ಮತಗಳ್ಳತನ ವಿರುದ್ಧ ಎಐಸಿಸಿ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಿದ್ದು, ಕರ್ನಾಟಕ ಕಾಂಗ್ರೆಸ್ ಸಹ ಈ ಅಭಿಯಾನದಲ್ಲಿ ಕೈ ಜೋಡಿಸಿದೆ. ನಮ್ಮ ರಾಜ್ಯದಿಂದ 1,12,41000 ಜನರ ಸಹಿ ಸಂಗ್ರವಾಗಿದೆ. ಇದನ್ನು ನ.10ರಂದು ಎಐಸಿಸಿಗೆ ತಲುಪಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ವೋಟ್ ಚೋರಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಆಂದೋಲನದ ರೀತಿ ಪ್ರತಿಭಟನೆ ನಡೆಸಿದ ಕಾರಣ ಬೇರೆ ದಾರಿ ಇಲ್ಲದೇ ಚುನಾವಣಾ ಆಯೋಗ ಈಗ SIRಗೆ ಮುಂದಾಗಿದೆ. ಮುಂದಿನ ಚುನಾವಣೆಗೆ ಮುನ್ನ ಈ ಗೊಂದಲವೆಲ್ಲ ನಿವಾರಣೆ ಆಗಲೇಬೇಕು” ಎಂದು ಡಿ ಕೆ ಶಿವಕುಮಾರ್ ಒತ್ತಾಯಿಸಿದರು.
“ಮತದಾರರ ಹಕ್ಕು ಕಾಪಾಡಲು ಎಐಸಿಸಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಎಲ್ಲ ರಾಜ್ಯಗಳಲ್ಲೂ ಮತಗಳ್ಳತನ ಬಗ್ಗೆ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ನ.10ಕ್ಕೆ ಇದನ್ನು ಎಐಸಿಸಿಗೆ ಸಲ್ಲಿಸಬೇಕಿದ್ದು, ಸಮಯವಿಲ್ಲದ ಕಾರಣ ನಾನೇ 10 ನಾಯಕರೊಂದಿಗೆ ವಿಮಾನದಲ್ಲಿ ಹೋಗಿ ಸಹಿ ಸಂಗ್ರಹದ ಮೂಟೆಯನ್ನು ತಲುಪಿಸಿ ಬರುವೆ” ಎಂದು ತಿಳಿಸಿದರು.
“ಡಿಸೆಂಬರ್ನಲ್ಲಿ ರಾಹುಲ್ ಗಾಂಧಿ ಅವರು ರಾಮಲೀಲಾ ಮೈದಾನದಲ್ಲಿ ದೇಶದ ಸಹಿ ಸಂಗ್ರಹ ಬಗ್ಗೆ ದೊಡ್ಡ ಸಮಾವೇಶ ಮಾಡಿ, ರಾಷ್ಟ್ರದ ಜನರ ಅಭಿಪ್ರಾಯವನ್ನು ರಾಷ್ಟ್ರಪತಿ ಮತ್ತು ಕೇಂದ್ರ ಚುನಾವಣೆ ಆಯೋಗಕ್ಕೆ ತಲುಪಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಜನ ಗಣ ಮನ’ಕ್ಕೆ ಬಿಜೆಪಿ ತಿರಸ್ಕಾರ; ರವೀಂದ್ರನಾಥ ಟ್ಯಾಗೋರ್ಗೆ ಅಪಚಾರ!
“ಮತಗಳ್ಳತನ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ದೇಶಾದ್ಯಂತ ಜನ ಜಾಗೃತಿಗೆ ಮುಂದಾಗಿದ್ದಾರೆ. ರಾಜ್ಯದ ಮಹದೇವಪುರ ಮತ್ತು ಆಳಂದದಲ್ಲಿ ನಡೆದಿರುವ ನಕಲಿ ಮತದಾನ ಬಗ್ಗೆ ದಾಖಲೆ ಸಮೇತವಾಗಿ ದೇಶದ ಮುಂದೆ ತೆರೆದಿಟ್ಟಿದ್ದಾರೆ. ಹರಿಯಾಣದಲ್ಲೂ ನಡೆದಿರುವ ನಕಲಿ ಮತದಾನಕ್ಕೆ ದಾಖಲೆಗಳನ್ನು ದೇಶದ ಮುಂದೆ ತೆರೆದಿಟ್ಟಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಲ್ಲ” ಎಂದು ಹೇಳಿದರು.
“ಕೆಪಿಸಿಸಿ ಎಲ್ಲ ಘಟಕಗಳು ಈ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಜಿಲ್ಲೆಯಿಂದಲೂ ಜನರ ಸಹಿ ಸಂಗ್ರಮ ಮಾಡಲಾಗಿದೆ. ಈ ಬಗ್ಗೆ ಶ್ರಮಿಸಿದ ಎಲ್ಲರಿಗೂ ವಿಶೇಷ ಧನ್ಯವಾದ ತಿಳಿಸುವೆ. ಈ ಸಹಿ ಸಂಗ್ರಹ ಅಭಿಯಾನ ಇನ್ಮುಂದೆಯೂ ನಡೆಯಲಿದೆ” ಎಂದು ತಿಳಿಸಿದರು.





