ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಯತ್ನಿಸುತ್ತಿರುವ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ನಡೆಯನ್ನು 56 ಮಾಜಿ ನ್ಯಾಯಾಧೀಶರು ಶುಕ್ರವಾರ ಖಂಡಿಸಿದ್ದಾರೆ. ಇದು ನ್ಯಾಯಾಂಗ ವ್ಯವಸ್ಥೆಯನ್ನು ಧ್ವಂಸ ಮಾಡುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಮದುರೈ ಬಳಿಯ ತಿರುಪರನ್ ಕುಂಡ್ರಂ ಬೆಟ್ಟದ ಮೇಲಿರುವ ಅರುಳ್ಮಿಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅವಕಾಶ ನೀಡಿ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಆದೇಶ ನೀಡಿದ್ದರು. ಈ ಬೆಟ್ಟದಲ್ಲಿ ಒಂದು ದೇವಸ್ಥಾನ ಮತ್ತು ದರ್ಗಾ ಇದ್ದು, ತಮಿಳುನಾಡಿದ ಐಕ್ಯತೆಯ ಕೇಂದ್ರದತ್ತಿದ್ದ ದೀಪದ ಕಂಬ ದರ್ಗಾದ ಮುಂದೆ ಇದೆ. ಇದು ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದರ ವಿರುದ್ಧ ಆಡಳಿರೂಢ ಡಿಎಂಕೆ ಪಕ್ಷವು ಡಿಸೆಂಬರ್ 9 ರಮದು ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ವಾಗ್ದಂಡನೆಗೆ ಕೋರಿ ನೋಟಿಸನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಂಗಳವಾರ ಸಲ್ಲಿಸಿದ್ದರು. ಸಂವಿಧಾನದ 217ನೇ ವಿಧಿ ಮತ್ತು 124ನೇ ವಿಧಿಯ ಅಡಿಯಲ್ಲಿ ಈ ಪ್ರಸ್ತಾಪವನ್ನು ಮಂಡಿಲಾಗಿದ್ದು, ಈ ವೇಳೆ ಇಂಡಿಯಾ ಮೈತ್ರಿಕೂಟದ ಸಂಸದರ ನಿಯೋಗವು 120 ಸಹಿಗಳಿರುವ ವಾಗ್ದಂಡನೆ ನೋಟಿಸನ್ನು ಸ್ಪೀಕರ್ ಗೆ ಹಸ್ತಾಂತರಿಸಿತು.
ನ್ಯಾಯಾಂಗದ ನಡವಳಿಕೆ, ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಯನ್ನು ಉಲ್ಲಂಘಿಸಿದೆ ಎಂದು ಆಡಳಿತರೂಢ ಪಕ್ಷ ಹೇಳಿತ್ತು. ನ್ಯಾಯಮೂರ್ತಿಗಳ ನಿರ್ಧಾರ ರಾಜಕೀಯ ಪಕ್ಷಗಳಿಂದ ನಿರ್ಧಾರಿತವಾಗಿದೆ ಮತ್ತು ಅದು ಸಂವಿಧಾನ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಹಿ ಹಾಕಿದ ಸಂಸದರ ನಿಯೋಗವು ಅಭಿಪ್ರಾಯಪಟ್ಟಿತ್ತು. ಸಹಿಹಾಕಿದವರಲ್ಲಿ ಡಿಎಂಕೆ ನಾಯಕರಾದ ಟಿ ಆರ್ ಬಾಲು, ಎ ರಾಜಾ, ಕನಿಮೋಳಿ, ದಯಾನಿಧಿ ಮಾರನ್, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ಗೌರವ್ ಗೊಗೊಯ್, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಹಾಗೂ ಎಐಎಂಐಎಂನ ಅಸಾದುದ್ದೀನ್ ಓವೈಸಿ ಇದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು ಓಟ್ ಬ್ಯಾಂಕ್ ರಾಜಕಾರಣ ಅಂತ ಟೀಕಿಸಿದ್ದಾರೆ. ನ್ಯಾಯಾಂಗದ ನಿರ್ಧಾರಕ್ಕೆ ಅಸಮತಿಯನ್ನು ವ್ಯಕ್ತಪಡಿಸಿ, ವಾಗ್ದಂಡನೆ ಪ್ರಸ್ತಾಪ ತರುವುದು ನ್ಯಾಯಾಂಗದ ಸ್ವಾತಂತ್ರದ ಮೇಲೆ ರಾಜಕೀಯ ಒತ್ತಡವನ್ನು ಹೇರಿದ ಹಾಗೆ ಆಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ನ್ಯಾಯಾಲಯದ ಆದೇಶದಂತೆ ಡಿಸೆಂಬರ್ 4 ರ ವೇಳೆಗೆ ‘ದೀಪತ್ತೋನ್’ ಸ್ತಂಭದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಸ್ಥಾನದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಸಮಿತಿ ಎತ್ತಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ಇದರಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಪೊಲೀಸರ ಬೆಂಗಾವಲಿನೊಂದಿಗೆ ದೀಪ ಹಚ್ಚುವ ವಿಧಿಯನ್ನು ನಡೆಸಲು ಭಕ್ತರ ಸಣ್ಣ ಗುಂಪೊಂದಕ್ಕೆ ಅವಕಾಶ ಒದಗಿಸುವಂತೆಯೂ ನ್ಯಾಯಯಾಲಯವು ನಿರ್ದೇಶನ ನೀಡಿತ್ತು.
