ಕಾಂತಾರ ಸಿನಿಮಾದ ಮೂಲಕ ನಾಡಿನ ಜನರ ಮನಸ್ಸನ್ನು ಗೆದ್ದಿರುವ ನಟ ರಿಷಬ್ ಶೆಟ್ಟಿ, ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ವರ್ಷದ ಹಿಂದೆಯೇ ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದರು.
ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೂ ಈ ಪೋಸ್ಟರ್ ಕಾರಣವಾಗಿತ್ತು. ಕನ್ನಡಿಗ ರಿಷಬ್ ಶೆಟ್ಟಿ ಶಿವಾಜಿ ಪಾತ್ರವನ್ನು ಮಾಡುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ‘ಕನ್ನಡಿಗರ ಪಾಲಿಗೆ ಶಿವಾಜಿ ದುಷ್ಟ ದೊರೆ’, ‘ಮರಾಠಿಗರಿಗೆ ಐಕಾನ್ ಆಗಿರಬಹುದು, ಕನ್ನಡಿಗರಿಗೆ ಎಂದಿಗೂ ಐಕಾನ್ ಆಗುವುದಿಲ್ಲ’, ‘ಕನ್ನಡ ನಾಡಿನ ವಿರೋಧಿ ರಿಷಬ್ ಶೆಟ್ಟಿ’, ‘ಕನ್ನಡಿಗರ ಮೇಲೆ ದಾಳಿ ಮಾಡಿದವನ ಸಿನೆಮಾ ಮಾಡಬೇಕೆ? ಯಾಕೆ ಕನ್ನಡದ ರಾಜರು ಯಾರು ಇಲ್ಲವೇ?’ ಹೀಗೆ ಅನೇಕ ಟೀಕೆಗಳಿಗೆ ಸಿನಿಮಾದ ಪೋಸ್ಟರ್ ಕಾರಣವಾಗಿತ್ತು.
ಈಗಾಗಲೇ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಮೊದಲು ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಿಷಬ್ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಕಾಂತಾರ ಚಿತ್ರದ ಪಾತ್ರಕ್ಕಾಗಿ ಉತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಕಾಂತಾರಕ್ಕೂ ಮೊದಲು ಸ.ಹಿ.ಪ್ರಾ.ಪಾ.ಶಾಲೆ ಕಾಸರಗೋಡು, ಕಿರಿಕ್ ಪಾರ್ಟಿ ಅಂತಹ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದಲ್ಲಿ ಮೊದಲು ನಾಯಕ ನಟನಾಗಿ ತೆರೆಯ ಮೇಲೆ ಮಿಂಚಿದ್ದಾರೆ.
ಇದನ್ನು ಓದಿ : ಸಾವರ್ಕರ್ ಹಿಂದುತ್ವವಾದಿ ಹಾಗೂ ಹಿಂದೂ ವಿರೋಧಿ
ಸಿನಿಮಾ ರಂಗದಲ್ಲೇ ತನ್ನದೇ ಛಾಪನ್ನು ಮೂಡಿಸಿದ ನಟ ರಿಷಬ್, ಮೊದಲಿನಿಂದಲೂ ಬಲಪಂಥೀಯ ಸಿದ್ಧಾಂತವನ್ನು ಹೇಳುತ್ತಾ ಬಂದಿದ್ದಾರೆ. ಕಾಂತಾರ ಸಿನಿಮಾದ ಮೂಲಕ ಬಲಪಂಥೀಯ ಸಿದ್ಧಾಂತವನ್ನು ಹೆಚ್ಚು ಮುನ್ನೆಲೆಗೆ ತಂದ ರಿಷಬ್, ಈಗ ‘ಛತ್ರಪತಿ ಶಿವಾಜಿ’ ಸಿನಿಮಾ ಮೂಲಕ ಬಲಪಂಥೀಯತೆಯ ಇನ್ನೊಂದು ಮುಖ ತೋರಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ಶಿವಾಜಿಗೆ ಇತಿಹಾಸದಲ್ಲಿ ಸ್ಥಾನವಿದೆ. ಆದರೆ ಕನ್ನಡ ನಾಡಿನ ಇತಿಹಾಸದಲ್ಲಿ ಶಿವಾಜಿ ಒಬ್ಬ ದರೋಡೆಕೋರ, ವಿಧ್ವಂಸಕ ದಾಳಿಕೋರ ದೊರೆ.
