‘ರವಿಕೆ ಪ್ರಸಂಗ’ ರಿವ್ಯೂ: ಅವಿವಾಹಿತ ಹೆಣ್ಣಿನ ಹಾಡು-ಪಾಡು

Date:

’ರವಿಕೆ ಪ್ರಸಂಗ’ವಂತೆ. ಓಹ್, ಹೆಸರು ನೋಡಿದರೆ ಇದ್ಯಾವುದೋ ರತಿ ರಹಸ್ಯವೆಂದು ಭಾವಿಸುವವರೇ ಹೆಚ್ಚು. ನಮ್ಮ ಆಧುನಿಕ ಜಗತ್ತು ’ರವಿಕೆ/ಕುಪ್ಪಸ’ ಇತ್ಯಾದಿಗಳಿಗೆ ಲೈಂಗಿಕತೆಯ ಲೇಪ ಹಚ್ಚಿರುವುದರಿಂದ ಸಹಜ ಭಾಷೆಯೂ ಅಸಹಜವಾಗಿ ಕಾಣಿಸುತ್ತದೆ. ಲೈಂಗಿಕ ಶಿಕ್ಷಣದ ಕೊರತೆಯೂ ಇದರಲ್ಲಿ ಇದೆ, ಬಿಡಿ. ಆದರೆ ಇದು ಎ ಸರ್ಟಿಫಿಕೇಟ್ ಸಿನಿಮಾವಂತೂ ಅಲ್ಲ. ಮನೆ ಮಂದಿಯೆಲ್ಲ ಕೂತು ನೋಡಬಹುದಾದ, ಉತ್ತಮ ಕಥಾ ಹಂದರ ಹೊಂದಿರುವ ಸಹ್ಯ ಸಿನಿಮಾ.

ravike story

ಸೀಮಿತ ವರ್ಗವನ್ನಷ್ಟೇ ಸೆಳೆಯುವ ಕಲಾತ್ಮಕತೆ ಹೆಸರಿನ ಪೇಲವ ಸಿನಿಮಾಗಳು ಮತ್ತು ಲಾಜಿಕ್‌ಗಳಿಲ್ಲದ ಮನರಂಜನಾ ಸಿನಿಮಾಗಳ ನಡುವೆ – ಎರಡನ್ನೂ ಹದವಾಗಿ ಬೆರೆಸಿ ಕಥೆಗೆ ಆದ್ಯತೆ ಕೊಟ್ಟ ಮಾದರಿಗಳು ಹುಟ್ಟಿಕೊಂಡವು. ಇದನ್ನು ‘ಬ್ರಿಡ್ಜ್‌ ಸಿನಿಮಾ’ ಎಂದು ಕರೆದುಕೊಂಡಿದ್ದೇವೆ. ಮಲಯಾಳಂ ಚಿತ್ರರಂಗ ಕಳೆದ ಒಂದು ದಶಕದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದು ಈ ಮಾದರಿಯ ಸಿನಿಮಾಗಳ ಮೂಲಕವೇ. ಕನ್ನಡದಲ್ಲೂ ಇತ್ತೀಚಿನ ವರ್ಷಗಳಲ್ಲಿ ಈ ಬ್ರಿಡ್ಜ್‌ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಅದರ ಮುಂದುವರಿದ ಭಾಗವಾಗಿ ’ರವಿಕೆ ಪ್ರಸಂಗ’ ತೆರೆಕಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಣ್ಣ ಎಳೆಯನ್ನಿಟ್ಟುಕೊಂಡು ಅದರ ಸುತ್ತ ಕಥಾ ಹಂದರವನ್ನು ಹೆಣೆಯುವುದು, ಸುರಳಿ ಸುರಳಿಯಾಗಿ ಬೇರೆ ಪದರಗಳನ್ನು ಬಿಚ್ಚುವುದು ಕಥನಾ ತಂತ್ರಗಾರಿಕೆಯೂ ಹೌದು. ಮಲಯಾಳಂನ ’ಡ್ರೈವಿಂಗ್ ಲೈಸೆನ್ಸ್‌’ ಸಿನಿಮಾ ಅದಕ್ಕೊಂದು ಅದ್ಭುತ ಸಿನಿಮಾ. ಕಮರ್ಷಿಯಲ್‌ ಎಲಿಮೆಂಟ್‌ಗಳೊಂದಿಗೆ ’ಡ್ರೈವಿಂಗ್ ಲೈಸೆನ್ಸ್‌’ ಸುತ್ತ ತೆರೆದುಕೊಳ್ಳುವ ಅಲ್ಲಿನ ಕಥೆ ಮನುಷ್ಯನೊಳಗಿನ ಹುಸಿ ಮೇಲರಿಮೆ, ಅಭಿಮಾನ, ಸಣ್ಣತನ ಎಲ್ಲವನ್ನೂ ಬಿಚ್ಚಿಟ್ಟಿತ್ತು. ಅಂತಹದ್ದೇ ಕಥೆ ’ರವಿಕೆ ಪ್ರಸಂಗ’.

