ಈ ವರ್ಷ ಭಾರತದಲ್ಲಿ ಚಳಿಗಾಲ ಸಾಮಾನ್ಯಕ್ಕಿಂತ ಬೇಗ ಹಾಗೂ ಹೆಚ್ಚು ತೀಕ್ಷ್ಣವಾಗಿ ಕಾಣಿಸಿಕೊಂಡಿದೆ. ಉತ್ತರ ಭಾರತದ ಹಿಮಾಚಲ ಭಾಗಗಳಿಂದ ಹಿಡಿದು ದಕ್ಷಿಣದ ಬಹುಭಾಗಗಳಲ್ಲಿ ಹಠಾತ್ ತಾಪಮಾನ ಕುಸಿತ ಚಳಿ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಮುಂಜಾನೆ ದಟ್ಟ ಮಂಜು, ಸಂಜೆ ಹಾಗೂ ರಾತ್ರಿ ಗಾಢ ಚಳಿ ಅನುಭವಕ್ಕೆ ಬರುತ್ತಿದೆ. ಚಳಿಗಾಲದಲ್ಲಿ ಇದು ಸಾಮಾನ್ಯ ಎನಿಸಿದರೂ ಇತ್ತೀಚಿನ ಜಾಗತಿಕ ಹವಾಮಾನ ಬದಲಾವಣೆಗಳು ಹಾಗೂ ಕೆಲ ವೈಜ್ಞಾನಿಕ ಕಾರಣಗಳು ಕೊರೆಯುವ ಚಳಿ ಹೆಚ್ಚಳದ ಮೇಲೆ ನೇರ ಪರಿಣಾಮ ಬೀರುತ್ತಿವೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಿಸಿವೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದೂ ಊಹಿಸಿದೆ. ನಗರದಲ್ಲಿ ಡಿ.10ರಂದು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರಿಗರು ಮುಂಜಾನೆ ಅತಿ ಹೆಚ್ಚು ತಂಪು ಅನುಭವಿಸುತ್ತಿದ್ದಾರೆ. ಬಿಸಿಲಿದ್ದರೂ ಶೀತಗಾಳಿ ಹೆಚ್ಚಿರುವ ಕಾರಣ ಚಳಿಗಾಲದ ಸ್ಪಷ್ಟ ಅನುಭವ ಪಡೆಯುತ್ತಿದ್ದಾರೆ.
ಚಳಿಗಾಲವನ್ನು ಆರಂಭದಿಂದಲೂ ಹೆಚ್ಚು ಪ್ರಭಾವಿಸಿದ ಹಿಮಾಲಯದ ಹಿಮಪಾತವನ್ನು ಗಮನಿಸಬೇಕಿದೆ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೇ ಹಿಮಾಲಯದ ಮೇಲ್ಭಾಗಗಳಲ್ಲಿ ಅಸಾಮಾನ್ಯ ಹಿಮಪಾತ ದಾಖಲಾಗಿತ್ತು. ಈ ಹೆಚ್ಚಿದ ಹಿಮಪಾತಕ್ಕೆ ಮಧ್ಯ ಏಷ್ಯಾದಿಂದ ಆಗಮಿಸುವ ಪಶ್ಚಿಮ ಮಾರುತಗಳ ಏರಿಳಿತ ಮತ್ತು ತೀವ್ರತೆಯೇ ಕಾರಣ. ಈ ಗಾಳಿ-ಮಳೆ ವ್ಯವಸ್ಥೆಯು ಭಾರತಕ್ಕೆ ಮಳೆ ಹಾಗೂ ಹಿಮವನ್ನು ಹೊತ್ತೊಯ್ಯುವುದರ ಜತೆಗೆ ತಾಪಮಾನವನ್ನು ತೀವ್ರವಾಗಿ ಕುಗ್ಗಿಸುವ ಸಾಮರ್ಥ್ಯವನ್ನೂ ಹೊಂದಿವೆ. ಹೀಗೆ ಗಾಳಿಯೊಂದಿಗೆ ಬಂದ ಹಿಮ ನೆಲವನ್ನು ಮುಚ್ಚಿದಾಗ ಅದು ಸೂರ್ಯನ ಉಷ್ಣತೆಯನ್ನು ಹೀರಿಕೊಳ್ಳದೆ ಮತ್ತೆ ಆಕಾಶಕ್ಕೆ ಪ್ರತಿಫಲಿಸುತ್ತದೆ. ಇದರಿಂದ ನೆಲ ಬಿಸಿಯಾಗುವುದು ಕಡಿಮೆಯಾಗುತ್ತದೆ. ಹೀಗಾಗಿ ಹಿಮಾಲಯ ಪ್ರದೇಶದಲ್ಲಿ ಚಳಿ ಮತ್ತಷ್ಟು ಹೆಚ್ಚಾಗುತ್ತದೆ. ಮೇಲ್ಭಾಗದಲ್ಲಿ ಚಳಿ ಹೆಚ್ಚಾದಾಗ ಆ ತಣ್ಣನೆಯ ಗಾಳಿ ನಿಧಾನವಾಗಿ ಸಮತಟ್ಟು ಪ್ರದೇಶಗಳಿಗೆ ಹರಿಯಲು ಪ್ರಾರಂಭಿಸುತ್ತದೆ. ಈ ಬಾರಿ ಅದೇ ಗಾಳಿ ಉತ್ತೆ ಭಾರತದತ್ತ ತೀವ್ರವಾಗಿ ಇಳಿದು ಬಂದಿದೆ. ಬಳಿಕ ಅದು ಕೇಂದ್ರ ಮತ್ತು ದಕ್ಷಿಣ ಭಾರತದತ್ತಲೂ ವಿಸ್ತರಿಸಿದೆ.