“ಬೆಳವಡಿ ಸಂಸ್ಥಾನದ ಹೆಮ್ಮೆಯ ದೊರೆ ಈಶಪ್ರಭುವನ್ನು ಮೋಸದಿಂದ ಕೊಂದ ಧೂರ್ತ ಶಿವಾಜಿಯನ್ನು ಸ್ವಾಭಿಮಾನಿ ಕನ್ನಡಿಗರು ಕ್ಷಮಿಸಲು ಸಾಧ್ಯವೇ ಇಲ್ಲ. ಬೆಳವಡಿ ಮಲ್ಲಮ್ಮ ಇದೇ ಶಿವಾಜಿಯನ್ನು ಹೆಡೆಮುರಿ ಕಟ್ಟಿ ಹಿಡಿದಾಗ ಆಕೆಯ ಪಾದಕ್ಕೆ ಎರಗಿ ಕ್ಷಮಾಭಿಕ್ಷೆ ಪಡೆದು ಜೀವ ಉಳಿಸಿಕೊಂಡ ಶಿವಾಜಿ ಕನ್ನಡಿಗರ ಪಾಲಿಗೆ ಯಾವತ್ತಿಗೂ ದುಷ್ಟನೇ. ಮರಾಠಿಗರಿಗೆ ಆತ ಐಕಾನ್ ಇರಬಹುದು, ಇರಲಿ. ನಮ್ಮ ತಕರಾರೇನೂ ಇಲ್ಲ” ಎಂದು ಪತ್ರಕರ್ತರಾದ ದಿನೇಶ್ ಕುಮಾರ್ ಹೇಳಿದ್ದಾರೆ.
ಹಿಂದುತ್ವ ಮತ್ತು ಶಿವಾಜಿ
ಹಿಂದುತ್ವದ ರಾಜಕಾರಣ ವಿಚಾರಕ್ಕೆ ಬಂದರೆ, ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯನ್ನು ಹಿಂದುತ್ವ ಐಕಾನ್ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ. ಇತಿಹಾಸದ ಪುಟಗಳನ್ನು ತೆರೆದಾಗ ಶಿವಾಜಿ ಒಬ್ಬ ಜಾತ್ಯತೀತ (ಸೆಕ್ಯುಲರ್) ದೊರೆ ಎಂದು ತಿಳಿಯುತ್ತದೆ. ಅವರ ಆಸ್ಥಾನದಲ್ಲಿ ಅನೇಕ ಮುಸ್ಲಿಮರು, ದಲಿತರು ಇದ್ದರು. ಆದರೆ ಶಿವಾಜಿ ಎಂದಿಗೂ ಮುಸ್ಲಿಂ ವಿರೋಧಿ ಅಥವಾ ಮತಾಂಧನಾಗಿರಲಿಲ್ಲ. ಇಸ್ಲಾಂ ಧರ್ಮವನ್ನು ಒಂದು ಧರ್ಮವಾಗಿ ಗೌರವಿಸುತ್ತಿದ್ದರು ಮತ್ತು ಮುಸ್ಲಿಮರನ್ನು ನ್ಯಾಯಯುತವಾಗಿ ಮತ್ತು ಔದಾರ್ಯದಿಂದ ನಡೆಸಿಕೊಂಡರು.
1630ರಲ್ಲಿ ಜನಿಸಿದ ಶಿವಾಜಿಯ ಪೂರ್ವಜರು ಮುಸ್ಲಿಂ ರಾಜವಂಶವಾದ ಅಹ್ಮದ್ ನಗರದ ನಿಜಾಮ್ ಷಾಗಳ ನಿಷ್ಠಾವಂತ ಕುಲೀನರಾಗಿದ್ದರು. ಅವರ ತಂದೆ ಶಹಾಜಿಗೆ ಶಾ ಶರೀಫ್ ಎಂಬ ಮುಸ್ಲಿಂ ಸಂತನ ಹೆಸರನ್ನು ಇಡಲಾಯಿತು. ಅವರ ಅಜ್ಜ ಮಾಲೋಜಿಗೆ ಇಸ್ಲಾಮಿಕ್ ರಚನೆಯನ್ನು ಹೋಲುವ ಸಮಾಧಿ ಇತ್ತು. ಶಿವಾಜಿಯ ತಾಯಿಯ ಕುಟುಂಬವು ಒಂದು ಹಂತದಲ್ಲಿ ಮೊಘಲರ ಮಿತ್ರರಾಷ್ಟ್ರಗಳಾಗಿದ್ದರು.
