ಪ್ರತಿ ವಾರ ಒಂದಿಲ್ಲೊಂದು ಸಿನಿಮಾ ರಿಲೀಸ್ ಆಗ್ತಾನೇ ಇರುತ್ತೆ. ಒಮ್ಮೊಮ್ಮೆ ಒಂದು-ಎರಡು, ಕೆಲವೊಮ್ಮೆ ಒಂದೇ ವಾರದಲ್ಲಿ ಹಲವು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತವೆ. ಸದ್ಯ ಈ ವಾರ ನೀನಾಸಂ ಸತೀಶ್, ಆದಿತ್ಯ, ಧನ್ವೀರ್ ರನ್ನು ಹೊರತು ಪಡಿಸಿ ಬಹುತೇಕ ಹೊಸ ಪ್ರತಿಭೆಗಳ ಸಿನಿಮಾಗಳು ತೆರೆ ಮೇಲೆ ಮಿಂಚುತ್ತಿವೆ.
ಈ ವಾರ ಬಿಡುಗಡೆಯಾಗಿರುವ ಚಿತ್ರಗಳ ಪಟ್ಟಿ ಹೀಗಿದೆ..
ʼದ ರೈಸ್ ಆಫ್ ಅಶೋಕʼ
ದಿವಂಗತ ವಿನೋದ್ ದೊಂಡಾಲೆ ಅವರ ಕನಸಿನ ಕೂಸು ʼಅಶೋಕ ಬ್ಲೇಡ್ʼ, ಅವರ ಅಗಲಿಕೆಯ ನಂತರ ʼದ ರೈಸ್ ಆಫ್ ಅಶೋಕʼನಾಗಿ ತೆರೆಗೆ ಬಂದಿದೆ. ನಟ ಸತೀಶ್ ನೀನಾಸಂ ಹಾಗೂ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿರುವ ಚಿತ್ರವನ್ನು ಮನು ಶೇಡ್ಗಾರ್ ನಿರ್ದೇಶಿಸಿದ್ದಾರೆ. ಚಿತ್ರ 70ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಸತೀಶ್ ಮಿಂಚಿದ್ದಾರೆ. ನಟನೆ ಮಾತ್ರವಲ್ಲದೆ, ಸಾಹಿತ್ಯ, ಗಾಯನ ಹಾಗೂ ಇಬ್ಬರು ನಿರ್ಮಾಕರೊಂದಿಗೆ ತಾವೂ ನಿರ್ಮಾಣದ ಹೊಣೆ ಸತೀಶ್.
ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಶೂಟಿಂಗ್ ಶುರುವಾದಾಗಿನಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. 70ರ ದಶಕದ ಕ್ರಾಂತಿಕಾರಿ ಯುವಕನ ಬದುಕು, ಸಂಘರ್ಷಗಳು ಪ್ರಸ್ತುತಕ್ಕೆ ಹೇಗೆ ಹೊಂದಿಕೆಯಾಗಲಿವೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎನ್ನುತ್ತದೆ ಚಿತ್ರತಂಡ.
ಹಯಗ್ರೀವ
ನಟ ಧನ್ವೀರ್ ನಾಯಕನಾಗಿರುವ ಚಿತ್ರ ಹಯಗ್ರೀವ. ಧನ್ವೀರ್ಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಕಥಾ ಹಂದರವಿರುವ ಚಿತ್ರವನ್ನು ರಘುಕುಮಾರ್ ನಿರ್ದೇಶಿಸಿ, ಮಂಜುನಾಥ್ ನಿರ್ಮಿಸಿದ್ದಾರೆ. ಹಿರಿಯ ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಶೋಭರಾಜ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಗಿರೀಶ್ ಗೌಡ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ಇಂದು ಬೆಳಗ್ಗೆಯೇ ಶೋ ಆರಂಭಿಸಬೇಕಿದ್ದ ಚಿತ್ರ ಕಾರಣಾಂತರಗಳಿಂದ ಸಂಜೆ 4.30ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೋಡಿ ಹರಸಿ ಎಂದು ನಿರ್ದೇಶಕ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವುದಾಗಿ ವರದಿಯಾಗಿದೆ.

