ಬಂಟ್ವಾಳ ತಾಲೂಕಿನ ಕೇಪು ಉತ್ಸವದ ಪ್ರಯುಕ್ತ ನಡೆಯುವ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ತಡೆನೀಡಿದ್ದರೂ, ಕೋಳಿ ಅಂಕ ನಡೆಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಖುದ್ದು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಕೋಳಿ ಅಂಕ ನಡೆಸಲಾಗಿದ್ದು, ಪೊಲೀಸ್ ಇದನ್ನು ಅಕ್ರಮ ಎಂಬ ಸೂಚನೆ ನೀಡಿದರೂ ಶಾಸಕ ರೈ ಪ್ರೇರಣೆ ನೀಡಿ ಕೋಳಿ ಅಂಕ ಮುಂದುವರೆಸಿದ್ದಾರೆ. ಅಂಕಕ್ಕೆ ಬಳಸಲಾಗಿರುವ 22 ಹುಂಜಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, 16 ಜನರನ್ನು ವಶಕ್ಕೆ ಪಡೆದಿದ್ದಾರೆ.
ಕೇಪು ಉಳ್ಳಾಲ್ತಿ ದೈವಸ್ಥಾನದ ಉತ್ಸವದ ಪ್ರಯುಕ್ತ ನಡೆಯುತ್ತಿದ್ದ ಈ ಜೂಜು ರಹಿತವಾದ ಕೋಳಿ ಅಂಕವನ್ನು ಮಾದರಿ ಕೋಳಿ ಅಂಕವೆಂದು ಬಿಂಬಿಸಲಾಗಿದೆ. ಧಾರ್ಮಿಕ ಹಿನ್ನೆಲೆಯ ಈ ಅಂಕಕ್ಕೆ ಪೊಲೀಸ್ ಸಮ್ಮತಿ ಇರಬಹುದೆಂದು ಸಾವಿರಾರು ಮಂದಿ ನೆರೆದಿದ್ದರು. ಆದರೆ, ಪೊಲೀಸ್ ಸೂಚನೆ ಹೊರಬೀಳುತ್ತಿದ್ದಂತೆ ಎಲ್ಲರೂ ದಿಕ್ಕಾಪಾಲು ಓಡಲು ಆರಂಭಿಸಿದ್ದರು. ಆದಾಗ್ಯೂ, ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ರೈ, ಎಲ್ಲರನ್ನೂ ಹುರಿದುಂಬಿಸಿ ಮತ್ತೆ ಸಂಜೆ ಆರುಗಂಟೆಯವರೆಗೆ ಕೋಳಿ ಅಂಕ ನಡೆಸಲು ಮುಂದಾಳುತ್ವ ವಹಿಸಿದ್ದರು ಎಂದು ವರದಿಯಾಗಿದೆ.