ಚಳಿ ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣ ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಕುಸಿಯುವ ವೇಳೆ ಉಂಟಾಗುವ ʼಲಾ ನಿನಾʼ (ಪೂರ್ವ, ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿರುವ ಸ್ಥಿತಿ) ಪರಿಣಾಮ ಪ್ರಕ್ರಿಯೆ. ಕಳೆದ ಕೆಲವು ತಿಂಗಳುಗಳಿಂದಲೇ ಸಾಗರದ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಜಾಗತಿಕ ವಾತಾವರಣ ವರದಿಗಳು ಈ ವರ್ಷ ʼಲಾ ನಿನಾʼ ರೂಪುಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಸೂಚಿಸುತ್ತಿವೆ. ಪರಿಣಾಮ 2025ರ ಡಿಸೆಂಬರ್ನಿಂದ 2026ರ ಫೆಬ್ರವರಿವರೆಗೆ ಕರ್ನಾಟಕದಲ್ಲಿ ಇನ್ನಷ್ಟು ಕೊರೆಯುವ ಚಳಿ ಇರಲಿದೆ. ಆದರೆ, ದಕ್ಷಿಣ ಒಳನಾಡಿಗಿಂತ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಹುತೇಕ ಶೀತಗಾಳಿ ಕಾಣಿಸಿಕೊಳ್ಳಲಿದೆ ಎಂದು ಮುನ್ಸೂಚನೆ ಇದೆ. ಪೆಸಿಫಿಕ್ನ ಈ ತಂಪಾಗುವಿಕೆ ಏಷ್ಯಾದ ಗಾಳಿ ಹರಿವಿನ ಮಾರ್ಗಗಳನ್ನು ಬದಲಿಸುತ್ತದೆ. ಗಾಳಿಯ ದಿಕ್ಕು ಮತ್ತು ಬೀಸುವ ಬಿರುಸಿನಲ್ಲಿ ಉಂಟಾಗುವ ಬದಲಾವಣೆಗಳು ತಂಪು ಗಾಳಿಯ ಪ್ರವಾಹವನ್ನು ಹೆಚ್ಚಿಸುತ್ತವೆ. ವಿಜ್ಞಾನಿಗಳ ಪ್ರಕಾರ, ʼಲಾ ನಿನಾ ಪ್ರಕ್ರಿಯೆಯ ಸಂದರ್ಭದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಬೀಸುವ ಶೀತ ಗಾಳಿಯ ಒತ್ತಡ ಹೆಚ್ಚಾಗಿ, ಉತ್ತರ ಮತ್ತು ಮಧ್ಯ ಭಾರತದಲ್ಲಿ ಚಳಿಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಬೇಸಿಗೆಯ ಆರಂಭದವರೆಗೂ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ವಿಶ್ವ ಹವಾಮಾನ ಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳು ವರದಿ ನೀಡಿವೆ.
