ನಾಜಿ ಜರ್ಮನಿಯಲ್ಲಿ ಕಂಡುಬರುತ್ತಿದ್ದ ವಿದ್ಯಮಾನಗಳು ಈಗ ಭಾರತದಲ್ಲಿ ಕಂಡು ಬರುತ್ತಿವೆ. ಭಾರತೀಯರು ದ್ವೇಷ ಸಿದ್ಧಾಂತವನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೊಪಗಾಂಡಾ ಸಿನಿಮಾಗಳು ಮಕಾಡೆ ಮಲಗುತ್ತಿರುವುದೇ ಸಾಕ್ಷಿ.
ಬಿಜೆಪಿ ಸಂಸದೆಯೂ ಆಗಿರುವ ನಟಿ ಕಂಗನಾ ರಣಾವತ್ ಅಭಿನಯದ ‘ಎಮೆರ್ಜೆನ್ಸಿ’ ಚಿತ್ರ ಜನವರಿ 17ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುವುದಕ್ಕೂ ಮುನ್ನ ತಾನು ಅವರ ಬಗ್ಗೆ ದೀರ್ಘವಾದ ಸಂಶೋಧನೆಯನ್ನು ನಡೆಸಿರುವುದಾಗಿ ಚಿತ್ರದ ನಿರ್ದೇಶಕಿಯೂ ಆಗಿರುವ ಕಂಗನಾ ಹೇಳಿಕೊಂಡಿದ್ದಾರೆ.
‘ಇಂದಿರಾ ಗಾಂಧಿ ಶಕ್ತಿಶಾಲಿ ಎಂದು ಭಾವಿಸಿದ್ದೆ, ಆದರೆ ಸಂಶೋಧನೆ ನಡೆಸಿದಾಗ ಅವರು ದುರ್ಬಲರು ಎಂದು ತಿಳಿದುಬಂದಿದೆ’ ಎಂದು ಅವರು ಘೋಷಿಸಿದ್ದಾರೆ. ಈ ಮೂಲಕ ಚಿತ್ರ ಏನು ಹೇಳಲು ಹೊರಟಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ದೆಹಲಿ ಚುನಾವಣೆ ನಡೆಯಲಿದೆ. ಚುನಾವಣೆ ಹೊತ್ತಲ್ಲೇ ಈ ಚಿತ್ರ ಬಿಡುಗಡೆ ಆಗುತ್ತಿರುವ ಕಾರಣ, ಅದು ಯಾರಿಗೆ ಅನುಕೂಲ ಮಾಡಿಕೊಡಲಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ಸುತ್ತಮುತ್ತ ಇಂತಹ ಪ್ರೊಪಗಾಂಡಾ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಲೇ ಇವೆ. ಈ ಸಿನಿಮಾಗಳ ಮೂಲಕ ಒಂದು ಸಮುದಾಯ ಅಥವಾ ಸೈದ್ಧಾಂತಿಕ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸಿ, ಆ ಮೂಲಕ ಚಿತ್ರ ನೋಡಿ ದ್ವೇಷದ ಅಮಲೇರಿಸಿಕೊಂಡ ಪ್ರೇಕ್ಷಕರನ್ನು ಒಂದು ನಿರ್ದಿಷ್ಟ ಪಕ್ಷಕ್ಕೆ ವೋಟ್ ಹಾಕುವಂತೆ ಮಾಡುವ ಕಾರ್ಯ ಕಳೆದ ಒಂದು ದಶಕದಿಂದ ಎಗ್ಗಿಲ್ಲದೇ ನಡೆದುಕೊಂಡು ಬಂದಿದೆ.

ಈ ವಿದ್ಯಮಾನ ಜಗತ್ತಿಗೆ ಹೊಸದೇನಲ್ಲ. ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ಕೂಡಾ ಇದೇ ಮಾದರಿ ಅನುಸರಿಸಿದ್ದ. ಇದಕ್ಕಾಗಿಯೇ ಜೋಸೆಫ್ ಗೊಬೆಲ್ಸ್ ನೇತೃತ್ವದಲ್ಲಿ ಪ್ರತ್ಯೇಕ ಸಚಿವಾಲಯವನ್ನು ಕೂಡಾ ಸ್ಥಾಪಿಸಿದ್ದ. ನಾಜಿ ಸಿದ್ಧಾಂತವನ್ನು ಪ್ರಚಾರ ಮಾಡಲು, ಯಹೂದಿಗಳನ್ನು, ಕಮ್ಯುನಿಸ್ಟ್ರನ್ನು, ತನ್ನ ಸೈದ್ಧಾಂತಿಕ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸಲು ನಾಜಿಗಳು ಸಿನಿಮಾ ಕ್ಷೇತ್ರವನ್ನು ಬಳಸಿಕೊಂಡರು. ಅದರಲ್ಲಿ ಅವರು ಯಶಸ್ಸನ್ನೂ ಕಂಡರು. ಆಗ ನಾಜಿ ಜರ್ಮನಿಯಲ್ಲಿ ನಡೆದದ್ದು, ಈಗ ಭಾರತದಲ್ಲಿ ನಡೆಯುತ್ತಿದೆ.
ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಚಿತ್ರರಂಗ ರಾಜಕೀಯ ಪ್ರಭಾವಕ್ಕೆ ಒಳಗಾಗಿಲ್ಲವೇ? ಹಾಗೇನಿಲ್ಲ, ಆದರೆ ಕಳೆದ ಒಂದು ದಶಕದಿಂದ ಬಹುಸಂಖ್ಯಾತರ ರಾಜಕೀಯ ಮತ್ತು ನಂಬಿಕೆಗಳನ್ನು ವೈಭವೀಕರಿಸುವ ಹಾಗೂ ಕೋಮು ಹಿಂಸಾಚಾರ ಪ್ರಚೋದಿಸುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದು ವಾಸ್ತವ. ಪ್ರತಿಭಾವಂತ ನಿರ್ದೇಶಕರು, ಕಲಾವಿದರು ಈ ಚಿತ್ರಗಳ ಭಾಗವಾಗಿದ್ದು ಕಾಲದ ದುರಂತ.

ಇಂತಹ ಚಿತ್ರಗಳ ಮುಖ್ಯ ಅಜೆಂಡಾ ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರದ ಆಡಳಿತ ವೈಫಲ್ಯ ಸೇರಿದಂತೆ ಮುಖ್ಯವಾಹಿನಿ ವಿಷಯಗಳನ್ನು ಬದಿಗೆ ಸರಿಸಿ ಸಮಾಜದಲ್ಲಿ ವಿಭಜನೆ ಹೆಚ್ಚಿಸುವುದು. ಇಂತಹ ಚಿತ್ರಗಳ ಸಂಖ್ಯೆ ಹೆಚ್ಚಾಗಲು ಕಾರಣಗಳೂ ಇವೆ. ಕಡಿಮೆ ಬಜೆಟ್, ಹೆಚ್ಚು ಲಾಭ ಎನ್ನುವ ನೆಪದಲ್ಲಿ ಈ ಚಿತ್ರಗಳನ್ನು ನಿರ್ಮಿಸಲು ಹೆಚ್ಚಿನ ಅಧ್ಯಯನ, ಕಸರತ್ತು ಬೇಕಾಗಿಲ್ಲ. ತಮಗೆ ಇಷ್ಟ ಬಂದ ಹಾಗೆ, ಕೇವಲ ಒಂದು ಕಡೆಯ ನರೇಟಿವ್ ಬಿತ್ತುವ ಈ ಕಪೋಲ ಕಲ್ಪಿತ ಚಿತ್ರಗಳಿಗೆ ಪ್ರಭುತ್ವ ಹಾಗೂ ಗೋದಿ ಮೀಡಿಯಾಗಳ ಬೆಂಬಲವೂ ಇದೆ.
ಈ ಪ್ರೊಪಗಾಂಡಾ ಸಿನಿಮಾಗಳ ಧ್ಯೇಯೋದ್ದೇಶಗಳನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು.
1) ಉಗ್ರ ರಾಷ್ಟ್ರೀಯತೆ ಹಾಗೂ ಹಿಂದುತ್ವದ ವೈಭವೀಕರಣ
2) ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವುದು
3) ಸೈದ್ಧಾಂತಿಕ ಎದುರಾಳಿಗಳ ವಿರುದ್ಧ ಅಪಪ್ರಚಾರ
4) ಬಿಜೆಪಿ ಸರ್ಕಾರದ ಸಾಧನೆಗಳ ಪ್ರಚಾರ
ನೈಜ ಇತಿಹಾಸದ ನಿರಾಕರಣೆ ಹಾಗೂ ಅತ್ಯುಗ್ರ ರಾಷ್ಟ್ರೀಯತೆಯ ಪ್ರತಿಪಾದನೆ ಬಿಜೆಪಿ ಆಡಳಿತಾವಧಿಯಲ್ಲಿ ಕಂಡು ಬಂದ ಪ್ರಮುಖ ಬೆಳವಣಿಗೆಗಳು. ಈ ಬೆಳವಣಿಗೆಗಳಿಗೆ ಪೂರಕವಾಗಿ ಕಳೆದ ಒಂದು ದಶಕದಲ್ಲಿ ನೂರಾರು ಚಿತ್ರಗಳು ಬಿಡುಗಡೆ ಆಗಿವೆ. ಇತಿಹಾಸವನ್ನು ತಿರುಚಿ, ಒಂದಿಷ್ಟು ಊಹಾಪೋಹ ಸೇರಿಸಿ ತಯಾರಿಸಿದ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಭಾರತೀಯ ಸೈನ್ಯ ಹಾಗೂ ಗೂಢಚಾರಿಕೆ ಸಾಧನೆಗಳಿಗೆ ರಾಷ್ಟ್ರೀಯತೆ ಲೇಪನ ಹಚ್ಚಿ, ಅದನ್ನು ಆಡಳಿತ ಪಕ್ಷದ ಸಾಧನೆ ಎಂದು ಬಿಂಬಿಸಲಾಗಿದೆ. ಬಯೋಪಿಕ್ ಹೆಸರಿನಲ್ಲಿ ಹಿಂದುತ್ವದ ಪ್ರಚಾರವೂ ನಡೆದಿದೆ.

2019ರಲ್ಲಿ ಬಿಡುಗಡೆಯಾದ, ವಿಕ್ಕಿ ಕೌಶಲ್ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸೈನ್ಯದಲ್ಲಿ ಭಾರಿ ಬದಲಾವಣೆ ಆಗಿದೆ ಎಂದು ಒತ್ತಿ ಹೇಳಿತ್ತು. ₹25 ಕೋಟಿ ವೆಚ್ಚದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ₹300 ಕೋಟಿ ಬಾಚಿತು. ನಂತರದ ದಿನಗಳಲ್ಲಿ ಇದೇ ಧಾಟಿಯಲ್ಲೆ ಬಂದ ಗದರ್ 2, ಆರ್ಟಿಕಲ್ 370, ಫೈಟರ್, ತೇಜಸ್, ಆಪರೇಷನ್ ವ್ಯಾಲೆಂಟೈನ್ ಸೇರಿದಂತೆ ಹಲವು ಚಿತ್ರಗಳು ಸೈನ್ಯದ ಸಾಧನೆಗಳನ್ನು ಮೋದಿ ಸರ್ಕಾರಕ್ಕೆ ಸಲ್ಲಿಸುವ ಹಾಗೂ ಜನರ ಮನಸ್ಸಿನಲ್ಲಿ ಅತ್ಯುಗ್ರ ರಾಷ್ಟ್ರೀಯತೆ ಬಿತ್ತುವ ಕೆಲಸ ಮಾಡಿದವು.
ಅಕ್ಷಯ್ ಕುಮಾರ್ ಅಭಿನಯದ ಕೇಸರಿ, ಸಾಮ್ರಾಟ್ ಪೃಥ್ವಿರಾಜ್, ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ ಪದ್ಮಾವತ್, ಬಾಜಿರಾವ್ ಮಸ್ತಾನಿ, ಅಜಯ್ ದೇವಗನ್ ಅಭಿನಯದ ತಾನಾಜಿ ಅಂತಹ ಐತಿಹಾಸಿಕ ಚಿತ್ರಗಳು ಹಿಂದುತ್ವ ವಿಚಾರಧಾರೆಗಳನ್ನೇ ಪ್ರತಿಪಾದಿಸಿದವು. ಇನ್ನೂ ಬಯೋಪಿಕ್ ವೇಷ ಹಾಕಿಕೊಂಡ ಬಂದ ಪಿಎಂ ನರೇಂದ್ರ ಮೋದಿ, ಠಾಕ್ರೆ, ಮೈ ಅಟಲ್ ಹೂ, ಸ್ವಾತಂತ್ರ್ಯವೀರ ಸಾವರ್ಕರ್, ಹೆಡಗೇವಾರ್ ಚಿತ್ರಗಳು ಹಿಂದುತ್ವ ಮತ್ತು ಆರ್ಎಸ್ಎಸ್ ಸಿದ್ಧಾಂತವನ್ನು ಜನಮಾನಸದಲ್ಲಿ ಬೇರೂರಿಸುವ ಯತ್ನ ಮಾಡಿದವು. ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಚಿತ್ರ ನಿರ್ದೇಶಿಸಿ ಹೆಸರು ಪಡೆದಿದ್ದ ರಾಜಕುಮಾರ್ ಸಂತೋಷಿ, ‘ಗಾಂಧಿ ಗೋಡ್ಸೆ ಏಕ್ ಯುದ್ಧ’ ಚಿತ್ರದ ಮೂಲಕ ಹಿಂದುತ್ವ ಪ್ರಚಾರಕ್ಕೆ ಇಳಿದಿದ್ದು ಅಚ್ಚರಿಯ ಬೆಳವಣಿಗೆ.

ದೇಶದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಕೋಮು ಧ್ರುವೀಕರಣ ಕಳೆದ ಹತ್ತು ವರ್ಷಗಳಲ್ಲಿ ನಡೆಯಿತು. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರ ವಿರುದ್ಧ ನಡೆದ ಅಪಪ್ರಚಾರ ಊಹಿಸಲೂ ಅಸಾಧ್ಯ. ಮುಸ್ಲಿಮರನ್ನು ಹೊರಗಿನವರು, ದೇಶದ್ರೋಹಿಗಳು ಎಂದು ಬಿಂಬಿಸಲಾಯಿತು. ಈ ನರೇಟಿವ್ ಬಿತ್ತುವಲ್ಲಿ ಬಿಜೆಪಿ ಐಟಿ ಸೆಲ್ ಪಾತ್ರ ದೊಡ್ಡದಾದರೂ ಚಿತ್ರರಂಗದ ಕೊಡುಗೆ ಕಡಿಮೆಯೇನಿಲ್ಲ. ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ, 72 ಹೂರೇ, ಆಕ್ಸಿಡೆಂಟ್ ಒರ್ ಕಾನ್ಸ್ಪಿರಸಿ ಗೋಧ್ರಾ, ದಿ ಸಬರಮತಿ ರಿಪೋರ್ಟ್, ಹಮಾರೆ ಬಾರಹ್, ರಜಾಕರ್, ಅಜ್ಮೀರ್- 92 ಸೇರಿದಂತೆ ಹಲವು ಚಿತ್ರಗಳು ಮುಸ್ಲಿಮರನ್ನು ಗುರಿಯಾಗಿಸಿದವು. ಸಮಾಜದಲ್ಲಿ ವಿಭಜನೆ ಮೂಡಿಸುವ ಇಂತಹ ಚಿತ್ರಗಳಿಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಭಾಗ್ಯವೂ ಸಿಕ್ಕಿತ್ತು. ಅಲ್ಲದೆ ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಹಿರಿಯ ಬಿಜೆಪಿ ನಾಯಕರು ಈ ಚಿತ್ರಗಳಿಗೆ ವ್ಯಾಪಕ ಪ್ರಚಾರ ನೀಡಿದರು.

ಇವುಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರಗಳೆಂದರೆ ದಿ ಕಾಶ್ಮೀರ್ ಫೈಲ್ಸ್ (2022) ಹಾಗೂ ದಿ ಕೇರಳ ಸ್ಟೋರಿ (2023). ಕಾಶ್ಮೀರದಲ್ಲಿ ಪಂಡಿತರ ಮೇಲಿನ ದೌರ್ಜನ್ಯ ಕತೆ ಹೇಳುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ದೊಡ್ಡ ಚರ್ಚೆ ಹುಟ್ಟು ಹಾಕಿತು. ಕಾಶ್ಮೀರದ ಹಿಂದೂಗಳ ದುರವಸ್ಥೆಗೆ ಮುಸ್ಲಿಮರು ಕಾರಣವೆಂದು ಹುಯಿಲೆಬ್ಬಿಸಿ ದೇಶದಾದ್ಯಂತ ಮತ್ತಷ್ಟು ಮತಿಹೀನ ಮುಸ್ಲಿಂ ದ್ವೇಷವನ್ನು ಕೆರಳಿಸುವುದು ಮಾತ್ರವೇ ಈ ಚಿತ್ರದ ಉದ್ದೇಶ ಎಂಬುದಂತೂ ಸ್ಪಷ್ಟವಾಗಿತ್ತು. ಅದರ ಪರಿಣಾಮ ಚಿತ್ರ ನೋಡಿ ಹೊರಬಂದ ಪ್ರೇಕ್ಷಕರು ಮುಸ್ಲಿಮರ ವಿರುದ್ಧ ಬೆಂಕಿಯುಗುಳುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ಆದರೆ ವಾಸ್ತವದಲ್ಲಿ ಉಗ್ರರ ದಾಳಿ ಕಾಶ್ಮೀರಿ ಪಂಡಿತರಿಗೆ ಸೀಮಿತವಾಗಿರಲಿಲ್ಲ. ಪಂಡಿತರ ವಲಸೆಗೆ ಮುನ್ನವೇ ಉಗ್ರರು ಅಲ್ಲಿನ 15 ಸಾವಿರ ಮುಸ್ಲಿಮರನ್ನು ಕೊಂದಿದ್ದರು. ಗೃಹ ಇಲಾಖೆ ಅಂಕಿ ಅಂಶಗಳ ಪ್ರಕಾರ ಗಲಭೆಯಲ್ಲಿ ಬಲಿಯಾದ ಪಂಡಿತರ ಸಂಖ್ಯೆ 219. ಆದರೆ ಈ ಸಂಖ್ಯೆ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ನಾಲ್ಕು ಸಾವಿರ ದಾಟಿತ್ತು!

ಈ ಚಿತ್ರಕ್ಕೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿದವು. ಆಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರು ‘ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡದವರು ದೇಶದ್ರೋಹಿಗಳು’ ಎಂದು ಅಪ್ಪಣೆ ಕೊಡಿಸಿದರೆ, ಸದನದಲ್ಲಿ ಸಭಾಪತಿಗಳೇ ಎಲ್ಲ ಶಾಸಕರಿಗೆ ಚಿತ್ರವೀಕ್ಷಣೆಗೆ ಆಹ್ವಾನ ನೀಡಿದರು. ಕೇಂದ್ರ ಮಂತ್ರಿ ಪ್ರಲ್ಹಾದ ಜೋಷಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹುಬ್ಬಳ್ಳಿ ಧಾರವಾಡಗಳಲ್ಲಿ ಸಿನಿಮಾದ ನಿತ್ಯ ಉಚಿತ ಪ್ರದರ್ಶನ ಏರ್ಪಡಿಸಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಪ್ರಶಂಸೆ ಮಾಡಿ ಚಿತ್ರತಂಡದೊಂದಿಗೆ ಫೋಟೋ ತೆಗೆದುಕೊಂಡರು!
ಇದನ್ನು ಓದಿದ್ದೀರಾ?: ಎಂಟಿವಿ, ಮನೋರಥಂಗಳ್ ಮತ್ತು ಮಲಯಾಳಂ
₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ₹350 ಕೋಟಿ ಬಾಚುವ ಮೂಲಕ ದ್ವೇಷದ ಮಾರುಕಟ್ಟೆಯಲ್ಲಿ ಭರ್ಜರಿ ಲಾಭವನ್ನೇ ಗಳಿಸಿತು. ಈ ಚಿತ್ರದ ನಂತರವೂ ಕಾಶ್ಮೀರಿ ಪಂಡಿತರ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ ಎಂಬುದು ಅಷ್ಟೇ ಸತ್ಯ. 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಗೊಂಡಿತು. ಈ ವೇಳೆ ಚಿತ್ರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾಡವ್ ಲ್ಯಾಪಿಡ್, ಚಿತ್ರವನ್ನು ಅಶ್ಲೀಲ ಮತ್ತು ಪ್ರೊಪಗಾಂಡಾ ಎಂದು ಜರಿದಿದ್ದರು.
