ಕಳೆದ ವಾರ ಬಿಡುಗಡೆಯಾಗಿರುವ ದುನಿಯಾ ವಿಜಯ್ ನಟನೆಯ ʼಲ್ಯಾಂಡ್ಲಾರ್ಡ್ʼ ಸಿನಿಮಾ ನೋಡಿದ ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ʼಈದಿನʼದ ಓದುಗರಿಗಾಗಿ ಇಲ್ಲಿ ಕೊಡಲಾಗಿದೆ.
“30 ವರ್ಷಗಳ ನಂತರ ಇದೇ ಮೊದಲ ಬಾರಿಗೆ, ಸಿನಿಮಾ ಬಿಡುಗಡೆಯ ಮೊದಲ ದಿನವೇ ಕ್ಯೂನಲ್ಲಿ ನಿಂತು ಟಿಕೆಟ್ ಕೊಂಡು ಲ್ಯಾಂಡ್ಲಾರ್ಡ್ ಚಿತ್ರವನ್ನು ನೋಡಿದೆ. ನಾನು ಕೊಟ್ಟ ಕಾಸಿಗೆ ಮೋಸವಿಲ್ಲ. ಪೂರಾ ಪೈಸಾ ವಸೂಲ್.
ಟೀಸರ್ ನೋಡಿಯೇ ತಂಡದ ಮೇಲೆ ವಿಶ್ವಾಸವಿಟ್ಟಿದ್ದೆ. ನನ್ನ ವಿಶ್ವಾಸಕ್ಕೆ ಕುಂದು ಬಂದಿಲ್ಲ. ಕನ್ನಡದಲ್ಲಿ ಕಂಟೆಂಟ್ ಸಿನಿಮಾ ಯಾಕೆ ಇಲ್ಲ ಎಂಬ ಪ್ರಶ್ನೆಗೆ ಲ್ಯಾಂಡ್ಲಾರ್ಡ್ ಉತ್ತರದಂತೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ.
ಇನ್ನು ಮುಂದೆ ತಮಿಳು ಕಡೆ ಕೈ ತೋರಿಸಿ ʼಅಂತ ಸಿನಿಮಾ ಕನ್ನಡದಲ್ಲಿ ಯಾಕೆ ಬಂದಿಲ್ಲ?ʼ ಎಂದು ಕೇಳುವಂತಿಲ್ಲ. ರಾಜ್ಯಾದ್ಯಂತ ಇರುವ ಎಲ್ಲಾ ಸಂವಿಧಾನ ಪರ ಮನಸುಗಳನ್ನು ಪ್ರೀತಿಯಿಂದ ಒತ್ತಾಯಿಸುವೆ. ʼಲ್ಯಾಂಡ್ಲಾರ್ಡ್ʼ ಸಿನಿಮಾ ನೋಡಿ. ನಿಮ್ಮ ಒಡನಾಡಿ ಬಳಗಕ್ಕೆ ನೋಡಲು ಹೇಳಿ. ಯಾಕೆಂದರೆ ʼಲ್ಯಾಂಡ್ಲಾರ್ಡ್ʼ ನೀವು ನೋಡಲೇ ಬೇಕಿರುವ ಸಿನಿಮಾ.
ಇದನ್ನು ಓದಿ : ಲ್ಯಾಂಡ್ ಲಾರ್ಡ್: ಸಂವಿಧಾನದ ಆಶಯವಾದ ‘ಸಮಾನತೆ’ಯನ್ನು ಸಾರುವ ಚಿತ್ರ
ಇದು 80ರ ದಶಕದ ಕಾಲವನ್ನು, ಈ ಕಾಲಕ್ಕೆ ತಂದು ಹಳ್ಳಿಹಳ್ಳಿಗೂ ಸಂವಿಧಾನದ ಆಶಯ ತಲುಪಿಸಬೇಕಾಗಿರುವುದು ಎಷ್ಟು ತುರ್ತು ಮತ್ತು ಆದ್ಯತೆಯಿದೆ ಎಂಬುದನ್ನು ಸಿನಿಮಾ ಹೇಳುತ್ತದೆ.
ಒಂದು ನೆಲದ ಕಥೆಯಾಗಿ, ಗಡಿ ಭಾಗದ ಕೋಲಾರ ಸೀಮೆಯ ಭಾಷೆಯ ಸೊಗಸು ಮತ್ತು ರಗಡ್ ಬದುಕುಗಳನ್ನು ಚಂದವಾಗಿ ಹೆಣೆದು ಕೊಟ್ಟಿದೆ. 80ರ ಗ್ರಾಮಭಾರತವನ್ನು ಪುನರ್ ಸೃಷ್ಟಿಮಾಡಿದೆ.
ದುನಿಯಾ ವಿಜಯ್, ಕೊಡಲಿ ರಾಚಯ್ಯನಾಗಿದ್ದು ಯಾಕೆ? ಅಂತ್ಯದಲ್ಲಿ ಅಕ್ಷರ ಕೈಗೆತ್ತಿಕೊಳ್ಳುವಂತೆ ಹೇಳುವುದು ಯಾಕೆ? ಎಂಬುದು ಚರಿತ್ರೆಯ ಈ ಕಾಲಘಟ್ಟದಲ್ಲಿ ಅತ್ಯಂತ ಜಾರೂರಿಯಾಗಿ ಎದುರಿಸಬೇಕಾಗಿರುವ ಪ್ರಶ್ನೆ. ಕೊಡಲಿ ಮತ್ತು ಬಾಬಾಸಾಹೇಬರು ಸದಾ ಎಚ್ಚರಿಸುತ್ತಲೇ ಇದ್ದರು. ಎಚ್ಚರಿಸುತ್ತಲಿದ್ದ ಕಾಳಸರ್ಪ ಇದೀಗ ಎಡೆ ಬಿಚ್ಚಿ ನಿಂತಿದೆ.
ಕೊಡಲಿ ಮತ್ತು ಪೆನ್ನುಗಳೊಂದಿಗೆ ನಾವು, ಅಂದ್ರೆ, We the People of India (ಭಾರತದ ಜನತೆಯಾದ ನಾವು) ಸನ್ನದ್ದುಗೊಳ್ಳಲೇ ಬೇಕು. ಇದು ಲ್ಯಾಂಡ್ಲಾರ್ಡ್ ಸಿನಿಮಾ ಮಾತ್ರವಲ್ಲ ಲ್ಯಾಂಡ್ ಮಾರ್ಕ್ ಸಿನಿಮಾ ಕೂಡ. ʼಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಅಕ್ಷರ ಲೇಸುʼ ಎಂಬುದನ್ನೇ ಮುಂದಿನ ಪೀಳಿಗೆಗಳಿಗೆ ʼಲ್ಯಾಂಡ್ಲಾರ್ಡ್ʼ ಕೊಡುತ್ತಿರುವ ಸಂದೇಶ”.