ಈ ವರ್ಷದ ಚಳಿಗಾಲ ತೀವ್ರವಾಗಲು ಮತ್ತೊಂದು ಪ್ರಮುಖ ಕಾರಣ ಜಟ್ ಸ್ಟ್ರೀಮ್ಗಳ ಅಸ್ಥಿರ ಚಲನೆ. ಭೂಮಿಯ ಮೇಲ್ಭಾಗದಲ್ಲಿ ಅತಿ ವೇಗವಾಗಿ ಹರಿಯುವ ಈ ಗಾಳಿಯ ಹರಿವಿನ ಮಾರ್ಗಗಳು ಸಾಮಾನ್ಯವಾಗಿ ಉತ್ತರದ ಭಾಗದಲ್ಲಿ ಕಂಡುಬರುತ್ತವೆ. ಆದರೆ ಈ ಬಾರಿ ಅವು ಸಾಮಾನ್ಯಕ್ಕಿಂತ ದಕ್ಷಿಣಕ್ಕೆ ಸರಿದಿವೆ. ಜಟ್ ಸ್ಟ್ರೀಮ್ ಒಂದೇ ಬಾರಿ ದಕ್ಷಿಣಕ್ಕೆ ಇಳಿದರೆ, ಉತ್ತರದ ಹಿಮಶೀತ ಗಾಳಿ ನೇರವಾಗಿ ಸಮತಟ್ಟು ಪ್ರದೇಶಗಳತ್ತ ಹರಿಯುತ್ತದೆ. ಈ ಕಾರಣದಿಂದ ಚಳಿಗಾಲ ಆರಂಭವಾಗುವ ಮೊದಲ ದಿನಗಳಲ್ಲೇ ಉತ್ತರ ಭಾರತದ ಚಳಿ ಕೇಂದ್ರ ಮತ್ತು ದಕ್ಷಿಣ ಭಾಗಗಳತ್ತವೂ ತ್ವರಿತವಾಗಿ ಹರಡಿದೆ. ಹವಾಮಾನ ಬದಲಾವಣೆಯಿಂದಾಗಿ ಜಟ್ ಸ್ಟ್ರೀಮ್ಗಳ ಪರಿಣಾಮವೂ ಹೆಚ್ಚುತ್ತಿದೆ. ಇದರಿಂದ ಮುಂದಿನ ವರ್ಷಗಳಲ್ಲೂ ಇಂತಹ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ.
ಕಳೆದ ವರ್ಷ ಅನುಭವಿಸಿದ ಎಲ್ ನಿನೋ ಪರಿಣಾಮವೂ ಇದಕ್ಕೆ ಜತೆಯಾಗಿದೆ. ʼಎಲ್ ನಿನೋʼ ಸಮಯದಲ್ಲಿ ಜಾಗತಿಕ ತಾಪಮಾನ ಏರಿದ್ದರೂ, ಅದು ಅಂತ್ಯಗೊಳ್ಳುವ ವೇಳೆಗೆ ವಾತಾವರಣದ ತಾಪಮಾನ ಗಣನೀಯ ಇಳಿಕೆ ಕಂಡಿತ್ತು. ಇದನ್ನು ʼಪೋಸ್ಟ್ ಎಲ್ ನಿನೋ ಕೂಲಿಂಗ್ʼ ಎಂದು ಕರೆಯಲಾಗುತ್ತದೆ. ಸಾಗರ ಮತ್ತು ಗಾಳಿಯ ತಾಪಮಾನಗಳು ಮರುಸಮತೋಲನಕ್ಕೆ ಬರುವಾಗ ತಾತ್ಕಾಲಿಕವಾಗಿ ತೀವ್ರ ಚಳಿ ಕಂಡುಬರುವುದು ಸಾಮಾನ್ಯ. ಈ ವರ್ಷ ಅದೇ ರೀತಿಯ ಮಾದರಿ ಗೋಚರಿಸಿದೆ.
