ಸಿನಿಮಾದಲ್ಲಿ ದೇವದಾಸಿ ಪದ್ಧತಿ ಕುರಿತು ತೋರಿಸಲಾಗಿದೆ. ವಾಸ್ತವದಲ್ಲಿ ಅದಕ್ಕಿಂತ ನೂರು ಪಟ್ಟು ಕರಾಳವಾಗಿ ಇದೆ. ಅದನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸಬೇಕಿತ್ತು ಅನ್ನೋದು ನನ್ನ ಅಭಿಪ್ರಾಯ. ಆದ್ರೆ ಇಷ್ಟು ತೋರಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಜಗತ್ತು ತುಂಬಾ ಮುಂದುವರೆದಿದೆ, ಮುಂದುವರೆಯುತ್ತಿದೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಜಮೀನ್ದಾರಿ ಪದ್ಧತಿ ಮತ್ತು ಜಾತಿ ವ್ಯವಸ್ಥೆಯ ವಿಷದ ಬೇರುಗಳು ಎಷ್ಟು ಆಳವಾಗಿವೆ ಎಂಬುದನ್ನು ನೆನಪಿಸುವ ಪ್ರಯತ್ನವೇ ‘ಲ್ಯಾಂಡ್ಲಾರ್ಡ್’. ಸಂವಿಧಾನದ ಸಮಾನತೆಯ ಹಕ್ಕು ಮತ್ತು ಶೋಷಿತರ ಬದುಕಿನ ಸಂಘರ್ಷವನ್ನು ಈ ಸಿನಿಮಾ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾ ಕೋಲಾರ ಜಿಲ್ಲೆಯ ಒಂದು ಭಾಗದ ಕಥೆಯಾದರೂ, ವಾಸ್ತವದಲ್ಲಿ ಕರ್ನಾಟಕಕ್ಕೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವಶ್ಯವುಳ್ಳ ಸಿನಿಮಾವಾಗಿದೆ. ತಳಸಮುದಾಯಗಳ ನೋವು, ಮಹಿಳೆಯರ ಆರ್ತನಾದ, ಸಂವಿಧಾನದ ಆಶಯ ಸೇರಿದಂತೆ ಮಾನವೀಯ ಮೌಲ್ಯಗಳು ಹಾಗೂ ಬಲಿಷ್ಠರ ದೌರ್ಜನ್ಯ, ದಬ್ಬಾಳಿಕೆ, ಜಾತಿವಾದಿಗಳ ಜಾತಿವಾದದಂತಹ ಅಮಾನವೀಯ ಅಂಶಗಳನ್ನು ತೋರಿಸುವಲ್ಲಿ ಕನ್ನಡದ ಸಿನಿಮಾಗಳು ಸೋತಿದ್ದವು. ಆ ಜಾಗವನ್ನು ‘ಲ್ಯಾಂಡ್ಲಾರ್ಡ್’ ಸಿನಿಮಾ ತುಂಬಿದೆ.
ಜಾತಿವಾದಿಗಳಿಗೆ, ಬಲಿಷ್ಠರಿಗೆ ಸಿನಿಮಾ ಮೇಕಿಂಗ್ ಚೆನ್ನಾಗಿ ಮೂಡಿ ಬಂದಿಲ್ಲ, ಕ್ಯಾಮೆರಾ ಕೋನಗಳು ಸರಿಯಾಗಿ ಕಾಣಲ್ಲ, ಹಿನ್ನೆಲೆ ಮ್ಯೂಸಿಕ್ ವರ್ಸ್ಟ್ ಆಗಿದೆ. ಏಕೆಂದರೆ, ಅವರ ಹೊಟ್ಟೆಗೆ ಬೆಂಕಿ ಬಿದ್ದಿದೆ. ‘ಲ್ಯಾಂಡ್ಲಾರ್ಡ್’ ಬಗ್ಗೆ ಯಾರಾದ್ರೂ ಎರಡು ಒಳ್ಳೆ ಮಾತು ಹೇಳ್ತಾರೆ ಅಂದ್ರೇ, ಅವರು ಮನುಷ್ಯರಾಗಿರುತ್ತಾರೆ. ಹೌದು, ಕನ್ನಡ ಚಿತ್ರರಂಗದಲ್ಲಿ ಈ ತರದ ಒಂದು ಪ್ರಯತ್ನ ಇಲ್ಲಿಯವರೆಗೆ ನಡೆಯುವಲ್ಲಿ ವಿಫಲವಾಗಿತ್ತು. ಕಾಟೇರಾ ನಂತರ, ಕನ್ನಡದಲ್ಲಿ ಇಂತದೊಂದು ಸಿನಿಮಾ ಬಂದಿರುವುದು ಸಂತಸದ ವಿಷಯ.
