ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು ಆತ ಹೆಜ್ಜೆ ಹಾಕಲಿ
ನನ್ನ ಹೈಸ್ಕೂಲು ದಿನಗಳಿಂದ ಕಾಲೇಜು ಮುಗಿಸುವವರೆಗೂ ನನ್ನ ಮನಸ್ಸನ್ನು ವೈಚಾರಿಕವಾಗಿ ರೂಪಿಸುತ್ತಿದ್ದ ಲಂಕೇಶ್ ಪತ್ರಿಕೆಯ ಜತೆ ಊರಲ್ಲಿ ನನಗೆ ಇಬ್ಬರು ವ್ಯಕ್ತಿಗಳು ಸಾಥ್ ಕೊಡುತ್ತಿದ್ದರು. ಒಬ್ಬರು ನನ್ನ ಅಣ್ಣನ ವಯೋಮಾನದ ವೆಂಕಟೇಶ್ ಮತ್ತು ಆಗಲೇ ಎಪ್ಪತ್ತು ವರ್ಷ ಮೀರಿದ್ದ ಹಿರಿಯ ರಾಮ ಪೂಜಾರರು. ವೆಂಕಟೇಶ್ ಅವರದು ನಮ್ಮೂರಿನಲ್ಲಿ ಕಿರಾಣಿ ಅಂಗಡಿಯಿದೆ. ಈ ಕಿರಾಣಿ ಅಂಗಡಿಯೊಂದು ನಮ್ಮ ಅಡ್ಡಾ. ಇಲ್ಲಿ ಚರ್ಚಿಸದ ವಿಷಯವೇ ಇಲ್ಲ.
ಆಗಲೇ ನಾವು ಮಾಡಿದ ಸಣ್ಣಪುಟ್ಟ ಕ್ರಾಂತಿಗಳೆಲ್ಲದರಕ್ಕೆ ಸ್ಕೆಚ್ ಹಾಕಿದ್ದು ಇಲ್ಲಿಯೇ. ವೆಂಕಟೇಶ್ ಲಂಕೇಶರ ದೊಡ್ಡ ಅಭಿಮಾನಿ. ನನಗೆ ಲಂಕೇಶ್ ಪತ್ರಿಕೆಯ ಓದಿನ ರುಚಿಹತ್ತಿಸಿದ್ದು ವೆಂಕಟೇಶ್. ರಾಮ ಪೂಜಾರರು ಆಗಾಗ ಸಂಜೆ ಈ ಅಡ್ಡೆಗೆ ಬರುವುದಿತ್ತು. ಇವರು ಶಾಲೆ ಹತ್ತಿದಂತೆ ಕಾಣುತ್ತಿರಲಿಲ್ಲ. ಆದರೆ, ಅಲ್ಲಿ ಇಲ್ಲಿ ಸುದ್ದಿಯಾಗುತ್ತಿದ್ದ ಗಣಮಕ್ಕಳ (ದೇವರು ಮೈಮೇಲೆ ಬರಿಸಿಕೊಳ್ಳುವವರು) ಮರ್ಮವನ್ನೆಲ್ಲ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನೆಲ್ಲ ಈ ಪೂಜಾರರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಈ ಕಾರಣಗಳಿಗಾಗಿಯೋ ಏನೋ ನಾನು ಇವರೊಂದಿಗೆ ಮಾತನಾಡಲು ಕಾತರಿಸುತ್ತಿದ್ದೆ. ರಾಮ ಪೂಜಾರರದು ನಮ್ಮಂತೆಯೇ ಒಂದು ಬಡ ಆದರೆ ದೊಡ್ಡ ಕುಟುಂಬ. ಒಂದು ಚೂರು ಗದ್ದೆಯಿತ್ತಷ್ಟೆ. ರಾಮ ಪೂಜಾರರ ಹಿರಿಯ ಮಗ ಸಂಜೀವ ಹರಳಿಮಠದ ಸರ್ಕಾರಿ ಶಾಲೆಯಲ್ಲಿ ನನ್ನ ಸಹಪಾಠಿ. ದಾಂಡಿಗ ದೇಹ ಅವನದು.
ಈ ರಾಮ ಪೂಜಾರರ ಕಾರಣದಿಂದಲೇ ನಾನು ನಿನ್ನೆ ಕುಟುಂಬ ಸಮೇತ ‘ಡೆವಿಲ್’ ಸಿನಿಮಾ ನೋಡಿದೆ!
ರಾಮ ಪೂಜಾರರಿಗೂ, ಡೆವಿಲ್ ಸಿನಿಮಾಗೂ ಏನು ಸಂಬಂಧ ಎಂದು ಕೇಳಬಹುದು. ‘ಕಾಟೇರಾ’ ಸಿನಿಮಾವನ್ನು ನಾನು ನೋಡಿ ಇಷ್ಟಪಟ್ಟಿದ್ದೆ. ಇದು ದರ್ಶನ್ ಮುಖ್ಯಪಾತ್ರದಲ್ಲಿದ್ದ ಚಿತ್ರ. ಡೆವಿಲ್ ಸಿನಿಮಾ ನೋಡಲು ನನ್ನನ್ನು ಥಿಯಟೇರಿಗೆ ಕರೆದುಕೊಂಡು ಹೋದದ್ದು ರಾಮ ಪೂಜಾರರ ಮಗಳು ತುಳಸಿ ಅವರ ಮಗ ಕಾರ್ತಿಕ್. ಕಾರ್ತಿಕ್ ಎನ್ನುವುದಕ್ಕಿಂತ ‘ಹುಲಿ ಕಾರ್ತಿಕ್’ ಎಂದರೆ ಹೆಚ್ಚು ಜನರಿಗೆ ತಿಳಿಯುತ್ತದೆ.

ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಮುನ್ನಲೆಗೆ ಬಂದ ಕಾರ್ತಿಕ್ ಈ ಹಂತಕ್ಕೆ ಬರುವ ಮುನ್ನ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಪಟ್ಟವನು. ಅವನ ಪ್ರತಿಭೆ, ಶ್ರದ್ಧೆ ಇಂದು ಅವನನ್ನು ಒಬ್ಬ ಸಿನಿಮಾನಟನನ್ನಾಗಿ ರೂಪಿಸಿದೆ. ಈ ಮೊದಲು ಕಾರ್ತಿಕ್ ‘ಟಗರು ಪಲ್ಯ’ ಸಿನಿಮಾದಲ್ಲಿ ಚಿಕ್ಕದಾದರೂ, ಗಮನ ಸೆಳೆಯುವ ಪಾತ್ರ ಮಾಡಿದ್ದ. ‘ಡೆವಿಲ್’ ಸಿನಿಮಾದಲ್ಲಿ ನಾಯಕನಟನ ಸ್ನೇಹಿತನ ಪಾತ್ರ ಕಾರ್ತಿಕನದು. ಪಾತ್ರಕ್ಕೆ ಕಾರ್ತಿಕ್ ಜೀವ ತುಂಬಿದ್ದಾನೆ. ಆದರೆ ಈತನ ಪ್ರತಿಭೆಯ ಅನಾವರಣಕ್ಕೆ ಈ ಪಾತ್ರದಲ್ಲಿ ಹೆಚ್ಚಿನ ಅವಕಾಶವೇ ಇಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್ ಫೋಗಟ್ ನಿರ್ಧಾರಕ್ಕೆ ಸ್ವಾಗತ!
ನಮ್ಮೂರಿನ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯ ಮೂಲಕ ಮಿಂಚುತ್ತಿರುವುದನ್ನು ನೋಡುವುದು ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಆದ್ದರಿಂದ ಸಿನಿಮಾ ಬಗ್ಗೆ, ನಾಯಕನಟರ ಗಂಭೀರ ಕೃತ್ಯಗಳ ಬಗ್ಗೆ ತಕರಾರು, ಸಮಾಧಾನಗಳಿದ್ದರೂ ನಮ್ಮೂರಿನ ಹುಡುಗನನ್ನು ತೆರೆಯ ಮೇಲೇ ನೋಡಲು ನಾನು ಕುಟುಂಬ ಸಮೇತ ಥಿಯಟೇರಿಗೆ ಹೋಗಿ ಬಂದೆ.
ಹಾಗೆ ನೋಡಿದರೆ, ‘ಬಿಗ್ ಬಾಸ್’ ‘ಕಾಮಿಡಿ ಕಿಲಾಡಿಗಳು’ ಭರ್ಜರಿ ಬ್ಯಾಚುಲರ್ಸ್ ಇತ್ಯಾದಿ ರಿಯಾಲಿಟಿ ಶೋಗಳನ್ನು, ಟಿವಿ ಕಾರ್ಯಕ್ರಮಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ನನಗೆ ನೋಡಲಾಗುವುದಿಲ್ಲ. ಇಲ್ಲಿನ ಕೃತಕ ಅಳು, ನಗು, ಸೋಗಲಾಡಿ ಮಾನವೀಯತೆ, ಜತೆಗೆ ಜಡ್ಜ್ಸ್ ಎಂದು ಕುಳಿತುಕೊಂಡ ನಟ,ನಟಿಯರು, ಸಿನಿಮಾ ನಿರ್ದೇಶಕರ ಅಸಹ್ಯ ಹುಟ್ಟಿಸುವ ದ್ವಂದ್ವಾರ್ಥದ ಮಾತುಗಳು ರೇಜಿಗೆ ಹುಟ್ಟಿಸುತ್ತವೆ. ಹೀಗಿದ್ದರೂ, ಇಷ್ಟವಿಲ್ಲದಿದ್ದರೂ ಈ ಟಿವಿಗಳು ಜನರ ಮೇಲೆ ತಮ್ಮದೇ ಪ್ರಭಾವ ಬೀರುವುದರಿಂದ ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವುದಕ್ಕಾದರೂ ಇವುಗಳನ್ನು ಗಮನಿಸುತ್ತಿರಬೇಕಾಗುತ್ತದೆ. ನಮ್ಮ ಕಡೆಯ ಮಕ್ಕಳು ಯಾರಾದರೂ ಇಲ್ಲಿ ಕಂಡರೆ ಆ ಕಾರಣಕ್ಕಾಗಿಯಾದರೂ ಕಣ್ಣು ಒಂದು ಕ್ಷಣ ಅತ್ತ ಹೋಗುತ್ತದೆ.
ನಾನು ಗಮನಿಸಿದಂತೆ ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು ಆತ ಹೆಜ್ಜೆ ಹಾಕಲಿ, ಮುಂದೆ ಕನ್ನಡ ಚಿತ್ರರಂಗದ ಉಜ್ವಲತಾರೆಯಾಗಿ ಬೆಳಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.
– ಡಾ.ಸರ್ಜಾಶಂಕರ ಹರಳಿಮಠ





