ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬಾಬಾ ಬುಡನ್ಗಿರಿ. 16ನೇ ಶತಮಾನದ ಸೂಫಿ ಸಂತ ಹಜರತ್ ದಾದಾ ಹಯಾತ್ ಖಲಂದರ್ ಅವರ ದತ್ತಪೀಠ ಎಂದೇ ಹೆಸರುವಾಸಿಯಾಗಿದೆ. ಹಾಗೆಯೇ, ಭಾರತದಲ್ಲಿ ಕಾಫಿ ಬೆಳೆಯನ್ನು ಪರಿಚಯಿಸಿದ ಹೆಮ್ಮೆ ಈ ಪ್ರಸಿದ್ಧ ತಾಣಕ್ಕಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಗೆ ಪವಿತ್ರವಾದ ದತ್ತಪೀಠ ಮತ್ತು ಸೂಫಿ ಗುಹೆಯನ್ನು ಹೊಂದಿರುವುದು ಈ ಸ್ಥಳದ ಮತ್ತೊಂದು ವಿಶೇಷ. ಸೌಹಾರ್ದ ಪರಂಪರೆಯ ಅತ್ಯುತ್ತಮ ಉದಾಹರಣೆಯಾಗಿರುವ ಇಂಥದ್ದೊಂದು ತಾಣದಲ್ಲಿ ಸದ್ಯ ಕೋಮು ಸಂಘರ್ಷ ಭುಗಿಲೆದ್ದಿದೆ.
ಆದರೆ, ಈ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದಲೂ ಕೋಮು ಘರ್ಷಣೆಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸೌಹಾರ್ದತೆಯನ್ನು ಉಳಿಸುವ ಉದ್ದೇಶದಿಂದ ʼಕೋಮು ಸೌಹಾರ್ದ ವೇದಿಕೆʼ ಹೆಸರಿನಲ್ಲಿ ಹಲವು ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸಿ ಸೌಹಾರ್ದ ಪರಂಪರೆಯನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮುದಾಯದ ಆಚರಣೆಗಳ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
ಬಾಬಾ ಬುಡನ್ ಗಿರಿಯ ಹೃದಯಭಾಗವೆಂದು ಕರೆಯಲ್ಪಡುವ ಅತ್ತಿಗುಂಡಿ ಪ್ರದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸಮಾನವಾಗಿ ಪೂಜಿಸುವ ವಿಶಿಷ್ಟ ಧಾರ್ಮಿಕ ತಾಣವಿದೆ. ಇಲ್ಲಿ ಇರುವ ಗುಹಾ ಸಂಕೀರ್ಣದಲ್ಲಿ ಸೂಫಿ ಸಂತ ಬಾಬಾ ಬುಡನ್ರ ದರ್ಗಾ ಹಾಗೂ ಹಿಂದೂ ದೇವತೆ ದತ್ತಾತ್ರೇಯನಿಗೆ ಸಮರ್ಪಿತವಾದ ದತ್ತಾತ್ರೇಯ ಪೀಠವೂ ಸೇರಿದೆ. ಈ ಅಪರೂಪದ ಸಹಬಾಳ್ವೆ ಶತಮಾನಗಳಿಂದಲೂ ಧಾರ್ಮಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಮಿಶ್ರಣದ ಸಂಕೇತವಾಗಿ ಉಳಿದಿದ್ದು, ವಿಭಿನ್ನ ನಂಬಿಕೆಗಳ ಜನರಿಗೆ ಈ ಸ್ಥಳ ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ.


2025ರಲ್ಲಿಯೂ ಉರುಸ್ ಅನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿರುವ ಮುಸ್ಲಿಂ ಭಾಂದವರು, ಅತ್ತಿಗುಂಡಿ ಸ್ಥಳೀಯ ನಿವಾಸಿಗಳು ಹಾಗೂ ಅಲ್ಲಿಗೆ ಆಗಮಿಸಿದ್ದ ಹಿಂದೂ-ಮುಸ್ಲಿಂ ಎರಡು ಸಮುದಾಯಗಳ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಾ.4ರಿಂದ ಮೂರು ದಿನಗಳ ಕಾಲ ಉರುಸ್ ಆಚರಣೆ ನಡೆಯಬೇಕಿದ್ದರೂ, ನಮಗೆ ಆಚರಿಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಕ್ತರು ಮತ್ತು ಪ್ರವಾಸಿಗರಿಗೆ ಪ್ರವೇಶಕ್ಕೂ ಅವಕಾಶ ನೀಡಲಾಗುತ್ತಿಲ್ಲ. ಎಲ್ಲಿ ನೋಡಿದರೂ ಪೊಲೀಸ್ ವಾಹನಗಳು ಹಾಗೂ ಅಧಿಕಾರಿಗಳ ಬಿಗಿ ಬಂದೋಬಸ್ತ್ ಮಾತ್ರ ಕಾಣಿಸುತ್ತಿದ್ದು, ಈ ಸಂದರ್ಭದಲ್ಲಿ ಆಗಮಿಸುವ ಭಕ್ತರಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕೂಡ ಮಾಡಿಲ್ಲ ಎಂದು ಅವರು ಈ ದಿನಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್ 4ರಂದು ನಡೆಯುವ ʼಸಂದಲ್ʼ ಸಮಾರಂಭಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ. ದಾದಾ ಹಯಾತ್, ಗುಹೆಯೊಳಗಿನ ದಾದಾ ಹಯಾತ್ ಅವರ ಚಿಲ್ಲಾ, ಮಮಾ ಜಿಗ್ನಿ ಚಿಲ್ಲಾ, ನಾಲ್ಕು ಗೋರಿಗಳು ಹಾಗೂ ಹೊರಗಿನ ಪೂರ್ವಜರು ಮತ್ತು ಸೂಫಿ ಸಂತರ ಗೋರಿಗಳಿಗೆ ಗೌರವ ಸೂಚಕವಾಗಿ ಹಸಿರು ಬಟ್ಟೆ, ಹೂವು, ಸುಗಂಧ ದ್ರವ್ಯ, ಫಲೇಕೆ ಮತ್ತು ಅಗರ್ಬತ್ತಿಗಳನ್ನು ಅರ್ಪಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕ್ರಮವನ್ನು ಖಂಡಿಸಿ ಮಾರ್ಚ್ 5ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ʼಎದ್ದೇಳು ಕರ್ನಾಟಕʼ ಸಂಘಟನೆ ಕರೆ ನೀಡಿತ್ತು. ಪ್ರತಿಭಟನೆಗೆ ವಿವಿಧ ಕಡೆಗಳಿಂದ ಕಾರ್ಯಕರ್ತರು ಸೇರಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದ ಸಂಘಟನೆಯ ಮುಖಂಡ ಕೆ.ಎಲ್. ಅಶೋಕ್ ಅವರನ್ನು ಬಾಬಾ ಬುಡನ್ ಗಿರಿ ಸಮೀಪದ ಅತ್ತಿಗುಂಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮುಸ್ಲಿಂ ಸಂಘಟನೆಗಳು, ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿನ ಆಝಾದ್ ಪಾರ್ಕ್ ಸಮೀಪ ಸೇರಿ ಪ್ರತಿಭಟನೆ ನಡೆಸಿದರು. ಜಾತ್ಯತೀತ ತತ್ವಗಳಿಗೆ ತಿಲಾಂಜಲಿ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಖಂಡಿಸಿ, ರಾಜ್ಯ ನಾಯಕ ಕೆ.ಎಲ್. ಅಶೋಕ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ವಿರೋಧಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದರು. ನಂತರ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದರು.

ಉರುಸ್ ಹಬ್ಬವು ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಆಚರಿಸುವ ಪರಂಪರೆಯ ಆಚರಣೆ ಆಗಿದೆ. ಈ ಉರುಸ್ ಆಚರಣೆ ಕುರಿತು 1989ರ ಆದೇಶ, 2002ರ ಆದೇಶ, 1947ರ ಪೂರ್ವದ ದಾಖಲೆಗಳು ಹಾಗೂ 1991ರ ಮುಂಚಿನ ನಿಯಮಾವಳಿಗಳ ಜೊತೆಗೆ ನಾಗಮೋಹನ್ ದಾಸ್ ಸಮಿತಿ ವರದಿ ಪ್ರಕಾರವೇ ಉರುಸ್ ಆಚರಣೆಗೆ ಅವಕಾಶ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ರಾಜಿ ಸೂತ್ರವನ್ನು ಮುಂದಿಟ್ಟಿದ್ದು, ಅದರ ಪ್ರಕಾರ ಉರುಸ್ ಹಾಗೂ ದತ್ತಪೂಜೆ ಎರಡನ್ನೂ ಸಮಾನವಾಗಿ ನಡೆಸಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು.

ದತ್ತ ಜಯಂತಿ ಸಂದರ್ಭದಲ್ಲಿ ಪೂಜೆಯ ಹೆಸರಿನಲ್ಲಿ ಬ್ರಾಹ್ಮಣೀಯ ಆಚರಣೆಗಳಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಪರಂಪರೆಯ ಸೂಫಿ ಆಚರಣೆಗಳಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡ ಕೆ.ಎಲ್. ಅಶೋಕ್ ಹಾಗೂ ಗೌಸ್ ಮೊಹದೀನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. “ನಮಗೆ ನ್ಯಾಯ ಸಿಗದಿದ್ದರೆ ಹಾಗೂ ಈ ಗೊಂದಲಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗಣೇಶ್, ಸುರೇಶ್, ಮುನ್ನಾ, ಗೌಸ್ ಮುನೀರ್, ಶಾಖಾದ್ರಿ ವಂಶಸ್ಥರು ಹಾಗೂ ಮುಸ್ಲಿಂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಬಾಬಾ ಬುಡನ್ ಗಿರಿ: ಜಾತ್ಯತೀತ ಉರುಸ್ ಆಚರಣೆ ಅವಕಾಶ ನೀಡದ ಸರ್ಕಾರ ವಿರುದ್ಧ ಮಾ.5ಕ್ಕೆ ಪ್ರತಿಭಟನೆ
ನ್ಯಾಯತವಾಗಿ ಹೋರಾಟ ಮಾಡುತ್ತಿದ್ದ ಹೋರಾಟಗಾರರನ್ನು ಪೊಲೀಸ್ ಇಲಾಖೆ ಬಂಧಿಸಿದ್ದು ಸರಿಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಸುಮಾರು ವರ್ಷಗಳಿಂದಿರುವ ಈ ಸಮಸ್ಯೆಯನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗಮನವಹಿಸಿ ಬಗೆ ಹರಿಸಬೇಕಾಗಿದೆ.





