ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಶುಕ್ರವಾರದ ವಿಧಾನ ಪರಿಷತ್ ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ಕಲಬುರಗಿ ಭಾಗದ ಸದಸ್ಯ ತಿಮ್ಮಪ್ಪಣ್ಣ ಕಮಕನೂರ ಅವರ ಪ್ರಶ್ನೆಗೆ ಉತ್ತರಿಸಿ ಸಚಿವರು, “ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾರು ಹಂಗಾಮಿನಲ್ಲಿ 3,23,219 ಎಕರೆ ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿದೆ. ಎಸ್ಡಿಆರ್ಎಫ್ ನಿಯಮದ ಪ್ರಕಾರ ಬೆಳೆಹಾನಿಗೆ 257.90 ಕೋಟಿ ರೂ. ಪರಿಹಾರ ನೀಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 245.75 ಕೋಟಿ ರೂ. ಪರಿಹಾರ ಹಣ ಸೇರಿ ಒಟ್ಟಾರೆ 498.73 ಕೋಟಿ ರೂ. ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
“ರಾಜ್ಯ ಅಂಕಿಅಂಶವನ್ನೂ ನೀಡಿದ ಅವರು, “ರಾಜ್ಯಾದ್ಯಂತ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 14.21 ಲಕ್ಷ ರೈತರಿಗೆ ಎಸ್ಡಿಆರ್ಎಫ್ ನಿಯಮದ ಪ್ರಕಾರ 1,218 ಕೋಟಿ ರೂ. ಹಣ ಪರಿಹಾರ ರೂಪದಲ್ಲಿ ನೀಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 1,033 ಕೋಟಿ ರೂ. ಸೇರಿ ಒಟ್ಟಾರೆಯಾಗಿ 2249 ಕೋಟಿ ರೂ. ಹಣವನ್ನು ಪರಿಹಾರದ ರೂಪದಲ್ಲಿ 14.21 ಲಕ್ಷ ರೈತರಿಗೆ ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ” ಎಂದರು.
“ಜಾನುವಾರಗಳ ಹಾನಿಗೆ 1.89 ಕೋಟಿ ರೂ., ಮನೆಹಾನಿಗೆ 40.86 ಕೋಟಿ ರೂ., ಅಲ್ಪ ಪ್ರಮಾಣದ ಮನೆಹಾನಿಗಳಿಗೆ 5.79 ಕೋಟಿ ರೂ., ಕಾಳಜಿ ಕೇಂದ್ರಗಳಿಗೆ 1.20 ಕೋಟಿ ರೂ. ಹಾಗೂ ಮಳೆಯಿಂದ ಉಂಟಾದ ಎಲ್ಲ ಪ್ರಾಣಹಾನಿಗಳನ್ನೂ ಸೇರಿಸಿದರೆ ಒಟ್ಟಾರೆಯಾಗಿ 2,300 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ” ಎಂದು ಹೇಳಿದರು.
“ರಾಜ್ಯಾದ್ಯಂತ ಕೇವಲ ಶೇ.03 ರಷ್ಟು ರೈತರಿಗೆ ಪರಿಹಾರ ಹಣ ಪಾವತಿಯಾಗಿಲ್ಲ ಎಂಬುದು ನಿಜ. ಕೆಲವು ರೈತರ ಆಧಾರ್ ಹೆಸರು ಮತ್ತು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿನ ಹೆಸರು ತಾಳೆಯಾಗುತ್ತಿಲ್ಲ. ಮತ್ತೂ ಕೆಲವರದ್ದು ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಲ್ಲ. ಹೀಗಾಗಿ 26,394 ರೈತರಿಗೆ ಪರಿಹಾರದ ಹಣ ಪಾವತಿ ಆಗಿಲ್ಲ. ಇದಲ್ಲದೆ, ಸರ್ಕಾರದವರು ಎನ್ಪಿಸಿಐ ಸೀಡಿಂಗ್ ಮಾಡಿದ್ದಾರೆ. ಹೀಗಾಗಿ 8,000 ರೈತರಿಗೆ ಹಣ ಪಾವತಿಯಾಗಿಲ್ಲ. ಈ ಎಲ್ಲಾ ಕಾರಣದಿಂದ ಒಟ್ಟಾರೆ 14,21,000 ರೈತರ ಪೈಕಿ 44,208 ರೈತರದ್ದು ಬಾಕಿ ಇದೆ. ಸರ್ಕಾರ ಈಗಾಗಲೇ ಹಣ ಪಾವತಿ ಮಾಡಿಯಾಗಿದ್ದು, ರೈತರ ಈ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದ ಕೂಡಲೇ ರೈತರ ಖಾತೆಗೆ ಹಣ ಜಮೆ ಆಗಲಿದೆ” ಎಂದು ವಿವರಿಸಿದರು.
ಕೃಷಿ ವಿಮೆ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವರು, “ವಿಮೆ ಕೂಡ ಈ ವರ್ಷ ನಾವು ತ್ವರಿತ ಪಾವತಿ ಮಾಡುವ ಕೆಲಸ ಮಾಡಿದ್ದೇವೆ. ಕೃಷಿ ಇಲಾಖೆ ಜೊತೆ ಮಾತನಾಡಿ ಎಷ್ಟು ಶೀಘ್ರ ಸಾಧ್ಯವೋ ಅಷ್ಟು ಶೀಘ್ರ ರೈತರ ಖಾತೆಗೆ ಬೆಳೆ ವಿಮೆ ಪಾವತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.