ಶಿವಾಜಿ ಬಿಜಾಪುರ ಸುಲ್ತಾನರ ಕೋಟೆಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡು ಬಂಡಾಯ ನಾಯಕನಾಗಿ ಹೊರಹೊಮ್ಮಿದರು. ಮೊಘಲರು ವಿರುದ್ಧ ಹೋರಾಡಿದರು. ತಮ್ಮ ಧೈರ್ಯ, ಕುತಂತ್ರ ಮತ್ತು ಮಿಲಿಟರಿ ಪ್ರತಿಭೆಗೆ ಹೆಸರುವಾಸಿಯಾಗಿದ್ದ ಶಿವಾಜಿ, ಬಲವಾದ ನೌಕಾಪಡೆ ಮತ್ತು ದಕ್ಷ ಆಡಳಿತವನ್ನು ಹೊಂದಿದ್ದರು.
ಗೋಲ್ಕೊಂಡದ ಸುಲ್ತಾನ ಮತ್ತು ಒಟ್ಟೋಮನ್ ಸಾಮ್ರಾಜ್ಯದ ಮುಸ್ಲಿಂ ಆಡಳಿತಗಾರರೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದರು. ಶಿವಾಜಿ ಎಂದಿಗೂ ಮುಸ್ಲಿಂ ವಿರೋಧಿ ಅಥವಾ ಮತಾಂಧನಾಗಿರಲಿಲ್ಲ. ಯಾರನ್ನೂ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಲಿಲ್ಲ ಅಥವಾ ಅವರ ಪ್ರಜೆಗಳ ಮೇಲೆ ಹಿಂದೂ ಕಾನೂನುಗಳನ್ನು ಹೇರಲಿಲ್ಲ.
ಇತಿಹಾಸದಿಂದ ಶಿವಾಜಿ ಒಬ್ಬ ಜಾತ್ಯತೀತ (ಸೆಕ್ಯುಲರ್) ನಾಯಕ ಎಂದು ತಿಳಿಯುತ್ತದೆ. ಆದರೆ ಆತನನ್ನು ಹಿಂದೂತ್ವದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದಶಕಗಳಿಂದ ನಡೆಯುತ್ತಾ ಬಂದಿದೆ. ದ್ವೇಷ ರಾಜಕಾರಣಕ್ಕೆ ಶಿವಾಜಿಯನ್ನು ಬಳಸಿಕೊಳ್ಳಲಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳು ಶಿವಾಜಿಯನ್ನು ತಮ್ಮ ಸ್ವತ್ತು ಎಂದು ಭಾವಿಸಿದಂತಿದೆ.
ರಿಷಬ್ ಮತ್ತು ಶಿವಾಜಿ
ಕಾಂತಾರ ಚಾಪ್ಟರ್-1 ಸಿನಿಮಾ ಶೂಟಿಂಗ್ ನಡೆಯುತ್ತಿರುವ ವೇಳೆ ರಿಷಬ್ ಶೆಟ್ಟಿ ಅವರು ಮುಂದಿನ ಎರಡು ಸಿನಿಮಾಗಳನ್ನು ಘೋಷಿಸಿಕೊಂಡರು. ಮೊದಲು ತೆಲುಗಿನಲ್ಲಿ ‘ಹನುಮಾನ್’ ಸಿನಿಮಾ ಘೋಷಣೆಯ ಬೆನ್ನಲ್ಲೇ ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಘೋಷಣೆಯಾಯಿತು.
ಸಂದೀಪ್ ಸಿಂಗ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಪೋಸ್ಟರ್ ಬಿಡುಗಡೆ ಮಾಡಿದ ದಿನವೇ 2027 ಜನವರಿ 21 ರಂದು ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತದೆ ಎಂದು ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
ನಿರ್ದೇಶಕ ಸಂದೀಪ್ ಸಿಂಗ್ ಅವರು, ರಣದೀಪ್ ಹೂಡ ನಿರ್ದೇಶನದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದು, ನಿರ್ಮಾಪಕರಲ್ಲಿ ಒಬ್ಬರಾಗಿದ್ದರು.