ಇನ್ನು ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೇರಳದ 32,000 ಯುವತಿಯರು ಕಾಣೆಯಾಗಿದ್ದು, ಅವರೆಲ್ಲ ಐಸಿಸ್ ಉಗ್ರವಾದಿ ಸಂಘಟನೆ ಸೇರಿದ್ದಾರೆ ಎಂಬ ಊಹಾಪೋಹ ಸಂಗತಿಯನ್ನು ಚಿತ್ರದ ಟ್ರೇಲರ್ನಲ್ಲಿ ತೋರಿಸಲಾಗಿತ್ತು. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ ನಂತರ ಅದನ್ನು ಬದಲಿಸಲಾಯಿತು! ಈ ಚಿತ್ರದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಸಿನಿಮಾ ಬಿತ್ತುತ್ತಿರುವ ನರೇಟಿವ್ ಬಗ್ಗೆ ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಹಲವರು ಪ್ರಶ್ನೆ ಮಾಡಿದರು. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಡಿ ಹೊಗಳಿದ್ದರು! ಕಪೋಲ ಕಲ್ಪಿತ ಲವ್ ಜಿಹಾದ್ ಸುತ್ತಮುತ್ತ ಹೆಣೆಯಲಾಗಿದ್ದ ಈ ಚಿತ್ರ ಇಸ್ಲಾಮೋಫೋಬಿಯಾ ಹೆಚ್ಚಿಸುವ ಕೆಲಸ ಮಾಡಿತು. ₹20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ₹300 ಕೋಟಿ ಗಳಿಸಿತ್ತು. ಈ ಚಿತ್ರದ ಯಶಸ್ಸಿನ ನಂತರ ಇದೇ ಕಥಾ ಹಂದರ ಮತ್ತಷ್ಟು ಚಿತ್ರಗಳು ತೆರೆಗೆ ಅಪ್ಪಳಿಸಿದವು.
ತನ್ನ ಸೈದ್ಧಾಂತಿಕ ಎದುರಾಳಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸಲು ಬಿಜೆಪಿ ಹಾಗೂ ಸಂಘ ಪರಿವಾರ ಮಾಡಿದ ಅಪಪ್ರಚಾರಗಳು ಅಷ್ಟಿಷ್ಟಲ್ಲ. ಎಡಪಂಥೀಯರು, ಪ್ರಗತಿಪರರು ಅದರಲ್ಲೂ ಕಾಂಗ್ರೆಸ್ ಪಕ್ಷದವರ ವಿರುದ್ಧ ನಡೆಸಿದ ದಾಳಿ ಊಹಾತೀತ. ಎದುರಾಳಿಗಳನ್ನು ದುರ್ಬಲರು, ಸ್ವಾರ್ಥಿಗಳು, ಭ್ರಷ್ಟಾಚಾರಿಗಳು, ದೇಶದ ಹಿತಾಸಕ್ತಿಗೆ ಮುಳುವಾದವರು ಎಂದು ಬಿಂಬಿಸಿ ತಾನು ಮಾತ್ರ ದೇಶ ಆಳಲು ಅರ್ಹ ಎಂಬ ಭಾವನೆಯನ್ನು ಬಿಜೆಪಿ ಜನಸಾಮಾನ್ಯರ ನಡುವೆ ಬಿತ್ತಿತು. ಈ ಕೆಲಸಕ್ಕೆ ಸಿನಿಮಾವನ್ನು ಸಶಕ್ತವಾಗಿ ಬಳಸಿಕೊಂಡಿತು.
ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಸಾವಿನ ಸುತ್ತ ಹೆಣೆದಿರುವ ದಿ ತಾಷ್ಕೆಂಟ್ ಫೈಲ್ಸ್, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ನಿದ್ದೆಗಡಿಸಿರುವ ಜೆಎನ್ಯು ಬಗೆಗಿನ ಜಹಾಂಗೀರ್ ನ್ಯಾಷನಲ್ ಯುನಿವರ್ಸಿಟಿ, ನಕ್ಸಲರ ವಿರುದ್ಧದ ಬಸ್ತರ್- ದಿ ನಕ್ಸಲ್ ಸ್ಟೋರಿ, ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ ಮೀಸಲಾತಿ ವಿರೋಧಿಸುವ ಹುರ್ದಂಗ್ ಚಿತ್ರಗಳು ಇದೇ ಮಾದರಿಯವು.