ಸಂತೋಷ್ ಕೊಡಂಕೇರಿ ಅವರು ನಿರ್ದೇಶಿಸಿರುವ ’ರವಿಕೆ ಪ್ರಸಂಗ’- ರವಿಕೆಯ ನೆಪದಲ್ಲಿ ಮನುಷ್ಯನ ತೊಳಲಾಟ, ಮದುವೆಯ ಸುತ್ತಲಿನ ಜಂಜಾಟ, ದೇಹದ ಕಾರಣಕ್ಕೆ ಅನುಭವಿಸುವ ಅವಮಾನ, ಕಿರಿಕಿರಿ, ಬಾಡಿ ಶೇಮಿಂಗ್‌ ಇದೆಲ್ಲವನ್ನೂ ನವಿರು ಹಾಸ್ಯ ಮತ್ತು ಚಿಂತನೆಯ ಎರಕಕ್ಕೆ ಹಾಕಿ ಮೂಡಿ ಬಂದಿದೆ.

ರವಿಕೆ

ಬೋಳುತಲೆ ಮತ್ತು ಸಣಕಲು ಗಂಡಸಿನ ಕಥೆಯನ್ನು ಒಳಗೊಂಡಿದ್ದ ’ಒಂದು ಮೊಟ್ಟೆಯ ಕಥೆ’ ಸಿನಿಮಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು. ರವಿಕೆ ಪ್ರಸಂಗ ಹೆಣ್ಣೊಬ್ಬಳ ಸುತ್ತ ನಡೆಯುವ ಅಂತಹದ್ದೇ ಸಿನಿಮಾವಾದರೂ ನಿರೂಪಣೆಯಿಂದ ಖಂಡಿತವಾಗಿಯೂ ಭಿನ್ನವಾಗಿ ನಿಂತಿದೆ. ರವಿಕೆಗೂ ದೇಹಕ್ಕೂ ಆ ದೇಹದ ಕಾರಣಕ್ಕೆ ವಿಳಂಬವಾಗುತ್ತಿರುವ ವಿವಾಹಕ್ಕೂ ವಿವಾಹದ ಸುತ್ತ ಉಂಟಾಗುವ ಕೌಟುಂಬಿಕ ಒತ್ತಡ- ಹೀಗೆ ಒಂದೊರಳಗೊಂದು ಬೆರೆತು ಕಥೆ ಸಾಗುತ್ತದೆ. ರವಿಕೆ ಒಂದು ನೆಪವೂ ಹೌದು, ಕಥೆ ಸಾಗಲು ಕೇಂದ್ರ ಬಿಂದುವೂ ಹೌದು. ರವಿಕೆ ಸಣ್ಣ ವಿಷಯ ಬಿಡಿ ಎಂದುಕೊಂಡರೆ ಸಣ್ಣದಾಗಿ ಕಾಣುತ್ತದೆ, ಆದರೆ ಕುಪ್ಪಸದೊಳಗೆ ಅವಿತಿರುವ ತೊಳಲಾಟಗಳನ್ನು ತೆರೆದು ನೋಡಿದರೆ ಈ ರವಿಕೆ ಸಣ್ಣ ವಿಷಯವೂ ಅಲ್ಲ, ಇದು ಕೇವಲ ಕುಪ್ಪಸದ ಕಥೆಯೂ ಅಲ್ಲ. ಈ ಕಾರಣಕ್ಕೆ ’ರವಿಕೆ ಪ್ರಸಂಗ’ ವಿಶಿಷ್ಟ ಪ್ರಯೋಗ.