ಕರಾವಳಿ ಭಾಗದಿಂದ ಬಂದ ರಿಷಬ್ ಶೆಟ್ಟಿ ಶಿವಾಜಿಯ ಪಾತ್ರದ ಸಿನಿಮಾ ಮಾಡುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ. “ಶಿವಾಜಿಗೆ ಇತಿಹಾಸದಲ್ಲಿ ಸ್ಥಾನವಿರಬಹುದು. ಆದರೆ ರಿಷಬ್ ಶೆಟ್ಟಿ ಹುಟ್ಟಿದ ಕರಾವಳಿಗೆ ಶಿವಾಜಿ ಒರ್ವ ವಿಲನ್, ದರೋಡೆಕೋರ” ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದ್ದಾರೆ.
ಕರಾವಳಿಯ ಬಸ್ರೂರು ಮುಂಬೈಯನ್ನೂ ಮೀರಿಸುವ ವಾಣಿಜ್ಯ ನಗರಿಯಾಗಿತ್ತು. ಕ್ರಿಶ 12ನೇ ಶತಮಾನದಲ್ಲಿ ತೆಂಗಿನಕಾಯಿ, ಅಕ್ಕಿ ಕಾಳುಮೆಣಸು, ತಾಳೆ, ಲವಂಗ, ದಾಲ್ಟಿನಿ, ದವಸಧಾನ್ಯಗಳು ಸೇರಿದಂತೆ ಕರಾವಳಿ ಮಲೆನಾಡಿಗರು ಬೆಳೆಯುತ್ತಿದ್ದ ಮಸಾಲ ಪದಾರ್ಥಗಳನ್ನು ಬಸೂರಿನ ಮೂಲಕ ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಚೀನಾದಿಂದ ಪಾತ್ರೆ, ರೇಷ್ಮೆ ವಸ್ತ್ರಗಳನ್ನು ಬಸೂರಿನ ಮೂಲಕ ಆಮದು ಮಾಡಲಾಗುತ್ತಿತ್ತು. ಚೀನಾಕ್ಕೆ ಬಸ್ರೂರಿನಿಂದ ಕಬ್ಬು ರಫ್ತು ಮಾಡಲಾಗುತ್ತಿತ್ತು. (ಆಧಾರ : SIVAJIS RAID ON BASRUR BY T S Shejwalkar – 1942, Page :145)
ಮಹಾಲಿಂಗೇಶ್ವರ ಜಾತ್ರೆ ಮಹಾಶಿವರಾತ್ರಿಯಂದೇ ನಡೆಯುತ್ತದೆ. ಆಗೆಲ್ಲಾ ಜಾತ್ರೆಯೆಂದರೆ ಧಾರ್ಮಿಕ ಕಾರ್ಯಕ್ರಮವಲ್ಲ. ಮಹಾಲಿಂಗೇಶ್ವರನ ತೇರು ಎಳೆಯುವ ಜಾತ್ರೆಯೆಂದರೆ ಕೃಷಿಕರ ಬದುಕಿನ ಮಹತ್ತರ ದಿನ. ಆ ದಿನ ಸಂತೆಯಲ್ಲಿ ಕೃಷಿಕರು ಬೆಳೆದಿದ್ದನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಮೊದಲೇ ವಾಣಿಜ್ಯ ನಗರ ಬೇರೆ. ಅಂದು ರೈತರು ಮತ್ತು ವ್ಯಾಪಾರಿಗಳ ಬಳಿ ಹಣವಿರುತ್ತದೆ ಎಂದುಕೊಂಡು 1665 ರ ಫೆಬ್ರವರಿಯ ಮಹಾಶಿವರಾತ್ರಿ ದಿನ ಶಿವಾಜಿ ತನ್ನ ದರೋಡೆಕೋರ ಸೈನ್ಯದ ಜೊತೆ ದಾಳಿ ಮಾಡಿ ದೇವಸ್ಥಾನವನ್ನೂ ಸೇರಿದಂತೆ ಲೂಟಿ ಮಾಡಿದರು. ಬಸ್ರೂರಿನ ಮುಖ್ಯ ವ್ಯಾಪಾರಿ ವರ್ಗವಾಗಿದ್ದ ಜಿಎಸ್ ಬಿ (ಗೌಡ ಸಾರಸ್ವತ ಬ್ರಾಹ್ಮಣ)ರ ಮೇಲೆ ಶಿವಾಜಿ ದರೋಡೆ ಪಡೆ ಹಲ್ಲೆ ನಡೆಸಿತು. ಹಲವು ಹಿಂದೂ-ಬ್ರಾಹ್ಮಣರ ಸಾವು ನೋವುಗಳು ನಡೆದವು. ಈ ದಾಳಿಯ ಬಳಿಕ ಬಸ್ರೂರು ವ್ಯಾಪಾರ ಕೇಂದ್ರ ನೆನೆಗುದಿಗೆ ಬಿದ್ದಿತ್ತು.
