ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಇಂದು ನಿಧನರಾಗಿದ್ದಾರೆ. ರಾಜು ಅವರು ಮಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ನಡೆಯುತ್ತಿದ್ದ ಸಿನಿಮಾವೊಂದರ ಶೂಟಿಂಗ್ ಬಳಿಕ ತಾಳಿಕೋಟೆ ಅವರಿಗೆ ಹೃದಯಾಘಾತ ಸಂಭವಿಸಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ತಾಳಿಕೋಟೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಂಜೆ ಆರು ಗಂಟೆಗೆ ಶೂಟಿಂಗ್ ಮುಗಿದಿದ್ದು, ತಡರಾತ್ರಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ವಾಸವಿದ್ದ ರಾಜು ತಾಳಿಕೋಟೆ ಅವರು ಉತ್ತರ ಕರ್ನಾಟಕ ಶೈಲಿಯ ಹಾಸ್ಯಗಳಿಗೆ ಜನಪ್ರಿಯರು. ಬಿಗ್ಬಾಸ್ ಸ್ಪರ್ಧಿಯೂ ಆಗಿದ್ದರು. ಸದ್ಯ ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ನಲ್ಲಿದ್ದರು ಎಂದು ವರದಿಯಾಗಿದೆ.
ತಮ್ಮ ತಂದೆ ತಾಯಿ ಸ್ಥಾಪಿಸಿದ ಖಾಸ್ಗತೇಶ್ವರ ನಾಟ್ಯ ಸಂಘದಲ್ಲಿ ಪ್ರದರ್ಶನಕ್ಕೆ ಹೋಗುತ್ತಿದ್ದ ತಾಳಿಕೋಟೆ ಅವರು, ನಾಲ್ಕನೇ ತರಗತಿಯಲ್ಲೇ ಶಾಲೆ ತೊರೆದಿದ್ದರು. ತಂದೆಯ ನಂತರ ತಾಳಿಕೋಟೆ ಮತ್ತು ಅವರ ಅಣ್ಣ ಸೇರಿ ನಾಟಕ ಕಂಪನಿ ನಡೆಸುತ್ತಿದ್ದರು. ‘ಕಲಿಯುಗದ ಕುಡುಕ’ ತಾಳಿಕೋಟೆ ಅವರ ಪ್ರಸಿದ್ಧ ನಾಟಕ. ಇತ್ತೀಚೆಗೆ ತಾಳಿಕೋಟೆ ಅವರನ್ನು ರಂಗಾಯಣ ಧಾರವಾಡದ ನಿರ್ದೇಶಕರನ್ನಾಗಿಸಲಾಗಿತ್ತು.