ಕಥಾ ನಾಯಕಿ ದಡೂತಿ, ಆದರೆ ಒಂದು ರೀತಿ ಮುಗ್ಧಳು ಹೌದು. ನೋಡುವ ಜಗತ್ತು ತನ್ನನ್ನು ಹೇಗೆ ಭಾವಿಸುತ್ತದೆ ಎಂಬ ಅರಿವು ಆಕೆಗಿದೆ. ದೇಹದ ತೂಕ ಇಳಿಸಬೇಕೆಂಬ ಪ್ರಯೋಗಕ್ಕೂ ಇಳಿಯುತ್ತಾಳೆ. ಲೋಕ ಯಾವುದನ್ನು ಸುಂದರ ಎಂದು ಕಲ್ಪಿಸಿಕೊಂಡಿದೆಯೋ ಅದಕ್ಕೆ ಅವಳೂ ಮಾರು ಹೋಗಿದ್ದಾಳೆ. ತನ್ನ ಮದುವೆಯಾಗಬೇಕಿರುವ ಹುಡುಗ ಸುರದ್ಫ್ರೂಪಿ ಆಗಿರಬೇಕೆಂಬ ಕನಸುಗಳಿವೆ. “ಆದರೆ ನೀನು ಇಷ್ಟಪಟ್ಟರೆ ಸಾಕೇ, ನಿನ್ನನ್ನೂ ಇಷ್ಟಪಡಬೇಕಲ್ಲವೇ?” ಎಂಬ ಕುಹಕಗಳಿಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಎನ್‌ಆರ್‌ಐ ಗಂಡೊಬ್ಬನನ್ನು ಇಂಪ್ರೆಸ್ ಮಾಡಲು ಹೋಗುವ ಆಕೆ ’ಸ್ಲೀವ್ ಲೆಸ್‌’ ಬ್ಲೌಸ್ ತೊಡಬೇಕೆಂಬ ಭ್ರಮೆಗೆ ಬಿದ್ದು, ಒತ್ತಡಕ್ಕೆ ಸಿಲುಕಿ ಏನೆಲ್ಲ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾಳೆ ಎಂಬುದನ್ನು ’ರವಿಕೆ ಪ್ರಸಂಗ’ವಾಗಿ ಕಟ್ಟಿಕೊಡಲಾಗಿದೆ.

ಹೆಣ್ಣು ತೊಡುವ ಬಟ್ಟೆಯ ಕಾರಣಕ್ಕೆ ಅವಳನ್ನು ಹೀಯಾಳಿಸುವ ಮನಸ್ಥಿತಿಗಳಿಗೂ ಇಲ್ಲಿ ಪಾಠ ಹೇಳಲಾಗಿದೆ. ಸ್ಲೀವ್ ಲೆಸ್‌ ಬ್ಲೌಸ್‌ ವಾಸ್ತವದಲ್ಲಿ ಬೆತ್ತಲಾಗಿಸುವುದು ಜನರ ವಿಕೃತತೆಯನ್ನಷ್ಟೇ ಎಂಬುದನ್ನು ಸೂಚ್ಯವಾಗಿ ದಾಟಿಸುವ ಸಂಭಾಷಣೆ, ದೃಶ್ಯಗಳು ಸಿನಿಮಾದಲ್ಲಿ ಸಶಕ್ತವಾಗಿ ಮೂಡಿಬಂದಿವೆ. ಕೋರ್ಟ್ ರೂಮ್ ದೃಶ್ಯಗಳು ವಾಚ್ಯವಾಗುತ್ತಿವೆ ಎನ್ನುವಷ್ಟರಲ್ಲಿ ದೃಶ್ಯಗಳಿಗೆ ಒತ್ತು ಕೊಡಬೇಕೆಂಬ ಎಚ್ಚರಿಕೆ ನಿರ್ದೇಶಕರಿಗೆ ಖಂಡಿತ ಇದೆ.

