ಬಿಡದಿಯಲ್ಲಿ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂರ್ಸ್ಗೆ ಬೀಗಮುದ್ರೆ ಪ್ರಕರಣ 2 ದಿನಗಳ ಬೀಗ ಮುದ್ರೆಯನ್ನು ತೆರವುಗೊಳಿಸಲಾಗಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಸೂಚನೆ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಮಧ್ಯ ರಾತ್ರಿ ಬೀಗ ಮುದ್ರೆಯನ್ನು ತೆರವುಗೊಳಿಸಿ ಬಿಗ್ ಬಾಸ್ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಎಲ್ಲ ಗೇಟ್ಗಳನ್ನು ತೆರೆಯದೆ ಸಿ ಗೇಟ್ ಅನ್ನು ಮಾತ್ರ ತೆರೆಯಲಾಗಿದೆ.
ರಾತ್ರಿ 11.22ರಲ್ಲಿ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಬಿಗ್ಬಾಸ್ ಮನರಂಜನಾ ಕಾರ್ಯಕ್ರಮ ನಡೆಯುತ್ತಿ ರುವ ಸ್ಟುಡಿಯೋದ ಬೀಗ ಮುದ್ರೆಯನ್ನು ತೆರವುಗೊಳಿ ಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋದಲ್ಲಿ ನಡೆದಿರುವ ಪರಿಸರ ನಿಯಮಗಳ ಉಲ್ಲಂಘನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾನುಸಾರ ಸರಿಪಡಿಸಲು ಸಮಯ ನೀಡಲಾಗಿದೆ. ಕನ್ನಡ ಮನರಂಜನಾ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೀಗಮುದ್ರೆ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ತಮ ಎಕ್ಸ್ ಪೋಸ್ಟ್ನಲ್ಲಿ ಡಿಸಿಎಂ ಸ್ಪಷ್ಟಪಡಿಸಿದ್ದಾರೆ.
ತಡರಾತ್ರಿ ಬಿಗ್ಬಾಸ್ ಮನೆಗೆ ಸ್ಪರ್ಧಿಗಳು:
ಜಾಲಿವುಡ್ ಸ್ಟುಡಿಯೋ ಬೀಗಮುದ್ರೆ ತಡರಾತ್ರಿಯಲ್ಲಿ ತೆರವುಗೊಸಿದ ಬೆನ್ನಲ್ಲೇ ಮಂಗಳವಾರ ರಾತ್ರಿಯಿಂದ ಬಿಡದಿಯ ಈಗಲ್ಟನ್ ರೆಸ್ಟಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬಿಗ್ ಬಾಸ್ 12ನೇ ಆವೃತ್ತಿಯ 17 ಮಂದಿ ಸ್ಪರ್ಧಿಗಳನ್ನು ತಡರಾತ್ರಿ ಬಿಗ್ಬಾಸ್ ಮನೆಗೆ ಸ್ಥಳಾಂತರಿಸಲಾಗಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಬೀಳುತ್ತಿದ್ದಂತೆ ರಾಮನಗರ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿನಲ್ಲಿ ಬಿಗ್ಬಾಸ್ ಸ್ಪರ್ಧಿಗಳನ್ನು ಸ್ಟುಡಿಯೋದಿಂದ ಖಾಲಿ ಮಾಡಿಸಿದ್ದರು. ಅಲ್ಲಿಂದ ಹೊರಟ ಬಿಗ್ಬಾಸ್ ಸ್ಪರ್ಧಿಗಳು ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ರೆಸಾರ್ಟ್ನ ಎಲ್ಲ ಕೊಠಡಿಗಳು ಈಗಾಗಲೇ ಬುಕ್ ಆಗಿರುವ ಹಿನ್ನೆಲೆಯಲ್ಲಿ ಸ್ಪರ್ಧಿಗಳನ್ನು ಬೆಂಗಳೂರು ಸಮೀಪದ ರೆಸಾರ್ಟ್ ಒಂದಕ್ಕೆ ತಡರಾತ್ರಿ ರವಾನಿಸಲು ಬಿಗ್ ಬಾಸ್ ವ್ಯವಸ್ಥಾಪನ ಸಮಿತಿ ತೀರ್ಮಾನಿಸಿತ್ತು. ಕೊನೆಗೆ ಪ್ರಕರಣ ಸುಖಾಂತ್ಯ ಗೊಂಡ ಹಿನ್ನೆಲೆಯಲ್ಲಿ ಮಧ್ಯರಾತ್ರಿಯ ಸುಮಾರಿನಲ್ಲಿ ಬಿಗ್ಬಾಸ್ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕರೆತರಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಬಿಹಾರ ಗೆಲ್ಲಲು ಮೋದಿ ರಣತಂತ್ರ- ಹಣದ ಹೊಳೆ, ಆಶ್ವಾಸನೆಗಳ ಮಳೆ!