Urban Heat Island ಪರಿಣಾಮದಿಂದ ಗ್ರಾಮೀಣ ಪ್ರದೇಶಗಳಿಗಿಂದ ನಗರಗಳು ಹೆಚ್ಚು ಬೆಚ್ಚಗಿರುತ್ತವೆ. ಆದರೆ ಈ ವರ್ಷ ನಗರಗಳಲ್ಲೂ ಚಳಿ ಹೆಚ್ಚಾಗಿರುವುದು ವಿಶೇಷ. ರಾತ್ರಿ ವೇಳೆ ಆಕಾಶ ಸ್ವಚ್ಛವಾಗಿರುವುದರಿಂದ ತಾಪಮಾನ ವೇಗವಾಗಿ ಹೊರಹೋಗುವುದನ್ನು ಗಮನಿಸಬಹುದು. ಇದನ್ನು ʼರೇಟಿಯೇಟೀವ್ ಕೂಲಿಂಗ್ʼ ಎನ್ನಲಾಗುತ್ತದೆ. ಅಲ್ಲದೆ ರಾತ್ರಿ ವೇಳೆ ವಾಹನಗಳ ಕಡಿಮೆ ಸಂಚಾರ ಮತ್ತು ಕಟ್ಟಡಗಳ ಉಷ್ಣ ಸಂಗ್ರಹಣ ಶಕ್ತಿ ಕಡಿಮೆಯಾಗಿರುವುದೂ ಕೂಡ ನಗರವಾಸಿಗಳು ಹೆಚ್ಚು ಚಳಿ ಅನುಭವಿಸಲು ಕಾರಣವಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವುದರಿಂದ ಗಾಳಿ-ಮಳೆ ವ್ಯವಸ್ಥೆಗಳು ಅಸ್ಥಿರಗೊಂಡಿವೆ. ಅರಣ್ಯ ನಾಶ, ಕೈಗಾರಿಕೆಗಳು ಹೊರಸೂಸುವ ಕಾರ್ಬನ್, ಸಾಗರದ ತಾಪಮಾನ ಏರಿಳಿತ, ಇವೆಲ್ಲವೂ ಎಲ್ಲಾ ಋತುಮಾನಗಳ ಸ್ವರೂಪವನ್ನು ಬದಲಾಯಿಸುತ್ತಿವೆ. ತೀವ್ರ ಬಿಸಿ ಗಾಳಿ ಇರುವಾಗಲೇ ತೀವ್ರ ಚಳಿಯ ಅಲೆಗಳೂ ಸಂಭವಿಸುತ್ತಿರುವುದು ಇದೇ ಕಾರಣದಿಂದ.