ಸಿನಿಮಾವೆಂದರೆ ಕೇವಲ ಮನರಂಜನೆ, ಫೈಟ್, ಆಕ್ಷನ್, ಲವ್, ದಾದಾಗಿರಿ ಮಾತ್ರವಲ್ಲ, ಸಮಾಜದಲ್ಲಿ ವಾಸ್ತವದ ನೋವುಗಳಿಗೆ ಬೆಳಕು ಚೆಲ್ಲುವುದು. ಸಿನಿಮಾ ಜನರನ್ನು ಬೇಗನೆ ತಲುಪಬಲ್ಲ ಮಾಧ್ಯಮವಾಗಿರುವುದರಿಂದ, ಸಮಾಜದಲ್ಲಿ ಬದಲಾವಣೆ ತರಬಲ್ಲ ಅಂಶಗಳನ್ನು ಅದರೊಳಗೆ ಸೇರಿಸುವುದು ಅಗತ್ಯ.
ಪ್ರಸ್ತುತ ಸಿನಿಮಾಗಳು ಹಣ ಹಾಗೂ ಪ್ರಚಾರದ ಹಿಂದೆ ಬಿದ್ದಿವೆ. ಮೌಲ್ಯಗಳ ಹಿಂದೆ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಜೈಭೀಮ್ ಅಥವಾ ಸಂವಿಧಾನದ ಹೆಸರು ಹೇಳುವ ಧೈರ್ಯ ಯಾವೊಬ್ಬ ನಟರು ಮಾಡುತ್ತಿಲ್ಲ. ಆದರೆ ಆ ಕೆಲಸವನ್ನು ದುನಿಯಾ ವಿಜಯ್ ಮಾಡುತ್ತಿದ್ದಾರೆ, ಹೀಗಾಗಿ ಈ ವಿಷಯದಲ್ಲಿ ಅದನ್ನು ಪ್ರಶಂಸೆ ಮಾಡಬೇಕು. ಒಂದ್ವೇಳೆ ಅವರು ತಪ್ಪು ಮಾಡಿದ್ರೆ ವಿಮರ್ಶೆ ಕೂಡ ಮಾಡ್ಬೇಕು.
‘ಲ್ಯಾಂಡ್ಲಾರ್ಡ್’ ಸಿನಿಮಾ ಬಗ್ಗೆ ತುಂಬಾ ಚರ್ಚೆ ಆಗುತ್ತಿದೆ. ಹಾಗಾದರೆ ಸಿನಿಮಾದಲ್ಲಿ ಅಂತದು ಏನಿದೆ? ಸಿನಿಮಾದ ಕೇಂದ್ರ ಬಿಂದು ರಾಚಯ್ಯ (ದುನಿಯಾ ವಿಜಯ್). ‘ಲ್ಯಾಂಡ್ಲಾರ್ಡ್’ ನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಗೌರವ ಸಿಗಬೇಕು ಎಂಬುದು ಇವರ ಆಶಯ. ಶತಶತಮಾನಗಳಿಂದ ಶೋಷಣೆಗೆ ಒಳಗಾದ ‘ಅಳಿದು ಉಳಿದವರ’ ನೋವಿಗೆ ರಾಚಯ್ಯ ಧ್ವನಿಯಾಗುತ್ತಾನೆ. ಜಮೀನ್ದಾರಿಗಳ ಅಹಂಕಾರ ಮತ್ತು ಶೋಷಿತ ಜನರ ಸ್ವಾಭಿಮಾನದ ನಡುವಿನ ಸಂಘರ್ಷವೇ ಸಿನಿಮಾದ ಜೀವಾಳ. ದುನಿಯಾ ವಿಜಯ್ ಅವರ ರಾಚಯ್ಯನ ಪಾತ್ರದಲ್ಲಿ ಕಾಣುವ ನೋವು, ಆಕ್ರೋಶ ಮತ್ತು ಮಾನವೀಯತೆ, ಮುಗ್ಧತೆ ಚೆನ್ನಾಗಿ ಮೂಡಿಬಂದಿದೆ. ಗಟ್ಟಿ ಕಣ್ಣುಗಳಲ್ಲೇ ಕಥೆ ಹೇಳುವ ಶೈಲಿ ಪ್ರೇಕ್ಷಕರನ್ನು ಹಿಡಿದುಕೊಳ್ಳುತ್ತದೆ. ಇದು ಅವರ ಸಾಮಾನ್ಯ ಮಾಸ್ ಪಾತ್ರಕ್ಕಿಂತ ಭಿನ್ನವಾಗಿ, ಸಾಮಾಜಿಕ ಹೊಣೆಗಾರಿಕೆಯ ಪಾತ್ರವಾಗಿ ಹೊರ ಹೊಮ್ಮಿದೆ.
