ಡಿ.29ರಂದು ಕನ್ನಡದಲ್ಲಿ ತೆರೆಕಂಡಿದ್ದ ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಸದ್ಯ ಬಾಕ್ಸಾಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಸುದ್ದಿಯಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ‘ಲೇಟ್ ನೈಟ್ ಪಾರ್ಟಿ’ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಟ ದರ್ಶನ್, ಅಭಿಷೇಕ್ ಅಂಬರೀಷ್, ಧನಂಜಯ್ ಸೇರಿ ಅನೇಕರಿಗೆ ನೋಟಿಸ್ ಕಳುಹಿಸಿದ್ದಾರೆ.
‘ಕಾಟೇರ’ ಸಿನಿಮಾದ ಯಶಸ್ಸನ್ನು ಸಂಭ್ರಮಿಸಲು ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಚಿತ್ರ ತಂಡ ಪಾರ್ಟಿ ಆಯೋಜಿಸಿದ್ದರು. ಪೊಲೀಸ್ ಇಲಾಖೆಯ ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ಇಲ್ಲಿ ನಿಯಮವನ್ನು ಮೀರಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಬ್ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಈ ಪ್ರಕರಣ ಸಾಕಷ್ಟು ಸುದ್ದಿ ಆಗಿತ್ತು.

ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್, ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸುಬ್ರಹ್ಮಣ್ಯನಗರ ಇನ್ಸ್ಪೆಕ್ಟರ್ ಸುರೇಶ್ ಅವರು ಮೂವರಿಗೂ ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ. ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ಗೂ ಕೂಡ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
‘ಕಾಟೇರ’ ಚಿತ್ರತಂಡ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ನಡೆಸುತ್ತಿದ್ದ ವಿಚಾರ ತಿಳಿದು ನೂರಾರು ಮಂದಿ ಅಭಿಮಾನಿಗಳು ಸ್ಟಾರ್ ನಟನನ್ನು ನೋಡಲು ಮುಂಜಾನೆ ಕೂಡ ಆಗಮಿಸಿದ್ದರು. ಅಲ್ಲದೇ, ಪಾರ್ಟಿ ನಡೆಸುತ್ತಿದ್ದವರು ರಸ್ತೆಯಲ್ಲಿಯೇ ಕಾರು ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು.
ಸದ್ಯ ‘ಕಾಟೇರ’ ಚಿತ್ರತಂಡ ದುಬೈ ಪ್ರವಾಸದಲ್ಲಿದ್ದು, ಬಂದ ಬಳಿಕ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂದು ಕಾದುನೋಡಬೇಕಿದೆ.
ನೋಟಿಸ್ ಕಳುಹಿಸಿದ್ದ ಪೊಲೀಸ್ ಕಮಿಷನರ್
ಸಮಯ ಮೀರಿ ಪಬ್ ತೆರೆದಿಟ್ಟಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ನೋಟಿಸ್ ಜಾರಿ ಮಾಡಿದ್ದರು.
ಜನವರಿ 3ರಂದು ಮಧ್ಯರಾತ್ರಿ ಕಳೆದು ಮರುದಿನ ಬೆಳಗಿನ ಜಾವದವರೆಗೆ ಪಾರ್ಟಿ ಯಾವ ರೀತಿ ನಡೆದಿತ್ತು? ಯಾರೆಲ್ಲಾ ಬಂದಿದ್ದರು? ಅವಧಿ ಮೀರಿ ರೆಸ್ಟೋಬಾರ್ ತೆರೆದಿಡಲು ಮುಕ್ತ ಅವಕಾಶ ನೀಡಿದ್ದೇಕೆ? ಘಟನೆ ಬೆಳಕಿಗೆ ಬಂದರೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ವಿವರಣೆ ಕೇಳಿ ಅಂದು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತರು ನೊಟೀಸ್ ಜಾರಿ ಮಾಡಿದ್ದರು.





