ದ್ರಾವಿಡ ನೆಲದಲ್ಲಿ ಫ್ಯಾಸಿಸ್ಟ್ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿಯಲು ತಮಿಳು ಜನರ ಜೊತೆ ಭಾವನಾತ್ಮಕವಾಗಿ ಸೆಣೆಸಾಡುತ್ತಿದೆ. ಅದಕ್ಕೆ ಉದಾಹರಣೆ ಎಂಬತೆ ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ನಿಂತು ‘ತಮಿಳರ ಸಂಸ್ಕೃತಿ’ ಬಗ್ಗೆ ಮಾತನಾಡುವುದು, ನರೇಂದ್ರ ಮೋದಿ ಸಂಕ್ರಾಂತಿ (ಪೊಂಗಲ್) ಹಬ್ಬವನ್ನು ಜಾಗತಿಕ ಹಬ್ಬವೆಂದು ಹೊಗಳುವುದು ಮತ್ತು ತಮಿಳು ಸಂಸ್ಕೃತಿಯು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ ಎಂದು ಕೊಂಡಾಡುವುದು ಸೋಜಿಗವಾಗಿದೆ.
ನಟ ಹಾಗೂ ರಾಜಕಾರಣಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಚಿತ್ರದ ಬೆಂಬಲಕ್ಕೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿಂತಿದ್ದಾರೆ. “ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯು ಜನ ನಾಯಗನ್ ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿರುವುದು ತಮಿಳು ನಾಡಿನ ಸಂಸ್ಕೃತಿಯ ಮೇಲಿನ ಪ್ರಹಾರದಂತೆ. ಮೋದಿಯವರೇ, ನೀವು ಎಂದಿಗೂ ತಮಿಳು ಜನರ ಧ್ವನಿಯನ್ನುಅಡಗಿಸಲು ಸಾಧ್ಯವಿಲ್ಲ” ಎಂದು ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕನ ಬೆಂಬಲ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಬ್ಬ ನಟನ ಸಿನಿಮಾ ರಾಜ್ಯದ ರಾಜಕೀಯ ಭವಿಷ್ಯವನ್ನು ಬದಲಿಸಬಹುದೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೆನ್ಸಾರ್ ಮಂಡಳಿಯನ್ನು ಬಳಸಿಕೊಂಡು ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಬಳಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಅನೇಕ ಪ್ರೊಪಗಂಡ ತುಂಬಿದ ಸಿನಿಮಾಗಳು ಬಿಡುಗಡೆಯಾಗಿವೆ. ಬಹಳಷ್ಟು ಸಿನಿಮಾಗಳು ಕೇಂದ್ರ ಸರ್ಕಾರವನ್ನು ಮೆಚ್ಚಿಸುವಂತಹವೇ ಆಗಿವೆ. ಮೋದಿ ಸರ್ಕಾರ ರಾಜಕೀವಾಗಿ ಎದುರಿಸುವುದನ್ನು ಬಿಟ್ಟು, ವಾಮಮಾರ್ಗ ಹಿಡಿಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸುತ್ತಿದ್ದಾರೆ.
ಇದನ್ನು ಓದಿ : ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
“ಕೇಂದ್ರ ತನಿಖಾ ಸಂಸ್ಥೆಗಳಂತೆಯೇ, ಸಾಂಸ್ಕೃತಿಕ ಮಂಡಳಿಗಳನ್ನು ಮೋದಿ ಸರ್ಕಾರ ನಿಯಂತ್ರಿಸುತ್ತಿದೆ” ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನ ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹೇಳಿರುವ ಮಾತು ವಿಜಯ್ ಅವರ ಹೋರಾಟಕ್ಕೆ ರಾಷ್ಟ್ರೀಯ ಮಟ್ಟದ ಆಯಾಮ ನೀಡಿದೆ.