ನಿರ್ದೇಶಕರು ಯಾವುದೇ ಅತಿರೇಕವಿಲ್ಲದೆ, ನೆಲದ ವಾಸ್ತವ ಬರುವಂತೆ ಕಥೆಯನ್ನು ಹೇಳುತ್ತಾರೆ. ಗ್ರಾಮೀಣ ಹಿನ್ನೆಲೆ, ಭೂಮಿ ಸಂಬಂಧಿತ ಸಂಘರ್ಷಗಳು ನೈಜವಾಗಿ ಮೂಡಿಬಂದಿವೆ. ಕೆಲ ಸನ್ನಿವೇಶಗಳು ಪ್ರೇಕ್ಷಕರನ್ನು ಗೊಂದಲಮಯ ಮಾಡಿದರು, ಅದೇ ಚಿತ್ರದ ಶಕ್ತಿ.
ಹಿನ್ನೆಲೆ ಸಂಗೀತ ಕಥೆಗೆ ತಕ್ಕಂತೆ ಗಂಭೀರವಾಗಿದೆ. ಹಿನ್ನೆಲೆ ಸಂಗೀತ, ಕೇಳಲು ತುಂಬಾ ಆಸಕ್ತಿದಾಯಕವಾಗಿದೆ. ಹಾಡುಗಳು ಕಡಿಮೆ ಇದ್ದರೂ, ದೃಶ್ಯಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಛಾಯಾಗ್ರಹಣ ಗ್ರಾಮೀಣ ಬದುಕಿನ ಕಠಿಣತೆಯನ್ನು ಚೆನ್ನಾಗಿ ಸೆರೆ ಹಿಡಿದಿದೆ.
ಸಿನಿಮಾದಲ್ಲಿ ಮುಖ್ಯವಾಗಿ ಸಂವಿಧಾನದ ಆಶಯಗಳನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಪವಿತ್ರ ಗ್ರಂಥದ ಸಾಲುಗಳು, ಹಳ್ಳಿಯ ಕಟ್ಟೆಗಳ ಮೇಲೆ ನಡೆಯುವ ಜಮೀನ್ದಾರಿಗಳ ಅನ್ಯಾಯದ ತೀರ್ಪುಗಳ ಹೇಗಿರುತ್ತವೆ ಎಂಬುದನ್ನು ನಿರ್ದೇಶಕ ಜಡೇಶ್ ಹಂಪಿ ತೋರಿಸಲು ಪ್ರಯತ್ನಿಸಿದ್ದಾರೆ. ರಾಚಯ್ಯನ ಹೋರಾಟ ಕೇವಲ ವೈಯಕ್ತಿಕವಲ್ಲ, ಅದು ಒಂದು ವ್ಯವಸ್ಥೆಯ ವಿರುದ್ಧದ ಬಂಡಾಯವಾಗಿದೆ ಎನ್ನುವುದನ್ನು ಸಿನಿಮಾದ ಕಥೆ ಸಾರುತ್ತದೆ.
ದೇವದಾಸಿ ಪದ್ಧತಿಯ ಕರಾಳತೆಯ ಕುರಿತು ಕೂಡ ಇಲ್ಲಿ ತೋರಿಸಿದ್ದಾರೆ. ದೇವದಾಸಿ ಮಹಿಳೆಯನ್ನು ಬಳಸಿಕೊಂಡು ಅವಳಿಗೆ ಮಗು ಹುಟ್ಟುತ್ತದೆ ಎನ್ನುವ ಕಾರಣಕ್ಕೆ ಜಾತಿವಾದಿ ಜಮೀನ್ದಾರ ಅವಳನ್ನು ಕೊಲ್ಲುವುದು ಹಾಗೂ ಬಲವಂತವಾಗಿ ಮಹಿಳೆಯರನ್ನು ದೇವದಾಸಿ ಪದ್ಧತಿ ದೂಡುವಂತ ಕೆಲವು ಅಂಶಗಳನ್ನು ಸಿನಿಮಾದಲ್ಲಿ ಬಿಚ್ಚಿಟ್ಟಿದ್ದಾರೆ. ಒಂದೇನೆಂದರೆ ಸಿನಿಮಾದಲ್ಲಿ ದೇವದಾಸಿ ಪದ್ಧತಿ ಕುರಿತು ತೋರಿಸಲಾಗಿದೆ. ಅದು ವಾಸ್ತವದಲ್ಲಿ ನೂರುಪಟ್ಟು ಕರಾಳವಾಗಿ ಇದೆ. ಅದನ್ನು ಸರಿಯಾಗಿ ಕವರ್ ಆಗ್ಬೇಕಿತ್ತು ಅನ್ನೋದು ನನ್ನ ಅಭಿಪ್ರಾಯ. ಆದ್ರೆ ಇಷ್ಟು ತೋರಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಮುಂದುವರೆದು ಸಿನಿಮಾದಲ್ಲಿ ಪ್ರೀತಿ ಮಾಡಿದ ಮಗಳನ್ನು ಕೊಲ್ಲುವ ಮರ್ಯಾದಾ ಹತ್ಯೆಯನ್ನು ತೋರಿಸದ್ದಾರೆ. ಒಟ್ಟಾರೆಯಾಗಿ ಜಾತಿ ಪದ್ಧತಿಯ ಹಲವಾರು ಕರಾಳು ಮುಖಗಳನ್ನು ಸಮಾಜದೇದರು ಬಿಚ್ಚುವ ಪ್ರಯತ್ನ ಮಾಡಲಾಗಿದೆ.
ಸಿನಿಮಾದಲ್ಲಿ ಉಮಾಶ್ರೀ ರಾಚಯ್ಯನ ತಾಯಿಯ ಪಾತ್ರದಲ್ಲಿ, ರಚಿತಾ ರಾಮ್(ನಿಂಗವ್ವ) ರಾಚಯ್ಯನ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ದುನಿಯಾ ವಿಜಯ್ ಸ್ವಂತ ಮಗಳು ರಿತನ್ಯ ರಾಚಯ್ಯನ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬೊಬ್ಬರ ನಟನೆ ಅದ್ಬುತವಾಗಿ ಮೂಡಿಬಂದಿದೆ.
ಸಿನಿಮಾದಲ್ಲಿ ಕೆಲವು ಡೈಲಾಗ್ ಗಳು ಬರುತ್ತವೆ,
- ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ.
- ಸಮಾನತೆ ಅನ್ನುವ ಸಂವಿಧಾನ ಹಳ್ಳಿ ಹಳ್ಳಿಗೂ ಬರಬೇಕು.
- ಇಲ್ಲಿ ನಡೀಬೇಕಿರುವುದು ಸಂದಾನ ಅಲ್ಲ ಸಂವಿಧಾನ.
- ಸಂವಿಧಾನನ ನಂಬಿಕೊಂಡು ದೇಶನ ಉದ್ಧಾರ ಆಗಿದೆ. ಇನ್ನೂ ಊರು ಉದ್ಧಾರ ಆಗಲ್ವಾ?
- ಜನರನ್ನು ಕಾಪಡೋ ಸಂವಿಧಾನ ಪದ್ಧತಿ ಬೇಕು.
ಇವುಗಳನ್ನು ಕೇಳ್ತಿದಂಗೆ ದೇಶ ಬದಲಾವಣೆ ಪಥದಲ್ಲಿ ಸಾಗುತ್ತಿದೆ ಎನ್ನುವ ಭಾವನೆ ಮೂಡುತ್ತದೆ.
ಸಿನಿಮಾದ ಎಲ್ಲಾ ಅಂಶಗಳನ್ನು ಗಮನಿಸಿದ ನಂತರ, ಲ್ಯಾಂಡ್ಲಾರ್ಡ್ ಸಿನಿಮಾ ವಾಸ್ತವದ ಕನ್ನಡಿ ಎನಿಸಿತು. ಅದಕ್ಕೆ ಕೆಲವು ವಿಚಾರಗಳನ್ನು ಹೇಳುವುದಾದರೆ,
- ಮೌಖಿಕ ಆಚರಣೆಯಲ್ಲಿರುವ ಜಮೀನ್ದಾರಿ: ಕಾನೂನುಬದ್ಧವಾಗಿ ಜಮೀನ್ದಾರಿ ಪದ್ಧತಿ ರದ್ದಾಗಿದ್ದರೂ, ಇಂದಿಗೂ ಅನೇಕ ಹಳ್ಳಿಗಳಲ್ಲಿ ‘ಧಣಿ’ ಅಥವಾ ‘ಯಜಮಾನ’ ಎಂಬ ಸಂಸ್ಕೃತಿ ಮತ್ತು ಭೂಮಿಯ ಒಡೆತನದ ಮೂಲಕ ನಡೆಯುವ ಅಧಿಕಾರ ಚಲಾವಣೆ ಜೀವಂತವಾಗಿದೆ. ಸಿನಿಮಾ ಇದನ್ನು ಧೈರ್ಯವಾಗಿ ಪ್ರಶ್ನಿಸುತ್ತದೆ.