ಸೂಪರ್ ಹಿಟ್
ಯೂಟ್ಯೂಬ್ ಸ್ಟಾರ್ ಗೌರವ್ ಶೆಟ್ಟಿ ಹಾಗೂ ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ನಾಯಕರಾಗಿ ಕಾಣಿಸಿಕೊಂಡಿರುವ ʼಸೂಪರ್ ಹಿಟ್ʼ ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ. ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್ಫುಲಿ ಎಂಬ ಟ್ಯಾಗ್ ಲೈನ್ ಕೂಡಾ ಇದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಚಿತ್ರವಿದು. ಕಾಮಿಡಿ ಜಾನರ್ ಸಿನಿಮಾಗೆ ನಿರ್ದೇಶಕ ವಿಜಯಾನಂದ್ ಆಕ್ಷನ್ ಕಟ್ ಹೇಳಿದ್ದಾರೆ.
ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟೆನ್ನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ತಾರಾಬಳಗದಲ್ಲಿದ್ದು, ವಿ.ನಾಗೇಂದ್ರ ಪ್ರಸಾದ್ ಕೂಡಾ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹೈ ವೋಲ್ಟೋಜ್ ರಕ್ಷಕ
ಆ್ಯಕ್ಷನ್ ಥ್ರಿಲ್ಲರ್ ಜಾನರ್ನ ʼಹೈ ವೋಲ್ವೇಜ್ ರಕ್ಷಕʼ ಚಿತ್ರಕ್ಕೆ ರಾಜೇಶ್ ಮೂರ್ತಿ ನಿರ್ದೇಶನ ನೀಡಿದ್ದು, ಯಶಸ್ವಾ ಮೂರ್ತಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಹರ್ಶಿತಾ ಗೌರಿ ಅಭಿನಯಿಸಿದ್ದಾರೆ. ಮನು ಪಾಂಡ್ಯ ಮತ್ತು ನೇವಿ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ದೇಹ ಬದಲಿಸುವ ಅಪರೂಪದ ಹಾಗೂ ಕುತೂಹಲಕಾರಿ ಪರಿಕಲ್ಪನೆಯನ್ನಾಧರಿಸಿದ ಈ ಚಿತ್ರ, ವಿಶ್ವ ಯುದ್ಧದ ಕಾಲಘಟ್ಟದಲ್ಲಿ ನಡೆದಿದ್ದ ವೈಜ್ಞಾನಿಕ ಪ್ರಯೋಗಗಳ ಹಿನ್ನೆಲೆಯನ್ನು ಸ್ಪರ್ಶಿಸುತ್ತದೆ. ಕಥೆಯಲ್ಲಿ ನಾಯಕ ವಿಧಿವಿಜ್ಞಾನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞನಾಗಿದ್ದು, ಆತ ದೇಹ ಬದಲಿಸುವ ತಂತ್ರವನ್ನು ಕಂಡುಹಿಡಿಯುತ್ತಾನೆ. ಆ ಅನ್ವೇಷಣೆಯಿಂದ ಹುಟ್ಟುವ ಪರಿಣಾಮಗಳು ಹಾಗೂ ಅದರಿಂದ ಉಂಟಾಗುವ ಘಟನೆಗಳೇ ಚಿತ್ರದ ಕಥಾವಸ್ತುವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರು ಹಾಗೂ ಕೆಜಿಎಫ್ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು, ಮೂರು ಹಾಡುಗಳು ಚಿತ್ರದಲ್ಲಿವೆ. ಸತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿದ್ದು, ನಿರ್ದೇಶಕ ರಾಜೇಶ್ ಮೂರ್ತಿ ಸಂಕಲನಕ್ಕೂ ಕೈಜೋಡಿಸಿದ್ದಾರೆ.