ಆಡಳಿತರೂಢ ಪಕ್ಷವಾಗಿರುವ ಡಿಎಂಕೆ ಜೊತೆ ಕೈ ಜೊಡಿಸಿರುವ ರಾಹುಲ್ ಗಾಂಧಿ, ಟಿವಿಕೆ ಪಕ್ಷವನ್ನು ಬೆಂಬಲಿಸುವುದು ಅನುಮಾನ ಹುಟ್ಟಿಸುತ್ತದೆ. ಇದರ ಹಿಂದೆ ರಾಹುಲ್ ಗಾಂಧಿ ಅವರ ರಾಜಕೀಯ ಅಜೆಂಡ ಕೂಡ ಇರಬಹುದು. ಬರುವ ಚುನಾವಣೆಗೆ ತಮಿಳುನಾಡಿನ ಜನರನ್ನು ಒಲಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷವೂ ಸಹ ಸೆಣಸಾಡುತ್ತಿದೆ. ರಾಹುಲ್ ‘ಜನ ನಾಯಗನ್’ಗೆ ಬೆಂಬಲ ಮತ್ತು ತಮಿಳು ಸಂಸ್ಕೃತಿಯ ಬಗ್ಗೆ ಮಾತನಾಡುವುದರ ಹಿಂದೆ ತಮಿಳರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನದಂತಿದೆ.
ರಾಷ್ಟ್ರೀಯ ಪಕ್ಷಗಳ ಪಡಿಪಾಟಲು
ಈ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮಾತ್ರ ನೇರಾ ನೇರ ಕಣದಲ್ಲಿರುತ್ತಿದ್ದವು. ಆದರೆ ಈಗ ಆಡಳಿತ ಪಕ್ಷ ‘ಡಿಎಂಕೆ’ಗೆ ವಿರೋಧ ಪಕ್ಷವಾದ ‘ಎಐಎಡಿಎಂಕೆ’ಗಿಂತ ವಿಜಯ್ ಸಾಕಷ್ಟು ಭಯಹುಟ್ಟಿಸಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸಿಕ್ಕಿರುವ ಬೆಂಬಲ ಎಲ್ಲಾ ಪಕ್ಷದವರನ್ನು ನಿದ್ದೆಗೆಡಿಸಿದೆ. ಈಗಾಗಲೇ ಡಿಎಂಕೆ ಜೊತೆ ಕಾಂಗ್ರೆಸ್ ಹಾಗೂ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ವಿಜಯ್ ಒಬ್ಬರೇ ಸೆಣೆಸಾಡಲು ಸಿದ್ಧವಾಗಿದ್ದಾರೆ.
ತಮಿಳುನಾಡು ಮೊದಲಿನಿಂದಲೂ ‘ದ್ರಾವಿಡ’ ನೆಲ. ಇ.ವಿ.ರಾಮಸ್ವಾಮಿ ನಾಯ್ಕರ್ (ಪೆರಿಯಾರ್) ತಮಿಳರ ಅಸ್ಮಿತೆಗಾಗಿ ಶ್ರಮಿಸಿದವರು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸ್ಥಾಪಕರಲ್ಲಿ ಪೆರಿಯಾರ್ ರಾಮಸ್ವಾಮಿ ಕೂಡ ಒಬ್ಬರು. ‘ತಮಿಳು ಸ್ವಾಭಿಮಾನಿ ಚಳುವಳಿ’ಗಾಗಿ ಜೀವನ ಪೂರ್ತಿ ಹೋರಾಡಿದವರು. ದಕ್ಷಿಣ ಭಾರತದಲ್ಲಿ ದ್ರಾವಿಡ ಜನರ ಉದ್ಧಾರಕ್ಕಾಗಿ ‘ಆತ್ಮಗೌರವ ಚಳುವಳಿ’ಯನ್ನು ಹುಟ್ಟುಹಾಕಿದರು. ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿದವರಲ್ಲಿ ಪೆರಿಯಾರ್ ಪ್ರಮುಖರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ “ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆಯಿರಿ. ಜುಟ್ಟು-ಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯಿರಿ” ಎಂದು ಕರೆ ನೀಡಿದವರು.
