತಿ. ಪಶುಪತಿ ಎಂದಿನಂತೆ ಪಾತ್ರವಾಗಿ ನಟಿಸದೆ ಪಾತ್ರವಾಗಿ ಜೀವಿಸಿದ್ದಾರೆ. ಹಾಗೆ ಕಿಟ್ಟಾನ್ ಅಕ್ಕ ರೆಜಿಶಾ ಕೂಡ. ಚಿತ್ರದ ಮತ್ತೊಂದು ಆಕರ್ಷಕ ಅಂಶ ಮನಸೂರೆಗೊಳ್ಳುವ ಸಂಗೀತ. ಸಂಗೀತ ನಿರ್ದೇಶನ ನಿವಾಸ್ ಕೆ ಪ್ರಸನ್ನ. ಮಲಯಾಳಂನ ವೇಡನ್ ಮತ್ತು ಅರಿವು ಹಾಡಿರುವ ಒಂದು ಹಾಡಿನ ಜೊತೆಗೆ ಒಟ್ಟು ಐದು ಹಾಡುಗಳು ಚಿತ್ರದ ಕಬಡ್ಡಿ ಆಟದಂತೆ ಭರ್ಜರಿ ರೈಡ್ ಮಾಡುತ್ತವೆ.
ಪ.ರಂಜಿತ್, ಮಾರಿ ಸೆಲ್ವರಾಜ್ ಚಿತ್ರ ಎಂದಾಕ್ಷಣ ಎಂದಿನಂತೆ ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಚಿತ್ರಗಳು ಅಲ್ಲಲ್ಲಿ ಕಾಣಿಸಲೇಬೇಕು. ಬೈಸನ್ ಕಾಳಮಾಡನ್ನಲ್ಲೂ ಈ ಟ್ರೆಂಡ್ ಮುಂದುವರಿದಿದೆ. ಕೆಲವೆಡೆ ಚಿತ್ರ ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲೂ ತೇಲಿಸುತ್ತದೆ. ಉದಾಹರಣೆಗೆ ನಾಯಕ ಕಿಟ್ಟಾನ್ ಕಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಸಂದರ್ಭ, ಏಷ್ಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಸಂದರ್ಭ, ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲ್ಲುವ ಸಮಯ-ಹೀಗೆ. ಜಾತಿ ವ್ಯವಸ್ಥೆ, ಉಸಿರುಗಟ್ಟಿಸುವ ಆ ಬದುಕಲ್ಲಿ ಸಮುದಾಯಗಳ ಪ್ರತಿಭೆಗಳು ಮುಂದೆ ಬರುವುದು ಎಷ್ಟು ಭೀಕರ, ಎಲ್ಲವನ್ನೂ ಬೈಸನ್ ಕಾಳಮಾಡನ್ ಹಸಿಹಸಿಯಾಗಿ ಹಿಡಿದಿಡುತ್ತದೆ.

ರಘೋತ್ತಮ ಹೊ.ಬ
ಲೇಖಕ