ಇಲ್ಲಿನ ಪ್ರಮುಖ ಪಾತ್ರ ಸಾನ್ವಿ ಫೆಮಿನಿಸ್ಟ್ ಖಂಡಿತ ಅಲ್ಲ. ಮಧ್ಯಮವರ್ಗದ ಕುಟುಂಬವೊಂದರ ಸಾಮಾನ್ಯ ಹೆಣ್ಣುಮಗಳು. ಆಕೆ ದೇಹದ ಕಾರಣಕ್ಕೆ ಕೀಳರಿಮೆ ಅನುಭವಿಸುವ ರೀತಿಯಲ್ಲಿ ಪಾತ್ರವನ್ನು ನಿರ್ವಹಿಸದೆ ಇರುವುದು ಇಲ್ಲಿನ ಹೆಚ್ಚುಗಾರಿಕೆ.

ಒಂದು ಮೊಟ್ಟೆಯ ಕತೆಯಲ್ಲಿ ಕಾಣುವ ಅತಿಯಾದ ಕೀಳರಿಮೆ, ಅಸೂಯೆ ಇಲ್ಲಿನ ಸಾನ್ವಿ ಪಾತ್ರದಲ್ಲಿ ಕಾಣುವುದಿಲ್ಲ. ಅಂತಹ ಜಾಡಿಗೆ ಬೀಳುವ ಸಾಧ್ಯತೆಗಳಿಂದ ಪಾರಾಗುವ ರೀತಿಯಲ್ಲಿ ಪಾತ್ರವನ್ನು ಮುಗ್ಧ, ತುಂಟಾಟದ ಪರಿಧಿಗೆ ಎಳೆಯಲಾಗಿದೆ. ಹೀಗಾಗಿ ಕಥೆ ಸರಾಗವಾಗಿ ಸಾಗುತ್ತದೆ.

ಸಣ್ಣ ಘಟನೆಯೊಂದು ಕೋರ್ಟ್ ಮೆಟ್ಟಿಲೇರಿ, ದೊಡ್ಡ ಸುದ್ದಿಯಾದಾಗ ಸಾಮರಸ್ಯದ ಪಾಠವನ್ನು ಕಥಾನಾಯಕಿ ಸಾನ್ವಿಗೆ ಮುಸ್ಲಿಂ ಆಟೋ ಡ್ರೈವರ್‌ ಲತೀಫ ಹೇಳುತ್ತಾನೆ. ತನ್ನದೇ ಜೀವನದ ಅನುಭವದ ಮೂಲಕ ಆತ ತಿಳಿಹೇಳುವುದನ್ನು ಇಲ್ಲಿ ಗಮನಿಸಬೇಕು. ಸಾಮರಸ್ಯದ ಪಾಠವನ್ನು ಲತೀಫ್ ಮೂಲಕ ದಾಟಿಸುವಲ್ಲಿ ನಿರ್ದೇಶಕರ ಸೂಕ್ಷ್ಮತೆ ಅರ್ಥವಾಗುತ್ತದೆ. ಇದು ಇಂಡಿಯಾದ ವಾಸ್ತವ ಬದುಕು. “ನಿತ್ಯವೂ ಒಬ್ಬರನ್ನೊಬ್ಬರು ನೋಡುತ್ತಾ ಬದುಕಬೇಕು, ಯಾವುದೋ ಒಂದು ಘಟನೆಯಿಂದ ಸಂಬಂಧ, ಪ್ರೀತಿ, ಸ್ನೇಹಗಳು ಹಾಳಾಗಲು ಸಾಧ್ಯವೇ?” ಎನ್ನುವ ಲತೀಫ ಎರಡು ದೃಶ್ಯಗಳಷ್ಟೇ ಕಾಣಿಸಿಕೊಂಡರೂ ಉದ್ದೇಶಪೂರ್ವಕವಾಗಿ ಈ ಪಾತ್ರವನ್ನು ಕಟ್ಟಲಾಗಿದೆ ಎನಿಸುತ್ತದೆ. ಆದರೆ ಈ ಪಾತ್ರ ಕಥೆಗೆ ಪೂರಕವಾಗಿದೆ.