ಇಂತಹ ದ್ರಾವಿಡ ನೆಲದಲ್ಲಿ ಫ್ಯಾಸಿಸ್ಟ್ ಪಕ್ಷವಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿಯಲು ತಮಿಳು ಜನರ ಜೊತೆ ಭಾವನಾತ್ಮಕವಾಗಿ ಸೆಣೆಸಾಡುತ್ತಿದೆ. ಅದಕ್ಕೆ ಉದಾಹರಣೆ ಎಂಬತೆ ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ನಿಂತು ‘ತಮಿಳರ ಸಂಸ್ಕೃತಿ’ ಬಗ್ಗೆ ಮಾತನಾಡುವುದು, ನರೇಂದ್ರ ಮೋದಿ ಸಂಕ್ರಾಂತಿ (ಪೊಂಗಲ್) ಹಬ್ಬವನ್ನು ಜಾಗತಿಕ ಹಬ್ಬವೆಂದು ಹೊಗಳುವುದು ಮತ್ತು ತಮಿಳು ಸಂಸ್ಕೃತಿಯು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ ಎಂದು ಕೊಂಡಾಡುವುದು ಸೋಜಿಗವಾಗಿದೆ.
ತಮಿಳುನಾಡಿನಲ್ಲಿರುವ ಪಕ್ಷಗಳನ್ನು ರಾಜಕೀಯವಾಗಿ ಎದುರಿಸಲಾಗದೆ ಅನೇಕ ಸಲ ವಾಮಮಾರ್ಗವನ್ನು ಬಿಜೆಪಿ ಉಪಯೋಗಿಸಿದೆ. ಈಗ ರಾಜಕೀಯವಾಗಿ ವಿಜಯ್ ಗೆ ಸಿಕ್ಕಿರುವ ಬೆಂಬಲ ಬಿಜೆಪಿಯ ನಿದ್ದೆಗೆಡಿಸಿದೆ. ತಮಿಳುನಾಡಿನ ಪರಂಪರೆಯನ್ನು, ರಾಜಕೀಯ ಚರಿತ್ರೆಯನ್ನು ಕಣ್ಣಾರೆ ಕಂಡಿರುವ ನಟ ವಿಜಯ್, ಬಹುಬೇಡಿಕೆಯ ಸ್ಟಾರ್ ನಟನಾಗಿರುವಾಗಲೇ, ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕಾರಣಕ್ಕೆ ಧುಮುಕಿದ್ದಾರೆ. ಎಂಜಿಆರ್, ಜಯಲಲಿತಾ ಮತ್ತು ಕರುಣಾನಿಧಿಯ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಾರೆ. 1967ರಲ್ಲಿ ಡಿಎಂಕೆ ಮತ್ತು 1977ರಲ್ಲಿ ಎಐಎಡಿಎಂಕೆ ಭಾರೀ ಜಯಭೇರಿ ಪಡೆದ ರೀತಿಯಲ್ಲಿಯೇ, 2026ರಲ್ಲಿ ದಳಪತಿ ವಿಜಯ್ ಇತಿಹಾಸ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಕನಿಷ್ಟ ಬಹುಮತವನ್ನು ಪಡೆಯದ ಬಿಜೆಪಿ ಅನಿವಾರ್ಯವಾಗಿ ಬೇರೆ ಪಕ್ಷಗಳ ಊರುಗೋಲು ಹಿಡಿದು ಅಧಿಕಾರ ಹಿಡಿಯಬೇಕಾಯಿತು. ಬಿಹಾರದಲ್ಲಿ ಜೆಡಿಯು, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ, ಮಹಾರಾಷ್ಟ್ರದಲ್ಲಿ ಶಿವಸೇನಾ, ಕರ್ನಾಟಕದಲ್ಲಿ ಜೆಡಿಎಸ್ ಸೇರಿದಂತೆ 24 ಪಕ್ಷಗಳ ಬೆಂಬಲಪಡೆಯಿತು. ಇದೇ ರೀತಿಯ ಬೆಂಬಲವನ್ನು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಪಡೆದಿದೆ.
2026ರಲ್ಲಿ ತಮಿಳುನಾಡಿನಲ್ಲಿ ಬರಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ 11 ಏಪ್ರಿಲ್ 2025ರಲ್ಲಿ ಎಐಎಡಿಎಂಕೆ ಬೆಂಬಲವನ್ನು ಬಿಜೆಪಿ ಪಡೆದಿದೆ. ಈ ಬೆಂಬಲ ಅಧಿಕಾರವಾಗಿ ಮಾರ್ಪಡುವುದು ಬಹುತೇಕ ಕಷ್ಟವಾಗುತ್ತದೆ. ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ ಈಗಾಗಲೇ ಘೋಷಿಸಿದ್ದಾರೆ. “ಡಿಎಂಕೆ ಸೋಲಿಸಲು ಮೈತ್ರಿ ಮಾಡಿಕೊಳ್ಳು ಸಿದ್ಧ. ಆದರೆ, ಬಿಜೆಪಿ ಪಕ್ಷದಿಂದ ಯಾರೇ ಅಭ್ಯರ್ಥಿಗಳು ಗೆದ್ದರೂ ಅಧಿಕಾರ ಕೊಡುವುದಿಲ್ಲ” ಎಂದಿದ್ದಾರೆ. ಪ್ರಾದೇಶಿಕ ಪಕ್ಷವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಇದು ಸೂಚಿಸುತ್ತದೆ.
ಪ್ರಾದೇಶಿಕ ಪಕ್ಷಗಳೇ ದರ್ಬಾರು ನಡೆಸಿದ ತಮಿಳುನಾಡಿನಲ್ಲಿ ವಿಜಯ್ ತಮ್ಮದೇ ಪ್ರತ್ಯೇಕ ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ರೋಮಾಂಚನ ಮೂಡಿಸಿದೆ. ಪ್ರಾದೇಶಿಕ ಪಕ್ಷಗಳು ರಾಜ್ಯ ರಾಜಕಾರಣಕ್ಕೆ ಎಷ್ಟು ಮುಖ್ಯ ಎಂಬುದನ್ನು ತಮಿಳುನಾಡು ತೋರಿಸಿಕೊಟ್ಟಿದೆ. ಕೇಂದ್ರ ಸರ್ಕಾರ ತರುವ ಎಲ್ಲಾ ಕಾಯಿದೆಗಳಿಗೂ ತಲೆ ಬಗ್ಗಿಸಿ ಒಪ್ಪಿಕೊಳ್ಳುವ ಸಂಸ್ಕೃತಿಯಲ್ಲ ಎಂಬುದನ್ನು ತಮಿಳುನಾಡು ಅನೇಕ ಸಲ ಉದಾಹರಣೆಯಾಗಿ ಕಣ್ಣ ಮುಂದಿದೆ. ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ವಿಚಾರದಲ್ಲಿ, ದ್ವಿಭಾಷಾ ನೀತಿಯ ವಿಷಯದಲ್ಲಿ ಕೇಂದ್ರ ಸರ್ಕಾರ ಹೇಳುವ ರೀತಿಯನ್ನು ಒಪ್ಪುವುದಿಲ್ಲ ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದೆ. ಇವೆಲ್ಲವನ್ನೂ ನೋಡಿದಾಗ ರಾಷ್ಟ್ರೀಯ ಪಕ್ಷಗಳು ಎಷ್ಟೇ ಪಡಿಪಾಟಲು ಪಟ್ಟರೂ, ತಮಿಳುನಾಡಿನೊಳಗೆ ನುಸುಳುವುದು ಕಷ್ಟ.
ಬಿಜೆಪಿ ಎಂಬುದು ದೊಡ್ಡ ತಿಮಿಂಗಿಲ. ಯಾರನ್ನು, ಯಾವಾಗ ಬೇಕಾದರೂ ನುಂಗಿ ಹಾಕುವ ಮಟ್ಟಕ್ಕೆ ತಲುಪಬಹುದು. ಈಗಾಗಲೇ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ನುಂಗಿ ಹಾಕಿದೆ. ಅದೇ ರೀತಿ ತಮಿಳುನಾಡಿನಲ್ಲಿ ಪ್ರಯತ್ನಿಸುತ್ತಿದೆ. ಆದರೆ ಕೋಮುವಾದಿ ಪಕ್ಷವಾದ ಬಿಜೆಪಿಯ ತಂತ್ರ-ಕುತಂತ್ರಗಳನ್ನು ತಮಿಳುನಾಡು ಜನರು ಅರ್ಥಮಾಡಿಕೊಳ್ಳಬೇಕಿದೆ.





