(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)
ಇವತ್ತು ಭಾರತ ಮತ್ತು ಪಾಕಿಸ್ತಾನದ ನಡುವೆ ಬಹಳ ಮಹತ್ವದ ಕ್ರಿಕೆಟ್ ಮ್ಯಾಚ್ ಇದೆ. ವಿಶ್ವಕಪ್ನ ಇದುವರೆಗಿನ ಹಣಾಹಣಿಗಳಲ್ಲಿ ಭಾರತ ಎರಡು ಮ್ಯಾಚ್ ಗೆದ್ಕೊಂಡು ನಾಲ್ಕು ಪಾಯಿಂಟ್ ಸಂಪಾದಿಸಿದೆ. ಇನ್ನೊಂದ್ಕಡೆ ಪಾಕಿಸ್ತಾನ ಕೂಡ ಮೊದಲೆರಡು ಮ್ಯಾಚ್ನಲ್ಲಿ ಉತ್ತಮ ಆಟವಾಡಿ ಭರ್ಜರಿ ಫಾರ್ಮ್ನಲ್ಲಿದೆ. ಆದ್ರೆ, ಅಫ್ಘಾನಿಸ್ತಾನದ ವಿರುದ್ಧದ ಮ್ಯಾಚ್ನಲ್ಲಿ ಭಾರತ ಬಹಳ ಚಂದ ಆಡಿದ್ರಿಂದ ನೆಟ್ ರನ್ರೇಟ್ನಲ್ಲಿ ಪಾಕಿಸ್ತಾನಕ್ಕಿಂತ ಚೂರೇ ಚೂರು ಮುಂದಿದೆ. ಹಾಗಾಗಿನೇ, ಇವತ್ತು ಅಹ್ಮದಾಬಾದ್ನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಶುರುವಾಗೋ ಮ್ಯಾಚ್ ಸಿಕ್ಕಾಪಟ್ಟೆ ಇಂಟ್ರೆಂಸ್ಟಿಗ್.
ಹೀಗಿರುವಾಗ… ಕನ್ನಡ ಚಲನಚಿತ್ರರಂಗದ ಹೆಸರಾಂತ ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥನಾರಾಯಣ ಅವ್ರು ಕ್ರಿಕೆಟ್ ಮತ್ತು ಕನ್ನಡ ಸಿನಿಮಾ ತಾರೆಯರಿಗೆ ಸಂಬಂಧಿಸಿದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ:
ಕನ್ನಡ ಚಿತ್ರರಂಗದಲ್ಲಿಯೂ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಇದ್ದಾರೆ, ಇದ್ದರು. ಕೆ ಎಸ್ ಅಶ್ವಥ್ ಅವರಂತೂ ದೊಡ್ಡ ಕ್ರಿಕೆಟ್ ಅಭಿಮಾನಿ. ಅದರಲ್ಲೂ, ಕನ್ನಡಿಗ ಜಿ ಆರ್ ವಿಶ್ವನಾಥ್ ಅವರ ಪಕ್ಕಾ ಅಭಿಮಾನಿ. ನಾನು ಮತ್ತು ವಿಶ್ವನಾಥ್ ಬಾಲ್ಯ ಸ್ನೇಹಿತರು, ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದವರು; ಹಾಗಾಗಿ, ಅಶ್ವಥ್ ಅವರು ವಿಶ್ವನ ಬಾಲ್ಯದ ದಿನಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಮ್ಯಾಚ್ ಇದ್ದ ದಿನಗಳಲ್ಲಿ ಶೂಟಿಂಗ್ ಇದ್ದರೆ ಕಾಮೆಂಟರಿ ಕೇಳಲು ಸಣ್ಣ ರೇಡಿಯೋ ತರುತ್ತಿದ್ದರು.
ಇನ್ನು, ಅಂಬರೀಶ್ ಅವರಂತೂ ಎಲ್ಲಾ ಕ್ರೀಡೆಗಳ ಅಭಿಮಾನಿ. ಒಮ್ಮೆ ಹೀಗಾಯಿತು… ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿರುವ ವೇಳೆ ಭಾರತದ ಮ್ಯಾಚ್ ನಡೆಯುತ್ತಿತ್ತು. ಯಾವ ದೇಶದ ವಿರುದ್ಧ ಎಂಬುದನ್ನು ಮರೆತಿರುವೆ. ಅಂಬರೀಶ್ ಅವರು ಶೂಟಿಂಗ್ ಮಧ್ಯೆ ಪದೇಪದೇ ಸ್ನೇಹಿತರಿಗೆ ಫೋನ್ ಮಾಡಿ ಚಡಪಡಿಸುತ್ತಿದ್ದರು. ಆಗೆಲ್ಲ ಲ್ಯಾಂಡ್ಲೇನ್ ಫೋನ್ಗಳು ಮಾತ್ರ ಇದ್ವು. ಇವರ ಈ ಕಷ್ಟ ನೋಡಲಾರದೆ, ತಂಡದ ಮ್ಯಾನೇಜರ್ ಒಂದು Portable Tv ತರಿಸಿ ಸೆಟ್ನಲ್ಲಿ ಏರ್ಪಾಡು ಮಾಡುತ್ತಾರೆ. ಕುತೂಹಲಕರ ಘಟ್ಟದಲ್ಲಿದ್ದ ಮ್ಯಾಚ್ನಲ್ಲಿ ಭಾರತದ ತಂಡ ಸೋಲುತ್ತದೆ. ಕೋಪಗೊಂಡ ಅಂಬರೀಶ್, ಕಾಲಿನಿಂದ ಒದ್ದಿದ್ದರಿಂದ ಟಿವಿ ಒಡೆದುಹೋಗುತ್ತದೆ. ಸೆಟ್ನಲ್ಲಿ ಎಲ್ಲರೂ ಗಾಬರಿಗೊಳ್ಳುತ್ತಾರೆ. ಆ ಟಿವಿ ಒಬ್ಬ ಲೈಟ್ಮನ್ದಾಗಿರುತ್ತದೆ. ಅಂಬರೀಶ್ ಎಂದಿನಂತೆ, “ಯಾರದೋ ಅದು ಟಿವಿ?” ಎಂದು ಕೇಳಿ, ಆ ಲೈಟ್ಮನ್ ಹತ್ತಿರ ಹೋಗಿ, ಜೇಬಿನಲ್ಲಿ ದುಡ್ಡು ಇಡುತ್ತಾರೆ.
ಇದಿಷ್ಟು ಅಶ್ವತ್ಥನಾರಾಯಣ ಅವ್ರು ನೆನಪಿಸಿಕೊಂಡ ಘಟನೆ. ಇವತ್ತಿನ ಮ್ಯಾಚ್ ಯಾವುದೇ ವಿವಾದಗಳಿಲ್ಲದೆ ಸುಸೂತ್ರವಾಗಿ ನಡೀಲಿ, ಚಂದ ಆಡುವ ತಂಡ ಗೆದ್ದು ಬೀಗಲಿ ಅಂತ ನಮ್ಮ ಹಾರೈಕೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ




