ಗಡಿ ಗಾಯದ ಮೇಲೆ ಸಲ್ಮಾನ್ ಖಾನ್ರ ‘ಬ್ಯಾಟಲ್ ಆಫ್ ಗಲ್ವಾನ್’ ಟೀಸರ್ ಸಂಚಲನ! ಏಪ್ರಿಲ್ 17ರ ಬಿಡುಗಡೆಗೆ ತಯಾರಾಗುತ್ತಿರುವ ಈ ಚಿತ್ರದ ಭಾರತೀಯ ಯೋಧರ ಪರಾಕ್ರಮದ ದೃಶ್ಯಗಳು ಚೀನಾವನ್ನು ಕೆರಳಿಸಿವೆ. ಸರ್ಕಾರಿ ಮಾಧ್ಯಮಗಳು ‘ಇತಿಹಾಸ ತಿರುಚುತ್ತಿದೆ’ ಎಂದು ಆರೋಪಿಸಿದರೆ, ಭಾರತ-ಚೀನಾ ರಾಜತಾಂತ್ರಿಕತೆ ಮತ್ತೆ ಉದ್ವಿಗ್ನ. ಟ್ರಂಪ್ರ ಶೇ.50 ತೆರಿಗೆಯಿಂದ ವ್ಯಾಪಾರ ಬಾಂಧವ್ಯ ಸುಧಾರಣೆಯ ಹೊರತಾಗಿಯೂ, ಗಲ್ವಾನ್ ವಿವಾದ ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ
ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ಅಭಿನಯದ ಏಪ್ರಿಲ್ 17 ರಂದು ಬಿಡುಗಡೆಯಾಗುವ ‘ಬ್ಯಾಟಲ್ ಆಫ್ ಗಲ್ವಾನ್’ ಟೀಸರ್ ಈಗ ಚೀನಾದ ನಿದ್ದೆಗೆಡಿಸಿದೆ. 2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡುವೆ ನಡೆದ ಗಲ್ವಾನ್ ಸಂಘರ್ಷವನ್ನು ಆಧರಿಸಿದ ದೃಶ್ಯಗಳು ಟೀಸರ್ನಲ್ಲಿವೆ ಎಂಬ ಕಾರಣಕ್ಕೆ ಚೀನಾ ಸರ್ಕಾರ ತನ್ನ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬೆಳವಣಿಗೆಯೂ ಮತ್ತೊಮ್ಮೆ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತು ಗಡಿ ವಿವಾದದ ಕರಾಳ ಅಧ್ಯಾಯವನ್ನು ಮುನ್ನೆಲೆಗೆ ತಂದಿದೆ.
ವಿವಾದದ ಕಿಡಿ: ಚೀನಾದ ಆಕ್ಷೇಪವೇಕೆ?
ಸಲ್ಮಾನ್ ಖಾನ್ ಅವರ ಚಿತ್ರದ ಟೀಸರ್ನಲ್ಲಿ ಭಾರತೀಯ ಯೋಧರು ಚೀನೀ ಸೈನಿಕರನ್ನು ಹಿಮ್ಮೆಟ್ಟಿಸುವ ಮತ್ತು ಗಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ದೃಶ್ಯಗಳಿವೆ ಎಂದು ಹೇಳಲಾಗಿದೆ. ಇದನ್ನು ಗಮನಿಸಿದ ಚೀನಾದ ಸರ್ಕಾರಿ ಮಾಧ್ಯಮಗಳು, “ ಭಾರತವು ಸಿನಿಮಾಗಳ ಮೂಲಕ ಇತಿಹಾಸವನ್ನು ತಿರುಚುತ್ತಿದೆ ಮತ್ತು ಚೀನಾ ವಿರೋಧಿ ಭಾವನೆಯನ್ನು ಉತ್ತೇಜಿಸುತ್ತಿದೆ” ಎಂದು ಆರೋಪಿಸಿವೆ. ಚೀನಾ ಯಾವಾಗಲು ಗಲ್ವಾನ್ ಸಂಘರ್ಷದ ಬಗ್ಗೆ ತನ್ನದೇ ಆದ ಸುಳ್ಳು ನಿರೂಪಣೆಯನ್ನು ಜಗತ್ತಿನ ಮುಂದಿಡಲು ಯತ್ನಿಸುತ್ತಲೇ ಬಂದಿದೆ. ಆದರೆ, ಭಾರತೀಯ ಸಿನಿಮಾ ರಂಗವು ಅಲ್ಲಿ ನಡೆದ ನೈಜ ಸಾಹಸಗಾಥೆಯನ್ನು ದೃಶ್ಯರೂಪಕ್ಕೆ ಇಳಿಸುತ್ತಿರುವುದು ಚೀನಾದ ಮುಜುಗರಕ್ಕೆ ಕಾರಣವಾಗಿದೆ.
ಏನಾಗಿತ್ತು ಆ ಕರಾಳ ರಾತ್ರಿ? (ಜೂನ್ 15, 2020)
ಸಿನಿಮಾದ ವಿವಾದವ ಬದಿಗಿಟ್ಟು, ವಾಸ್ತವದ ಪುಟಗಳನ್ನು ತಿರುವಿ ಹಾಕಿದರೆ ಸಿಗುವುದು ಭಾರತೀಯ ಸೇನೆಯ ಅಪ್ರತಿಮ ವೀರಗಾಥೆ. ಲಡಾಖ್ನ ಗಲ್ವಾನ್ ಕಣಿವೆಯಲ್ಲಿ 2020ರ ಜೂನ್ 15ರಂದು ನಡೆದದ್ದು ಭಾರತ ಹಾಗೂ ಚೀನಾ ಸೈನಿಕರ ಹೋರಾಟ.

ಭಾರತ ಮತ್ತು ಚೀನಾ ನಡುವಿನ 1996ರ ಒಪ್ಪಂದದ ಪ್ರಕಾರ, ಗಡಿಯಲ್ಲಿ ಗುಂಡಿನ ಚಕಮಕಿ ನಡೆಸುವಂತಿಲ್ಲ. ಇದನ್ನೇ ಲಾಭವಾಗಿ ಪಡೆದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA), ಪೂರ್ವ ಲಡಾಖ್ನ ಗಲ್ವಾನ್ ನದಿಯ ಬಳಿ ಅಕ್ರಮವಾಗಿ ಟೆಂಟ್ ನಿರ್ಮಿಸಿತ್ತು. ಇದನ್ನು ತೆರವುಗೊಳಿಸಲು ಹೋದ ಭಾರತದ 16 ಬಿಹಾರ್ ರೆಜಿಮೆಂಟ್ನ ಕರ್ನಲ್ ಸಂತೋಷ್ ಬಾಬು ಮತ್ತು ಅವರ ತಂಡದ ಮೇಲೆ ಚೀನೀ ಸೈನಿಕರು ಮುಳ್ಳುತಂತಿ ಸುತ್ತಿದ ದೊಣ್ಣೆಗಳು, ಕಲ್ಲುಗಳು ಮತ್ತು ರಾಡ್ಗಳಿಂದ ಹಲ್ಲೆ ನಡೆಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
ಯಾವುದೇ ಗುಂಡಿನ ಶಬ್ದವಿಲ್ಲದೆ ನಡೆದ ಈ ಮಾರಾಮಾರಿಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಜನ ಭಾರತೀಯ ಯೋಧರು ಹುತಾತ್ಮರಾದರು. ಆದರೆ, ಭಾರತೀಯ ಯೋಧರು ತೋರಿದ ಪ್ರತ್ಯುತ್ತರಕ್ಕೆ ಚೀನಾ ಬೆಚ್ಚಿಬಿದ್ದಿತ್ತು. ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಆ ರಾತ್ರಿ ಕನಿಷ್ಠ 40ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದರು ಅಥವಾ ಗಾಯಗೊಂಡಿದ್ದರು. ಆದರೆ, ಚೀನಾ ಸರ್ಕಾರ ಆರಂಭದಲ್ಲಿ ಇದನ್ನು ಮುಚ್ಚಿಟ್ಟು, ನಂತರ ಕೇವಲ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆಂದು ಒಪ್ಪಿಕೊಂಡಿತು.