ತೀವ್ರ ಚಳಿಗಾಲವು ಆರೋಗ್ಯ, ಆರ್ಥಿಕತೆ, ಕೃಷಿ ಸೇರಿದಂತೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ತಾಪಮಾನ ಕುಸಿದಾಗ ವಿಶೇಷವಾಗಿ ಹಿರಿಯರು, ಮಕ್ಕಳು, ನಿರಾಶ್ರಿತರು, ರೋಗಗ್ರಸ್ತರು ಇದರ ಪರಿಣಾಮಕ್ಕೆ ಮೊದಲು ಗುರಿಯಾಗುತ್ತಾರೆ. ಹೈಪೋಥರ್ಮಿಯಾ ಮತ್ತು ಫ್ಲೂ-ಜ್ವರದ ಪ್ರಮಾಣ ಹೆಚ್ಚಾಗಬಹುದು. ಬೆಳಗ್ಗೆ ತೀಡುವ ಚಳಿಯಿಂದ ಪ್ರಯಾಣ ತ್ರಾಸದಾಯವಾಗುತ್ತದೆ. ಅಲ್ಲದೆ ವಾಹನಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಹುದು. ಕೆಲವು ಬೆಳೆಗಳಿಗೆ ಹಿಮದ ಹಾನಿ ತಗುಲಬಹುದು. ಜಾನುವಾರುಗಳ ಆರೈಕೆ ಕಠಿಣವೆನಿಸಬಹುದು. ಹಾಲು-ಮಾಂಸ ಉತ್ಪಾದನೆ ಕುಸಿತವಾಗುತ್ತದೆ. ದಿನಗೂಲಿ ಕಾರ್ಮಿಕರು ಹೊರಾಂಗಣದಲ್ಲಿ ಕೆಲಸ ಮಾಡುವ ಜನರಿ ಆದಾಯದ ಮೇಲೆ ದೊಡ್ಡ ಹೊಡೆತ ಬೀಳಬಹುದು. ಚಳಿಯಿಂದ ವಿದ್ಯುತ್ ಬಳಕೆ ಹೆಚ್ಚಾಗುವುದರಿಂದ ವಿದ್ಯುತ್ ಕಡಿತ ಹೆಚ್ಚಾಗಿ, ಎಲ್ಪಿಜಿ, ಕಟ್ಟಿಗೆಗಳಿಗೆ ಬೇಡಿಕೆ ಹೆಚ್ಚಾಗಬಹುದು. ರಸ್ತೆ ಮೇಲೆ ದಟ್ಟ ಮಂಜು ಬೀಳುವುದರಿಂದ ಅಪಘಾತಗಳಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ದೀರ್ಘಕಾಲದ ಚಳಿ ದಿನಗಳು ಮನೋನಿರೋಧಕ (seasonal depression) ಲಕ್ಷಣಗಳನ್ನು ಹೆಚ್ಚಿಸಬಹುದು. ಒಟ್ಟಿನಲ್ಲಿ, ತೀವ್ರ ಚಳಿಗಾಲವು ಆರೋಗ್ಯ, ಆರ್ಥಿಕತೆ, ಸಂಚಾರ, ಕೃಷಿ, ಮತ್ತು ದೈನಂದಿನ ಬದುಕಿನ ಮೇಲೆ ಸಮಗ್ರವಾಗಿ ಬಾಧಿಸಿ, ಸಮಾಜದ ದುರ್ಬಲ ವಿಭಾಗಗಳಿಗೆ ಅತ್ಯಂತ ಗಂಭೀರ ಹೊಡೆತ ನೀಡುತ್ತದೆ.
ಇದನ್ನೂ ಓದಿ: ವಿಶ್ವ ʼಮಾನವ ಹಕ್ಕುಗಳ ದಿನʼ | ನಾಗರಿಕ ಸಮಾಜ ಮಾಡಬೇಕಿರುವುದೇನು?
ಹವಾಮಾನ ಬದಲಾವಣೆಗಳು ಚಳಿಯ ತೀವ್ರತೆಯನ್ನು ಹೆಚ್ಚಿಸುತ್ತಿರುವುದರಿಂದ, ಸರ್ಕಾರ, ಸ್ಥಳೀಯ ಆಡಳಿತ ಮತ್ತು ಸಮಾಜದೊಂದಿಗೆ ಸಾಮಾನ್ಯ ನಾಗರಿಕರೂ ಸಹ ಜಾಗೃತರಾಗಿರುವುದು ಅಗತ್ಯವಾಗಿದೆ. ರಕ್ಷಣಾ ಕ್ರಮಗಳು, ಆರೋಗ್ಯ ಸೇವೆಗಳ ಸಿದ್ಧತೆ, ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಬೇಕಾದ ಮೂಲಸೌಕರ್ಯಗಳು ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಚಳಿಗಾಲದ ಹೊಡೆತವನ್ನು ನಾವು ಕಡಿಮೆ ಮಾಡಬಹುದು. ಚಳಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಅದರ ಪರಿಣಾಮಗಳನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಲು ಮಾಡುವ ವ್ಯವಸ್ಥಿತ ಪ್ರಯತ್ನ ಮಾತ್ರ ಜನಜೀವನವನ್ನು ರಕ್ಷಿಸಬಲ್ಲದು.