ಈ ಸಿನಿಮಾಗಳ ಮೂಲಕ ತನ್ನ ಸಿದ್ಧಾಂತವನ್ನು ವಿರೋಧಿಸುವ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಪ್ರಾಧ್ಯಾಪಕರು, ದಲಿತರು, ಆದಿವಾಸಿಗಳು ಹಾಗೂ ಸಾಮಾಜಿಕ ಬದಲಾವಣೆಗೆ ಹೋರಾಡುತ್ತಿರುವ ಎನ್ಜಿಒಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಯಿತು.
ಸರ್ಕಾರದ ವೈಫಲ್ಯಗಳನ್ನೇ ಸಾಧನೆಗಳು ಎಂದು ಬಿಂಬಿಸುವ ಪ್ರಯತ್ನ ಈಗ ನಡೆಯುತ್ತಿದೆ. ಅದಕ್ಕೆ ಸಿನಿಮಾವನ್ನು ಬಳಸಲಾಯಿತು. ದಿ ವ್ಯಾಕ್ಸೀನ್ ವಾರ್, ಆರ್ಟಿಕಲ್ 370, ಟಾಯ್ಲೆಟ್- ಏಕ್ ಪ್ರೇಮ್ ಕಥಾ, ಮಿಷನ್ ಮಂಗಲ್ ಚಿತ್ರಗಳ ಮೂಲಕ ಎಲ್ಲ ಶ್ರೇಯಸ್ಸನ್ನು ಒಬ್ಬ ವ್ಯಕ್ತಿಗೆ ಸಲ್ಲಿಸುವ ಕೆಲಸ ನಡೆಯಿತು.

ಇಷ್ಟೆಲ್ಲಾ ನಿರಾಶಾದಾಯಕ ಬೆಳವಣಿಗೆಗಳ ನಡುವೆ ಆಶಾದಾಯಕ ಬೆಳವಣಿಗೆಯೊಂದು ದೇಶದಲ್ಲಿ ಕಂಡುಬರುತ್ತಿದೆ. ಬೆರಣಿಕೆಯ ಪ್ರೊಪಗಾಂಡಾ ಸಿನಿಮಾಗಳು ಮಾತ್ರ ಯಶಸ್ಸಿನ ರುಚಿ ನೋಡಿವೆ. ಜನರು ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ದ್ವೇಷದ ಬೆಳೆ ಬಿತ್ತಿ ಲಾಭದ ಫಸಲು ಪಡೆಯಲು ಯತ್ನಿಸುವ ಇಂತಹ ಚಿತ್ರಗಳನ್ನು ತಿರಸ್ಕರಿಸುತ್ತಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಬಿಡುಗಡೆಯಾಗಿದ್ದ, ಗೋಧ್ರಾ ರೈಲು ಹತ್ಯಾಕಾಂಡ ಸುತ್ತ ಹೆಣೆಯಲಾಗಿದ್ದ ‘ದಿ ಸಬರಮತಿ ರಿಪೋರ್ಟ್’ ಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಇಡೀ ಕ್ಯಾಬಿನೆಟ್ ವೀಕ್ಷಿಸುವ ಮೂಲಕ ಚಿತ್ರಕ್ಕೆ ಬೆಂಬಲ ನೀಡಿತು. ಇದರ ಹೊರತಾಗಿಯೂ ಚಿತ್ರ ಮಕಾಡೆ ಮಲಗಿತ್ತು!
History Repeats Itself ಎನ್ನುವ ಮಾತಿದೆ. ನಾಜಿ ಜರ್ಮನಿಯಲ್ಲಿ ಕಂಡುಬರುತ್ತಿದ್ದ ವಿದ್ಯಮಾನಗಳು ಈಗ ಭಾರತದಲ್ಲಿ ಕಂಡು ಬರುತ್ತಿದೆ. ಭಾರತೀಯರು ದ್ವೇಷ ಸಿದ್ಧಾಂತವನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೊಪಗಾಂಡಾ ಸಿನಿಮಾಗಳು ಮಕಾಡೆ ಮಲಗುತ್ತಿರುವುದೇ ಸಾಕ್ಷಿ.