ಗಲ್ವಾನ್ ಕಣಿವೆಯ ಆಯಕಟ್ಟಿನ ಮಹತ್ವ
ಚೀನಾಕ್ಕೆ ಗಲ್ವಾನ್ ಮೇಲೆ ಕಣ್ಣಿಡಲು ಪ್ರಮುಖ ಕಾರಣವೆಂದರೆ ಭಾರತ ನಿರ್ಮಿಸಿರುವ 255 ಕಿ.ಮೀ ಉದ್ದದ ದರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡಿ (DSDBO) ರಸ್ತೆ. ಈ ರಸ್ತೆಯು ಭಾರತದ ಸೇನೆಯನ್ನು ಕಾರಕೋರಂ ಪಾಸ್ಗೆ(ಕಾರಕೋರಂ ಪರ್ವತ ಶ್ರೇಣಿಯಲ್ಲಿ ಇರುವ ಒಂದು ಉನ್ನತ ಗಿರಿದಾರಿ) ತ್ವರಿತವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಈ ರಸ್ತೆಯ ಮೇಲೆ ನಿಗಾ ಇಡಲು ಮತ್ತು ಭಾರತದ ಸಂಪರ್ಕವನ್ನು ಕಡಿತಗೊಳಿಸಲು ಚೀನಾ ಗಲ್ವಾನ್ ಎತ್ತರ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿತ್ತು. ಆದರೆ ಭಾರತೀಯ ಯೋಧರ ಹೋರಾಟ ಆ ಯೋಜನೆಯನ್ನು ವಿಫಲಗೊಳಿಸಿತು.
ಪ್ರಸ್ತುತ ಸ್ಥಿತಿ ಮತ್ತು ರಾಜತಾಂತ್ರಿಕತೆ
2020ರ ನಂತರ ಭಾರತ ಮತ್ತು ಚೀನಾ ನಡುವೆ ಹಲವು ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿವೆ. ಗಲ್ವಾನ್, ಪ್ಯಾಂಗಾಂಗ್ ಸರೋವರದಂತಹ ಕೆಲವು ಘರ್ಷಣಾ ಬಿಂದುಗಳಿಂದ ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. ಆದರೂ, ಗಡಿಯಲ್ಲಿ ಸೇನಾ ಜಮಾವಣೆ ಹಾಗೆಯೇ ಇದೆ. ಭಾರತವು ಚೀನಾದ ಆಪ್ಗಳನ್ನು ನಿಷೇಧಿಸುವುದು ಸೇರಿದಂತೆ ಆರ್ಥಿಕವಾಗಿ ಕಠಿಣ ಸಂದೇಶಗಳನ್ನು ರವಾನಿಸಿದೆ. ಅದಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ತೆರಿಗೆ ವಿಧಿಸಲಾಗಿರುವುದರಿಂದ ಭಾರತದ ರಫ್ತುಗಳಿಗೆ ತೊಂದರೆಗೀಡಾಗಿವೆ. ಆದರೆ ಇದೇ ಕಾರಣಕ್ಕೆ ಗಡಿ ವಿವಾದದ ಹೊರತಾಗಿಯೂ ಎರಡೂ ದೇಶಗಳ ವ್ಯವಹಾರ ಬಾಂಧವ್ಯ ಬೆಳವಣಿಗೆ ಸಾಧಿಸುತ್ತಿದೆ., ಟ್ರಂಪ್ರ ತೆರಿಗೆ ನೀತಿಗಳು ಭಾರತವನ್ನು ಚೀನಾ ಕಡೆಗೆ ಸ್ವಲ್ಪ ತಳ್ಳಿವೆ. ಈಗ ಗಲ್ವಾನ್ ಸಿನಿಮಾ ವಿವಾದ ಮತ್ತೆ ಉಭಯ ದೇಶಗಳ ಬಾಂಧವ್ಯವನ್ನು ಯಾವರೀತಿ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.