- ಜಾತಿ ಮತ್ತು ಆರ್ಥಿಕ ಅಸಮಾನತೆ: ಗ್ರಾಮೀಣ ಭಾರತದಲ್ಲಿ ಜಾತಿ ಮತ್ತು ಆಸ್ತಿ (ಭೂಮಿ) ಒಂದಕ್ಕೊಂದು ಬೆಸೆದುಕೊಂಡಿವೆ. ಯಾರ ಕೈಯಲ್ಲಿ ಭೂಮಿ ಇದೆಯೋ ಅವರೇ ನ್ಯಾಯವನ್ನು ನಿರ್ಧರಿಸುವ ನೀತಿಯ ವಿರುದ್ಧ ರಾಚಯ್ಯನ ಹೋರಾಟ ಮಾಡುವ ಅಂಶವನ್ನು ಸಿನಿಮಾ ಪ್ರತಿಬಿಂಬಿಸುತ್ತದೆ.
- ಸಂವಿಧಾನದ ಅರಿವು: ಇಂದಿನ ಯುವ ಪೀಳಿಗೆಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಂವಿಧಾನವೇ ದೊಡ್ಡ ಅಸ್ತ್ರ ಎಂಬುದನ್ನು ಸಿನಿಮಾ ತೋರಿಸಿಕೊಡುತ್ತದೆ. ಇದು ಕೇವಲ ಕತೆಯಲ್ಲ, ಇಂದು ಶೋಷಿತ ವರ್ಗಗಳು ಕಂಡುಕೊಳ್ಳುತ್ತಿರುವ ಹೊಸ ಹಾದಿ.
- ಅಳಿದು ಉಳಿದವರ ವ್ಯಥೆ: ಅಭಿವೃದ್ಧಿಯ ಹೆಸರಿನಲ್ಲಿ ಅಥವಾ ಪರಂಪರೆಯ ಹೆಸರಿನಲ್ಲಿ ತುಳಿಯಲ್ಪಟ್ಟ ಜನರ ನೋವು ಇಂದಿಗೂ ಹಾಗೆ ಇದೆ. ಸಿನಿಮಾ ಆ ನೋವಿಗೆ ಒಂದು ಮುಖವನ್ನು ನೀಡಿದೆ.
ಇಂತ ಒಳ್ಳೆಯ ಕಥೆಯುಳ್ಳ, ಒಳ್ಳೆ ನಟನೆವುಳ್ಳ, ಸಾಮಾಜಿಕ ಮೌಲ್ಯಗಳನ್ನು ಹೊಂದಿದ ಸಿನಿಮಾವನ್ನು ಪ್ರೋತ್ಸಾಹಿಸದಿದ್ದರೆ, ನಾವ್ಯಾರು ಸಿನಿಮಾ ಪ್ರೇಮಿಗಳಾಗಿ ಅಥವಾ ಮಾನವೀಯ ಮೌಲ್ಯಗಳು ಹೊಂದಿದ ಮನುಷ್ಯರಾಗಿ ಉಳಿಯುವುದಿಲ್ಲ. ‘ಲ್ಯಾಂಡ್ಲಾರ್ಡ್’ ಕೇವಲ ಮನರಂಜನೆ ನೀಡುವ ಸಿನಿಮಾವಲ್ಲ, ಬದಲಿಗೆ ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುವ ಒಂದು ಕಿಡಿ. ಸಂವಿಧಾನದ ಮೌಲ್ಯಗಳನ್ನು ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ ಇಂತಹ ಸಿನಿಮಾಗಳು ಇಂದಿನ ಕಾಲಕ್ಕೆ ಅಗತ್ಯವಾಗಿವೆ. ಭವಿಷ್ಯದಲ್ಲಿ ಇಂತ ಸಿನಿಮಾಗಳು ಬರಬೇಕು.

ಜಿ. ಎಸ್. ಶರಣು
ಪತ್ರಿಕೋದ್ಯಮ ಪದವೀಧರ, ಕುಷ್ಟಗಿ