ಡಿಸಿಎಂಗೆ ಧನ್ಯವಾದ ತಿಳಿಸಿದ ನಟ ಸುದೀಪ್
ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ವಿವಾದವನ್ನು ಪರಿಹರಿಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ಗೆ ನಟ ಹಾಗೂ ಬಿಗ್ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ. ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಿಚ್ಚ ಸುದೀಪ್ ನನ್ನ ಕರೆಗೆ ಸ್ಪಂದಿಸಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಾಗೆಯೇ ಅಧಿಕಾರಿಗಳಿಗೂ ಧನ್ಯವಾದ ಸಲ್ಲಿಸುತ್ತೇನೆ. ಹಾಗೇಯೇ ಇತ್ತೀಚಿಗೆ ಎದುರಾದ ಅವ್ಯವಸ್ಥೆಯಲ್ಲಿ ಬಿಗ್ಬಾಸ್ ಕನ್ನಡದ ಯಾವಪಾತ್ರವೂ ಇಲ್ಲ, ಅದರ ಭಾಗವೂ ಅಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಅದೇ ರೀತಿ ನಲಪಾಡ್ ಅವರ ಪರಿಶ್ರಮವಿದ್ದು ಅವರಿಗೂ ಧನ್ಯವಾದ ಸಲ್ಲಿಸುವುದಾಗಿ ಸುದೀಪ್ ತಿಳಿಸಿದ್ದಾರೆ.
ಎರಡು ದಿನಗಳಿಂದ ನಿಲ್ಲದ ಶೋ
ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಬೀಳುತ್ತಿದ್ದಂತೆ ಮಂಗಳವಾರ ಸಂಜೆಯಿಂದಲೇ ಬಿಗ್ಬಾಸ್ ಕಾರ್ಯಕ್ರಮದ ಚಿತ್ರೀಕರಣ ಸಂಪೂರ್ಣ ಸ್ಥಗಿತವಾಗಿತ್ತಾದರೂ, ಮಂಗಳವಾರ ಮತ್ತು ಬುಧವಾರ ರಾತ್ರಿ 9.30 ರಿಂದ 10.30 ರವರೆಗೆ ಖಾಸಗಿ ವಾಹಿನಿಯಲ್ಲಿ ಪ್ರಸರಣವಾಗುವ ಬಿಗ್ಬಾಸ್ನ ತುಣುಕುಗಳನ್ನು ಬಿತ್ತರಿಸಿದ್ದು, ಕಾರ್ಯಕ್ರಮದ ಪ್ರಸರಣಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಬಿಗ್ಬಾಸ್ ಕಾರ್ಯಕ್ರಮ ಇಡೀ ದಿನ ಚಿತ್ರಿಕರಣ ನಡೆದರೂ ಒಂದು ತಾಸುಗಳ ಕಾಲ ಟಿವಿಯಲ್ಲಿ ಪ್ರಸರಣ ಮಾಡುವ ಕಾರ್ಯಕ್ರಮ ಎಡಿಟೆಡ್ ಆಗಿರುವ ಕಾರಣ ಕಾರ್ಯಕ್ರಮ ಎರಡು ದಿನ ನಿರಾತಂಕವಾಗಿ ಪ್ರಸರಣವಾಗಿದೆ.
ಜಾಲಿವುಡ್ ಪಾರ್ಕ್: ಹೈಕೋರ್ಟ್ನಲ್ಲಿ ಇಂದು ಅರ್ಜಿ ವಿಚಾರಣೆ
ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣದ ‘ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಪಾರ್ಕ್’ಗೆ ಬೀಗ ಹಾಕಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಸರ್ಕಾರದ ಕ್ರಮವನ್ನು ಪ್ರಶ್ನಿಸಿ ‘ವಿಇಎಲ್ಎಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ನಿರ್ದೇಶಕ ಪ್ರಕಾಶ್ ಪಳನಿ ಸಲ್ಲಿಸಿರುವ ರಿಟ್ ಅರ್ಜಿ, ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರದ ಮೊಕದ್ದಮೆಗಳ ಆಲಿಕೆಯ ಸೂಚನಾ ಪಟ್ಟಿಯಲ್ಲಿ ನಿಗದಿಯಾಗಿದೆ.
ಅರ್ಜಿಯಲ್ಲಿ ಏನಿದೆ?:
‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2025ರ ಅಕ್ಟೋಬರ್ 6ರಂದು ನೋಟಿಸ್ ಜಾರಿ ಮಾಡಿದೆ. ಸೂಕ್ತ ಕಾಲಾವಕಾಶ ನೀಡದೇ ಅಕ್ಟೋಬರ್ 7ರಂದು ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಪಾರ್ಕ್ಗೆ ಬೀಗ ಹಾಕಲಾಗಿದೆ. ರಾಮನಗರ ತಹಶೀಲ್ದಾರ್ ಅವರ ಈ ನಡೆ ಕಾನೂನುಬಾಹಿರ ಮತ್ತು ಸ್ವೇಚ್ಛೆಯ ಕ್ರಮವಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ಇದು ನಿರ್ದಿಷ್ಟ ಗುರಿ ಇಟ್ಟುಕೊಂಡಿರುವ ಮಾಡಿರುವ ಆದೇಶವಾಗಿದೆ. ಹಾಗಾಗಿ, ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾದ ಈ ಆಕ್ಷೇಪಾರ್ಹ ಆದೇಶವನ್ನು ವಜಾಗೊಳಿಸಬೇಕು’ ಎಂದು ಕೋರಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ಎಂ.ವಿಶ್ವಾಸ್ ಗೌಡ ವಕಾಲತ್ತು ವಹಿಸಿದ್ದಾರೆ.