ಆದರೆ ರಾಜ್ಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ ಕಳವಳಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿತ್ತು. ಇದು ಹಿಂದುತ್ವ ಪರ ಗುಂಪುಗಳಿಂದ ಪ್ರತಿಭಟನೆಗಳು, ಪೊಲೀಸರೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದು, ಈಗ ಈ ತೀರ್ಪು ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ಸಂಘರ್ಷವಾಗಿ ಮಾರ್ಪಟ್ಟಿದೆ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು “ನಿರ್ದಿಷ್ಟ ರಾಜಕೀಯ ಸಿದ್ಧಾಂತ”ದ ಆಧಾರದ ಮೇಲೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಪ್ರಕರಣಗಳನ್ನು ನಿರ್ಧರಿಸುತ್ತಿದ್ದಾರೆ ಎಂದು ಡಿಎಂಕೆ ಹಾಗೂ ಉಳಿದ ವಿರೋಧ ಪಕ್ಷಗಳ 107 ಸಂಸದರು ಸಂಸತ್ತಿನಲ್ಲಿ ಗೊತ್ತುವಳಿ ಮಂಡಿಸಿದ್ದಾರೆ.
56 ಮಾಜಿ ನ್ಯಾಯಾಧೀಶರ ಪತ್ರದಲ್ಲೇನಿದೆ ?
ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ವಿರುದ್ಧ ವಾಗ್ದಂಡನೆಯ ವಿರುದ್ಧ 56 ಮಾಜಿ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ನ್ಯಾಯಾಂಗದ ಮೇಲೆ ಮಾಡುತ್ತಿರುವ ದಾಳಿ ಎಂದು ಟೀಕಿಸಿದ್ದಾರೆ. ಇದರಲ್ಲಿ ನಿವೃತ್ತ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಮತ್ತು ಹಲವಾರು ಹೈಕೋರ್ಟ್ಗಳ ಮಾಜಿ ಮುಖ್ಯ ನಾಯಮೂರ್ತಿಗಳು ಸೇರಿದ್ದಾರೆ. ಅವರು ಇದನ್ನು ‘ನ್ಯಾಯಾಧೀಶರನ್ನು ದೂಷಿಸುವ ಒಂದು ನಿರ್ಲಜ್ಜ ಪ್ರಯತ್ನ‘ ಎಂದು ಕರೆದರು.
ಪತ್ರದಲ್ಲಿ ಕರ್ನಾಟಕ ಮೂಲದವರಾದ ಪಟನಾ ಹೈಕೋರ್ಟ್ ನಿವೃತ್ತ ಸಿಜೆ ಪಿ.ಬಿ. ಭಜಂತ್ರಿ, ಕರ್ನಾಟಕ ಹೈಕೋರ್ಟ್ ನಿವೃತ್ತ ಜಡ್ಜ್ಗಳಾದ ರಾಜೇಂದ್ರ ಬಾದಾಮಿಕರ್, ಶ್ರೀನಿವಾಸ ಹರೀಶ್ ಕುಮಾರ್, ಎ.ವಿ. ಚಂದ್ರಶೇಖರ್ ಹಾಗೂ ಪಿ. ಕೃಷ್ಣ ಭಟ್ ಕೂಡ ಇದ್ದಾರೆ.
ಸಂಸದರು ಮಾಡುತ್ತಿರುವ ಆರೋಪವರು “ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾಶಪಡಿಸುತ್ತದೆ” ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ. ನ್ಯಾಯಾಧೀಶರು ತಮ್ಮ ಪತ್ರದಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಸಹ ಉಲ್ಲೇಖಿಸಿದ್ದಾರೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿಯೂ ಸಹ ಆಗಿನ ಸರ್ಕಾರವು ‘ಅಧಿಕಾರವನ್ನು ಪಾಲಿಸಲು’ ನಿರಾಕರಿಸಿದ ನ್ಯಾಯಾಧೀಶರನ್ನು ಶಿಕ್ಷಿಸಲು ವಿವಿಧ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿತು. ಅವರ ಬಡ್ತಿಗಳನ್ನು ರದ್ದುಗೊಳಿಸುವುದು ಸೇರಿದಂತೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಈ ನ್ಯಾಯಾಧೀಶರು ಹೇಳುತ್ತಾರೆ. ಪತ್ರದಲ್ಲಿ 1973ರ ಕೇಶವಾನಂದ ಭಾರತಿ ಪ್ರಕರಣ ಸೇರಿದಂತೆ ಮೂರು ಗಮನಾರ್ಹ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.





