ಕೆಜಿಎಫ್, ಕಾಂತಾರಾ, ಸಲಾರ್ ಸಿನಿಮಾ ಸೇರಿದಂತೆ ಹಲವು ಖ್ಯಾತ ಸಿನಿಮಾಗಳನ್ನು ನಿರ್ಮಿಸಿರುವ ಕರ್ನಾಟಕದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ಕನ್ನಡ ಸಿನಿಮಾಗಳು ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ.
ಹೊಂಬಾಳೆ ನಿರ್ಮಾಣ ಮಾಡಿರುವ ಮೊದಲ ತಮಿಳು ಸಿನಿಮಾ, ‘ರಘುತಾತ’ ಟೀಸರ್ ನಿನ್ನೆ ಬಿಡುಗಡೆ ಆಗಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣದ ರಾಜ್ಯಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿರುವ ‘ಹಿಂದಿ ಹೇರಿಕೆ’ಯ ಕಥಾವಸ್ತು ಒಳಗೊಂಡಿದೆ.
ಸಿನಿಮಾದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಿದ್ದು, ‘ಹಿಂದಿ ಹೇರಿಕೆ’ ವಿರೋಧಿ ಹೋರಾಟಗಾರ್ತಿಯಾಗಿ ನಟಿಸಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಟೀಸರ್ನಲ್ಲಿ, ‘ಹಿಂದಿ ತೆರಿಯಾದ್ ಪೋಡಾ’ ಎಂಬ ಡೈಲಾಗ್ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ವೇದಿಕೆಯೊದಗಿಸಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡಿರುವ ಟೀಸರ್ ಗಮನ ಸೆಳೆಯುತ್ತಿದೆ.
Get ready to experience the ultimate comedy extravaganza that celebrates the misadventures of Kayalvizhi in #Raghuthatha, a comedy like no other.
Coming soon to a cinema near you!கயல்விழியின் அட்டகாசமான நகைச்சுவை பயணத்தை காண தயாராகுங்கள்.
#ரகுதாத்தா, விரைவில் உங்கள் அருகில்… pic.twitter.com/JbxqS1uvx8— Keerthy Suresh (@KeerthyOfficial) January 12, 2024
‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ‘ರಘುತಾತ’ ಒಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ.
ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ಎಲ್ಲ ಭಾರತದ ರಾಜ್ಯಗಳು ದಶಕಗಳಿಂದಲೂ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿವೆ. ತಮಿಳುನಾಡಿನಲ್ಲಿ ಈ ಬಗ್ಗೆ ದೊಡ್ಡ ಆಂಧೊಲದ ದಶಕಗಳ ಹಿಂದೆಯೇ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣದ ರಾಜ್ಯಗಳಲ್ಲಿ ಪ್ರವಾಸಕ್ಕೆ ಬಂದ ಸಂದರ್ಭದಲ್ಲೂ ಕೂಡ, ಹಿಂದಿ ಹೇರಿಕೆ ವಿಚಾರ ಹಲವು ಬಾರಿ ಚರ್ಚೆಗೊಳಗಾಗಿತ್ತು. ಈಗ ಅದೇ ವಿಷಯವನ್ನು ಇರಿಸಿಕೊಂಡು ‘ರಘುತಾತ’ ಸಿನಿಮಾ ನಿರ್ಮಿಸಲಾಗಿದೆ.

ಕೀರ್ತಿ ಸುರೇಶ್ ಸಿನಿಮಾದ ನಾಯಕಿಯಾಗಿ ನಟಿಸಿದ್ದು, ವಿದ್ಯಾರ್ಥಿನಿಯಾಗಿ ನಂತರ ಶಿಕ್ಷಕಿಯಾಗಿ ಹೋರಾಟಗಾರ್ತಿಯಾಗಿ ಅವರ ಪಾತ್ರ ಹಿಂದಿ ಹೇರಿಕೆಯ ವಿರುದ್ಧ ಮಾಡಿದ ಹೋರಾಟ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮರ್ಡರ್ ಮಿಸ್ಟರಿ, ಲವ್ ಸ್ಟೋರಿ, ತಾತ-ಮೊಮ್ಮಗಳ ಭಾವುಕ ಸಂಬಂಧದ ಎಳೆಗಳು ಸಹ ಇವೆಯೆಂಬುದನ್ನು ಟೀಸರ್ನಲ್ಲಿ ಸಣ್ಣದಾಗಿ ತಿಳಿಸಲಾಗಿದೆ.
‘ರಘು ತಾತ’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಜೊತೆಗೆ ಎಂಎಸ್ ಭಾಸ್ಕರ್, ರವೀಂದ್ರ ವಿಜಯ್ ಇನ್ನೂ ಕೆಲವರು ನಟಿಸಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ʻಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ.. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿಲ್ಲ, ಆದರೆ ಟೀಸರ್ನ ಅಂತ್ಯದಲ್ಲಿ ‘Coming Soon’ ಎನ್ನುವ ಮೂಲಕ ಶೀಘ್ರವೇ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಸದ್ಯ ಈ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಹಲವು ಮಂದಿ ಕಮೆಂಟ್ ಹಾಕುತ್ತಿದ್ದು,”ಟೀಸರ್ ಮಾತ್ರ ಸೂಪರ್ ಆಗಿದೆ. ಕಥೆ ಏನಿದೆಯೋ ಗೊತ್ತಿಲ್ಲ. ಆದರೆ ಟೀಸರ್ನಲ್ಲಿ ಇರುವ ಕೆಲವು ಡೈಲಾಗ್ಗಳು ಹಲವರನ್ನು ಕಂಗೆಡಿಸಿದೆ. ಸಿನಿಮಾ ಬಿಡುಗಡೆಗೆ ಕಾಯುತ್ತಿರುವೆ” ಎಂದು ಹಲವು ನೆಟ್ಟಿಗರು ಪೋಸ್ಟ್ ಹಾಕುತ್ತಿದ್ದಾರೆ.





