ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದ ಬಳಿ ರಾಜ್ಯ ಸರ್ಕಾರವು ಗಂಗಾ ಆರತಿ ಮಾದರಿಯಲ್ಲಿ ಆಯೋಜಿಸಲು ಮುಂದಾಗಿರುವ ‘ಕಾವೇರಿ ಆರತಿ’ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ 14 ದಿನಗಳ ತಡೆಯಾಜ್ಞೆ ನೀಡಿದೆ.
ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮತ್ತು ಕಾವೇರಿ ಆರತಿ ಆಯೋಜಿಸುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪೂರಕವಾಗಿ ಕೆಲವು ದಾಖಲೆಗಳನ್ನು ಸಲ್ಲಿಸಲು ಹೈಕೋರ್ಟ್ ಬುಧವಾರ ಸೂಚಿಸಿ, ಗುರುವಾರಕ್ಕೆ ವಿಚಾರಣೆ ಮುಂದೂಡಿತ್ತು.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್ಗೆ ಅಣೆಕಟ್ಟು, ಪರಿಸರ, ನದಿಗೆ ಆಗುತ್ತಿರುವ ಅಪಾಯದ ಬಗ್ಗೆ ರೈತ ಸಂಘ ಮನವರಿಕೆ ಮಾಡಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿರುವ ರೈತ ನಾಯಕಿ ಸುನಂದ ಜಯರಾಮ್ ಅವರು ಹೈಕೋರ್ಟ್ ಆವರಣದಲ್ಲಿ ಈ ಕುರಿತು ಈ ದಿನ.ಕಾಂ ಜೊತೆ ಮಾತನಾಡಿ, “ರೈತ, ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳ ಹಾಗೂ ಗ್ರಾಮ ಪಂಚಾಯಿತಿಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೆಆರ್ಎಸ್ ಅಣೆಕಟ್ಟೆ ಬಳಿ ‘ಕಾವೇರಿ ಆರತಿ’ ನಡೆಸುವ ಪೂರ್ವಭಾವಿ ಸಭೆ ನಡೆಸಿ, ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಈಗ ಹೈಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿ ತಾತ್ಕಾಲಿಕ ತಡೆ ನೀಡಿದೆ. ಮುಂದೆ ವಕೀಲರ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನಾವು ಬಿಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.
ಅಮ್ಯೂಸ್ಮೆಂಟ್ ಪಾರ್ಕ್ ಕುರಿತು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿರುವ ರೈತ ನಾಯಕ ಬೋರಯ್ಯ, “ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆಯನ್ನು ಮಾಡುತ್ತೇವೆ ಎನ್ನುವ ಸರ್ಕಾರ ತನ್ನ ಹಠಮಾರಿತನ ಬಿಡಬೇಕು. ಇದು ಯಾವ ರೈತರಿಗೂ ಅನುಕೂಲವಿಲ್ಲ. ಕೋಟಿ ಕೋಟಿ ದುಡ್ಡು ಹೊಡೆಯಲು ರೂಪಿಸಿರುವ ಯೋಜನೆ ಇದು. ಹೈಕೋರ್ಟ್ ತಡೆಯಾಜ್ಞೆ ನಮಗೆ ಸಮಾಧಾನ ತಂದಿದೆ. ಮುಂದಿನ ಹೆಜ್ಜೆಗಳ ಬಗ್ಗೆ ನಾವು ಯೋಚಿಸಿ ದೊಡ್ಡ ಹೋರಾಟ ರೂಪಿಸುತ್ತೇವೆ” ಎಂದರು.
ರೈತ ಸಂಘದ ಪರವಾಗಿ ವಕಾಲತ್ತು ವಹಿಸಿರುವ ವಕೀಲ ಎಂ ಶಿವಪ್ರಕಾಶ್ ಈ ದಿನ.ಕಾಂ ಜೊತೆ ಮಾತನಾಡಿ, “ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆ ಯಾವ ರೈತರಿಗೂ ಬೇಕಾಗಿಲ್ಲ. ಅಣೆಕಟ್ಟೆ ಕಾಯ್ದೆಯನ್ನೇ ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೋರ್ಟ್ಗೆ ಸರ್ಕಾರದ ವಕೀಲರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೆಆರ್ಎಸ್ ಜಲಾಶಯವನ್ನು ರಕ್ಷಿಸಬೇಕಾಗಿದ್ದು ಸರ್ಕಾರದ ಜವಾಬ್ದಾರಿ. ಆದರೆ ಅದನ್ನೇ ಮರೆತು ಸರ್ಕಾರ ಜನರ ತೆರಿಗೆ ಹಣವನ್ನು ಹಾಳು ಮಾಡಲು ಹೊರಟಿದೆ. ಈಗ ಹೈಕೋರ್ಟ್ ನಮ್ಮ ವಾದ ಪರಿಗಣಿಸಿ ತಡೆಯಾಜ್ಞೆ ನೀಡಿದೆ. ಅಲ್ಲಿ ಈಗಾಗಲೇ ಯಾವುದೇ ಒಪ್ಪಿಗೆ ಇಲ್ಲದೇ ಕಾಮಗಾರಿ ಆರಂಭವಾಗಿದೆ. ಇದನ್ನು ನಾವು ದಾಖಲೆ ಸಮೇತ ಮುಂದಿನ ವಿಚಾರಣೆಯಲ್ಲಿ ಕೋರ್ಟ್ಗೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.
ವಕೀಲರಾದ ಶಶಾಂಕ್ ಕೆ ಸಿ, ರಘು ಜೊತೆಗಿದ್ದರು.