ಹೆಣ್ಣಿನ ಜೀವನ ಮದುವೆಯಷ್ಟೇ ಎಂದು ಭಾವಿಸುವ ಭಾರತೀಯ ಸಮಾಜದ ಮಿತಿಗೂ ಒಂದಿಷ್ಟು ಸಾಣೆ ಹಿಡಿಯುವ ಕೆಲಸವನ್ನು ಈ ಸಿನಿಮಾ ಮಾಡಿದೆ.

ಕೋರ್ಟ್ ರೂಮ್‌ ದೃಶ್ಯವೊಂದರಲ್ಲಿ ಲಾಯರ್‌ ಪಾತ್ರಧಾರಿ ನ್ಯಾಯಾಧೀಶರ ಮೇಲೆ ಕೂಗಾಡುವುದು ಅತಿ ಎನಿಸುತ್ತದೆ. ಇದನ್ನು ಸ್ವಲ್ಪ ಎಚ್ಚರಿಕೆಯಿಂದ ನಿಭಾಯಿಸಬಹುದಿತ್ತು. ಹೆಣ್ಣಿಗೆ ದೇಹ ಸೌಂದರ್ಯದ ಕಾನ್ಶಿಯಸ್‌ ಮುಖ್ಯವೆಂಬ ಭ್ರಮೆಯನ್ನು ಒಡೆಯುವುದಕ್ಕೆ ಇನ್ನೊಂದಿಷ್ಟು ಸ್ಪೇಸ್‌ ನೀಡಬೇಕಿತ್ತು ಅನಿಸುತ್ತದೆ. ಕೆಲವು ಮಿತಿಗಳ ನಡುವೆಯೂ ’ರವಿಕೆ ಪ್ರಸಂಗ’ ಉತ್ತಮ ಪ್ರಯತ್ನವಂತೂ ಹೌದು.

ನ್ಯಾಯಾಧೀಶೆಯ ಪಾತ್ರದಲ್ಲಿ ಸುಮನ್ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ’ಸಾನ್ವಿ’ ಪಾತ್ರಕ್ಕೆ ಗೀತಾ ಭಾರತಿ ಭಟ್ ಜೀವ ತುಂಬಿದ್ದಾರೆ. ರಾಕೇಶ್ ಮಯ್ಯ, ಹನುಮಂತೇಗೌಡ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್‌, ಸಂಪತ್ ಮೈತ್ರೇಯ, ಪ್ರವೀಣ್ ಅಥರ್ವ ಮೊದಲಾದವರು ತಾರಾಗಣದಲ್ಲಿದ್ದಾರೆ. ಅಂದಹಾಗೆ ಈ ಸಿನಿಮಾದ ಕಥೆಯನ್ನು ಬರೆದಿರುವವರು ಪಾವನಾ ಸಂತೋಷ್. ಇವರು ನಿರ್ದೇಶಕ ಸಂತೋಷ್‌ ಅವರ ಪತ್ನಿ. ಗಂಡ- ಹೆಂಡತಿ ಸೇರಿಕೊಂಡು ಉತ್ತಮವಾದ ರವಿಕೆಯನ್ನು ಹೊಲಿದಿದ್ದಾರೆ ಎನ್ನಬಹುದು.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...