ಜೂನಿಯರ್ ಎನ್ಟಿಆರ್ 30ನೇ ಚಿತ್ರದಲ್ಲಿ ಸೈಫ್ ನಟನೆ
ಕಳೆದ ಮಾರ್ಚ್ನಲ್ಲಿ ಸೆಟ್ಟೇರಿರುವ ಬಹುನಿರೀಕ್ಷಿತ ಚಿತ್ರ
ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಬಳಿಕ ಬಾಲಿವುಡ್ನ ಮತ್ತೊಬ್ಬ ಖ್ಯಾತ ನಟ ಸೈಫ್ ಅಲಿಖಾನ್ ದಕ್ಷಿಣ ಸಿನಿ ರಂಗದತ್ತ ಮುಖ ಮಾಡಿದ್ದಾರೆ. ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅಭಿನಯದ 30ನೇ ಚಿತ್ರದಲ್ಲಿ ಸೈಫ್ ಅಲಿಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೈಫ್ ಅಲಿಖಾನ್, ಜೂನಿಯರ್ ಎನ್ಟಿಆರ್ ಅವರ ಚಿತ್ರದಲ್ಲಿ ಖಳನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಮಂಗಳವಾರ ʼಎನ್ಟಿಆರ್ 30ʼ ಚಿತ್ರದ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸೈಫ್ ಅಲಿಖಾನ್, ಜೂನಿಯರ್ ಎನ್ಟಿಆರ್ ಮತ್ತು ಚಿತ್ರದ ನಿರ್ದೇಶಕ ಕೊರಟಾಲ ಶಿವ ಜೊತೆಗೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೈಫ್ ಅಲಿಖಾನ್ ಅವರ ಪಾತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕೊರಟಾಲ ಶಿವ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಶನ್ ಈ ಚಿತ್ರದ ಮುಹೂರ್ತ ಕಳೆದ ಮಾರ್ಚ್ 23ರಂದು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಜರುಗಿತ್ತು. ಸ್ಟಾರ್ ನಿರ್ದೇಶಕರಾದ ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಚಿತ್ರೀಕರಣಕ್ಕೆ ಚಾಲನೆ ನೀಡುವ ಮೂಲಕ ತಂಡಕ್ಕೆ ಶುಭ ಹಾರೈಸಿದ್ದರು.
ನಿರ್ಲಕ್ಷ್ಯಕ್ಕೊಳಪಟ್ಟ ಭಾರತದ ಕರಾವಳಿ ತೀರದ ಜನರ ಬದುಕಿನ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಕೊರಟಾಲ ಶಿವ ಈ ಹಿಂದೆ ಜೂನಿಯರ್ ಎನ್ಟಿಆರ್ ನಟನೆಯ ʼಜನತಾ ಗ್ಯಾರೇಜ್ʼ ಚಿತ್ರವನ್ನು ನಿರ್ದೇಶಿಸಿದ್ದರು. ಕಡಲ ಕಥನದ ಮೂಲಕ ಈ ಹಿಟ್ ಜೋಡಿ ಮತ್ತೆ ಒಂದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಇನ್ನೂ ಹೆಸರಿಡದ ಈ ಚಿತ್ರ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದೆ.
ಬಾಲಿವುಡ್ನ ಖ್ಯಾತ ನಟಿ ಜಾಹ್ನವಿ ಕಪೂರ್, ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಕೂಡ ದಕ್ಷಿಣ ಸಿನಿ ರಂಗ ಪ್ರವೇಶಿಸುತ್ತಿರುವುದು ವಿಶೇಷ. ಬಹುಭಾಷಾ ನಟ ಪ್ರಕಾಶ್ ರಾಜ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿಕೃಷ್ಣ ಕೆ ಮತ್ತು ಸುಧಾಕರ್ ಮಿಕ್ಕಿಲಿನೇನಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.