ಕರಾವಳಿಯ ದೇವಸ್ಥಾನದ ಜಾತ್ರೆಗಳ ಮೇಲೆ ದಾಳಿ ನಡೆಸಿ, ದರೋಡೆ ಮಾಡಿದ ಶಿವಾಜಿಯನ್ನು ಕರಾವಳಿಯ ನೆಲದಲ್ಲಿ ಯಾರೂ ವಿಜೃಂಭಿಸಲು ಸಾಧ್ಯವಿಲ್ಲ. ಶಿವಾಜಿ ಕರಾವಳಿಯ ಪಾಲಿಗೆ ದರೋಡೆಕೋರನೇ ಹೊರತು ಹೋರಾಟಗಾರನಲ್ಲ. ನಟ ರಿಷಬ್ ಶೆಟ್ಟಿಯ ಅವರು ಪಾತ್ರದ ಮೂಲಕ ಶಿವಾಜಿಯನ್ನು ಹೀರೋ ಎಂದು ಬಿಂಬಿಸುವುದು ಅವರ ಹುಟ್ಟೂರಿಗೆ ಮಾಡುವ ಅವಮಾನ.
ರಿಷಬ್ ಮತ್ತು ಹಿಂದುತ್ವ
ಕಾಂತಾರ ಸಿನಿಮಾದ ಮೂಲಕ ಡಿವೈನ್ ಸ್ಟಾರ್ ಎಂಬ ಗುರುತನ್ನು ಪಡೆದ ರಿಷಬ್ ಶೆಟ್ಟಿ, ನಂತರ ಒಪ್ಪಿಕೊಂಡ ಎಲ್ಲಾ ಸಿನಿಮಾಗಳು ಸಹ ಹಿಂದುತ್ವಕ್ಕೆ ಸಂಬಂಧ ಪಟ್ಟಿರುವವು. ಕಾಂತಾರ ಸಿನಿಮಾದ ಮೂಲಕ ಹಿಂದುತ್ವವನ್ನು ಪ್ರಚಾರ ಮಾಡಿದ ರಿಷಬ್ ಶೆಟ್ಟಿ, ಈಗ ‘ಛತ್ರಪತಿ ಶಿವಾಜಿ ಮಹಾರಾಜ್’ ಮೂಲಕ ಮತ್ತೊಂದು ಹಿಂದುತ್ವವಾದವನ್ನು ಮುನ್ನೆಲೆಗೆ ತರುವರೇ ಎಂಬ ಪ್ರಶ್ನೆ ಬಂದಿದೆ.
ಶಿವಾಜಿಯ ಆಸ್ಥಾನದಲ್ಲಿ ಅನೇಕ ಮುಸ್ಲಿಮರು ಇದ್ದರು. ಆದರೆ ಸಿನಿಮಾದಲ್ಲಿ ಆ ಪಾತ್ರಗಳು ಹೇಗೆ ಇರಬಹುದು ಎಂಬ ಕುತೂಹಲ ಹೆಚ್ಚಿದೆ. ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಕೋಮುವಾದಿ ಪರಂಪರೆಗೆ ಈ ಸಿನಿಮಾ ದಾರಿ ಮಾಡಿಕೊಡಬಹುದೇ? ಅಥವಾ ಶಿವಾಜಿಯನ್ನು ದರೋಡೆಕೋರ ಎಂದು ಚಿತ್ರಿಸುವುದೇ? ಹೀಗೆ ಇನ್ನು ಅನೇಕ ಪ್ರಶ್ನೆಗಳು ಮೂಡಿವೆ.





