ದೇಶ ಎಷ್ಟೇ ಮುಂದುವರಿದಿದೆ ಎಂದು ಹೇಳಿಕೊಂಡರೂ ‘ಭಾರತ ಬದಲಾಗಿಲ್ಲ’ ಹಾಗೂ ಇಲ್ಲಿನ ಕುಟುಂಬಗಳಲ್ಲಿ ಇಂದಿಗೂ ಪಿತೃಪ್ರಭುತ್ವ ಮತ್ತು ಮಹಿಳೆಯರ ಮೇಲಿನ ನಿರ್ಬಂಧಗಳು ಹಾಗೆಯೇ ಉಳಿದಿವೆ ಎಂದು ಹಿರಿಯ ನಟಿ, ‘ಪಂಚಾಯತ್’ ಖ್ಯಾತಿಯ ನೀನಾ ಗುಪ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಮಹಿಳೆಯರು ಮದುವೆಯ ನಂತರ ಗಂಡನ ಮನೆಯಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ತಮ್ಮದೇ ಕುಟುಂಬದ ಉದಾಹರಣೆಗಳನ್ನು ನೀಡಿ ವಿವರಿಸಿದ್ದಾರೆ.
ಭಾರತೀಯ ಸಮಾಜದಲ್ಲಿ ಪುರುಷರ ಮನಸ್ಥಿತಿ ಬಗ್ಗೆ ಮಾತನಾಡಿದ ನೀನಾ, ನಮ್ಮ ದೇಶದ ಪುರುಷರು ಇಂದಿಗೂ ‘ಕನ್ಯತ್ವ’ ಇರುವ (ವರ್ಜಿನ್) ಹುಡುಗಿಯನ್ನೇ ಮದುವೆಯಾಗಲು ಬಯಸುತ್ತಾರೆ ಎಂದು ಕಟುವಾಗಿ ನುಡಿದಿದ್ದಾರೆ. ಸಮಾಜ ಬದಲಾಗಿದೆ ಎಂಬ ವಾದವನ್ನು ತಳ್ಳಿಹಾಕಿದ ಅವರು, “ಏನು ಬದಲಾಗಿದೆ? ನೀವೇ ಹೇಳಿ. ನೀವು ಮತ್ತು ನಾನು ಅಲ್ಪಸಂಖ್ಯಾತರು. ಚೆನ್ನಾಗಿ ಬಟ್ಟೆ ಧರಿಸುವ, ಇಂಗ್ಲಿಷ್ ಮಾತನಾಡುವ ನಾವು ‘ನಿಜವಾದ ಭಾರತ’ವನ್ನು ಪ್ರತಿನಿಧಿಸುವುದಿಲ್ಲ. ವಾಸ್ತವದಲ್ಲಿ ಭಾರತ ಬದಲಾಗಿಲ್ಲ. ಇಲ್ಲಿನ ಮಹಿಳೆಯರು ಇಂದಿಗೂ ತಲೆಯ ಮೇಲೆ ಸೆರಗು ಹಾಕಿಕೊಂಡು ಮಾವನ ಕಾಲಿಗೆ ನಮಸ್ಕರಿಸುತ್ತಾರೆ,” ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಬ್ಯಾಟ್ ಬೀಸಿದ ‘ಫಿನಿಶರ್’ಗೆ ಕ್ಲೀನ್ ಬೌಲ್ಡ್ ಆದ ಸಂಸದೆ
ಮಹಿಳೆಯರಿಗೆ ಮದುವೆಯ ನಂತರ ತಮ್ಮ ಇಷ್ಟದ ಸಣ್ಣಪುಟ್ಟ ವಿಷಯಗಳನ್ನೂ ಪೂರೈಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ ಎಂಬುದಕ್ಕೆ ನೀನಾ ಗುಪ್ತಾ ತಮ್ಮ ಕುಟುಂಬದ ಎರಡು ಉದಾಹರಣೆಗಳನ್ನು ನೀಡಿದ್ದಾರೆ. ತಮ್ಮ ತಂದೆಯ ಕಡೆಯ ಸಂಬಂಧಿಯೊಬ್ಬರು ಮುಂಬೈನ ದೊಡ್ಡ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಮದುವೆಯಾದರು. ಆ ಹುಡುಗಿ ಸಾಯಿಬಾಬಾ ಭಕ್ತೆ. ಆಕೆ ತನ್ನ ಕೋಣೆಯಲ್ಲಿ ಸಾಯಿಬಾಬಾ ಫೋಟೋ ಇಡಲು ಬಯಸಿದಾಗ, ಆಕೆಯ ಅತ್ತೆ ಅದಕ್ಕೆ ಒಪ್ಪಲಿಲ್ಲ, ಬದಲಿಗೆ ತಾವು ಪೂಜಿಸುವ ಗುರುಗಳ ಫೋಟೋವನ್ನೇ ಹಾಕುವಂತೆ ಒತ್ತಾಯಿಸಿದರು ಎಂದು ನೀನಾ ವಿವರಿಸಿದ್ದಾರೆ.
ಇದೇ ರೀತಿ ತಮ್ಮ ಸಹೋದರನ ಮಗಳಿಗೆ ಮದುವೆಯ ನಂತರ, ಆಕೆಯ ಮಲಗುವ ಕೋಣೆಯ ಬೆಡ್ಸೈಡ್ ಟೇಬಲ್ ಮೇಲೆ ತನ್ನ ತವರು ಮನೆಯವರ ಫೋಟೋ ಇಟ್ಟುಕೊಳ್ಳಲೂ ಅತ್ತೆ ಒಪ್ಪಿಗೆ ನೀಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಿರುವಾಗ ಸಮಾಜ ಬದಲಾಗಿದೆ ಎಂದು ಹೇಗೆ ಹೇಳಲು ಸಾಧ್ಯ? ಮಹಿಳೆಯರ ಸ್ಥಿತಿಗತಿ ಬದಲಾಗಲು ನಾವಿನ್ನೂ ಬಹುದೂರ ಸಾಗಬೇಕಿದೆ ಎಂದು ನೀನಾ ಬಹಳ ಬೇಸರದಿಂದಲೇ ಹೇಳಿದ್ದಾರೆ.