ಪ್ರೇಮಿ
ಪ್ರೇಮಿ ಚಿತ್ರವು ಪ್ರೀತಿಯನ್ನು ಕೇಂದ್ರವಾಗಿಟ್ಟುಕೊಂಡ ಕಥಾವಸ್ತು ಹೊಂದಿದ್ದು, ಎಸ್. ಪ್ರದೀಪ್ ವರ್ಮ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಭಿನ್ನ ಪ್ರದೇಶಗಳ ನೈಜತೆಯನ್ನು ಹಿಡಿದಿಡುವ ಉದ್ದೇಶದಿಂದ ದಾವಣಗೆರೆ, ದೇವರ ಬೆಳಕೆರೆ, ಗೋಕರ್ಣ, ಕನಕಪುರ, ಚಿಕ್ಕಮಗಳೂರು ಮತ್ತು ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಥೆಯನ್ನು ಟಿ.ಎಸ್. ಅಕ್ಕಮಹಾದೇವಿ ರಚಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಚಿತ್ರದ ದೃಶ್ಯಭಾಷೆಗೆ ಗೌತಮ್ ಮಟ್ಟಿ ಛಾಯಾಗ್ರಹಣ ನೆರವಾಗಿದ್ದು, ಸಂಜೀವ್ ರೆಡ್ಡಿ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ. ಅದ್ವಿಕ್ ನಾಯಕನಾಗಿ ನಟಿಸಿದ್ದು, ಸಾತ್ವಿಕ, ಶೋಭಿತ, ಎಚ್.ಜಿ. ವೀರೇಶ್, ದ್ವಿತ್ ಕೆ. ಗೌಡ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೀರ ಕಂಬಳ
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ವೀರಕಂಬಳ ಸಿನಿಮಾ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಕಂಬಳ ಓಟವನ್ನು ಕೇಂದ್ರವಾಗಿಟ್ಟುಕೊಂಡು ತೆರೆ ಕಂಡಿರುವ ಚಿತ್ರ. ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ನಾಯಕನಾಗಿ ನಟಿಸಿದ್ದು, ವಿಜಯ್ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನಿತ ವಿಜಯ್ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಪ್ರಕಾಶ್ ರಾಜ್ ಮತ್ತು ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ತುಳು ರಂಗಭೂಮಿಯ ಪ್ರಸಿದ್ಧ ಕಲಾವಿದರು ಚಿತ್ರಕ್ಕೆ ಬಲ ತುಂಬಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಆರ್. ಗಿರಿ ಛಾಯಾಗ್ರಹಣ ಮತ್ತು ಶ್ರೀನಿವಾಸ್ ಎಸ್. ಬಾಬು ಸಂಕಲನದ ಜವಾಬ್ದಾರಿಯನ್ನು ವಹಿಸಿದ್ದಾರೆ.

ಆಯುಧ
ದೇವರಾಜ್ ಕುಮಾರ್ ಅವರು ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಹೊತ್ತು ನಾಯಕನಟನಾಗಿಯೂ ಅಭಿನಯಿಸಿರುವ ಸಿನಿಮಾ ಆಯುಧ. ಆ್ಯಕ್ಷನ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಡ್ರಾಮಾ ಮಿಶ್ರಿತ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹೊನ್ನಾವರ, ಬೈಂದೂರು, ಚನ್ನಪಟ್ಟಣ ಮತ್ತು ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.
ಚಿತ್ರದಲ್ಲಿ ಅಮೃತ ಮತ್ತು ಸಂಹಿತ ವಿನ್ಯ ನಾಯಕಿಯರಾಗಿ ಅಭಿನಯಿಸಿದ್ದು, ರಘು, ಸೂರಿ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ. ಸತೀಶ್ ಸ್ಟೀವನ್ ಸಂಗೀತ ಸಂಯೋಜನೆ, ವೀನಸ್ ಮೂರ್ತಿ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಸ್ಟಾರ್ ನಟರ ಸಿನಿಮಾಗಳಾಗಿದ್ದರೆ ಬಿಡುಗಡೆಗೂ ಮುಂಚೆಯೇ ಭರ್ಜರಿ ಪ್ರಚಾರ, ಸಿಕ್ಕಾಪಟ್ಟೆ ಹೈಪ್, ಬಾಕ್ಸ್ ಆಫೀಸ್ ಲೆಕ್ಕಾಚಾರಗಳ ಚರ್ಚೆ ಶುರುವಾಗುತ್ತದೆ. ಟ್ರೇಲರ್ ಬಿಡುಗಡೆಯಿಂದಲೇ ಕೋಟಿ–ಕೋಟಿ ಕಲೆಕ್ಷನ್ ಮಾತು ಕೇಳಿಬರುತ್ತವೆ. ಆದರೆ ನವ ನಟರು ಹಾಗೂ ಹೊಸ ತಂಡಗಳ ಸಿನಿಮಾಗಳಿಗೆ ಅಷ್ಟು ಗಮನ, ಅವಕಾಶ ಮತ್ತು ಸಹಕಾರ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳು ಬರುತ್ತಿಲ್ಲ ಎಂದು ಹೇಳುವುದು ಎಷ್ಟು ನ್ಯಾಯಸಮ್ಮತ?
ಹೊಸ ಪ್ರಯತ್ನಗಳು, ವಿಭಿನ್ನ ಕಥೆಗಳು ಮತ್ತು ಹೊಸ ನಿರ್ದೇಶಕರ ಕೆಲಸಗಳನ್ನು ಪ್ರೇಕ್ಷಕರು ನೋಡಿ, ಅವುಗಳಿಗೆ ಅವಕಾಶ ಕೊಟ್ಟಾಗಲೇ ಅವುಗಳ ಗುಣಮಟ್ಟ ಗೊತ್ತಾಗುವುದು. ಎಲ್ಲ ಚಿತ್ರಗಳೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲು ಸಾಧ್ಯವಿಲ್ಲ; ಎಲ್ಲರಿಗೂ ಅಷ್ಟೊಂದು ಬಜೆಟ್, ದೊಡ್ಡ ಪ್ರಚಾರ ವ್ಯವಸ್ಥೆ ಇರದು. ಆದರೂ ಸಣ್ಣ ಹಾಗೂ ಮಧ್ಯಮ ಬಜೆಟ್ ಸಿನಿಮಾಗಳಲ್ಲೇ ಕೆಲವೊಮ್ಮೆ ಅರ್ಥಪೂರ್ಣ, ಮನಸ್ಸಿಗೆ ತಾಕುವ ಕಥೆಗಳು ಹುಟ್ಟುತ್ತವೆ. ಇಂಥ ಚಿತ್ರಗಳನ್ನು ನೋಡದೇ, ಬೆಂಬಲ ನೀಡದೇ ಇದ್ದರೆ ಹೊಸ ಪ್ರತಿಭೆಗಳು ಬೆಳೆಯುವುದಾದರೂ ಹೇಗೆ?
ಎಲ್ಲ ರೀತಿಯ ಚಿತ್ರಗಳಿಗೂ ಸಮಾನ ಅವಕಾಶ ನೀಡಬೇಕು. ಜೊತೆಗೆ ಪೈರಸಿ ಎಂಬ ಮಹಾಮಾರಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಅಗತ್ಯವೂ ಇದೆ. ಪೈರಸಿಯಿಂದ ಚಿತ್ರರಂಗಕ್ಕೆ ನಷ್ಟದ ಜತೆಗೆ ಹೊಸ ಪ್ರಯೋಗಳಿಗೆ ಕೈ ಹಾಕುವ ಧೈರ್ಯವೂ ಕುಂದುತ್ತದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಸಂಸ್ಕೃತಿ ಬೆಳೆದಾಗಲೇ, ಕನ್ನಡ ಚಿತ್ರರಂಗದಲ್ಲಿ ವೈವಿಧ್ಯತೆ, ಗುಣಮಟ್ಟ ಮತ್ತು ಹೊಸತನ ಉಳಿದುಕೊಳ್ಳಲು ಸಾಧ್ಯ.





