ಮದ್ಯಪಾನ ಮಾಡಿ ಕೆಲಸಕ್ಕೆ ಹಾಜರಾಗುತ್ತಿದ್ದ ಬಿಎಂಟಿಸಿ ಬಸ್ ಚಾಲಕರ ಬಳಿ ಲಂಚ ಪಡೆದು, ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದ ಆರೋಪದ ಮೇಲೆ 9 ಮಂದಿ ಬಿಎಂಪಿಸಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಾರಿಗೆ ಇಲಾಖೆ ಅಮಾನತು ಆದೇಶ ಹೊರಡಿಸಿದೆ.
ಬಿಎಂಟಿಸಿ ಡಿಪೋ- 35ರ ವಿದ್ಯುತ್ಚಾಲಿತ ಬಸ್ಗಳ ಕೆಲ ಚಾಲಕರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅಧಿಕಾರಿಗಳು ಅವರಿಂದ ಸಾವಿರಾರು ರೂಪಾಯಿ ಲಂಚ ಪಡೆದು ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ಅ.31ರಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಪ್ರಕಟಿಸಿತ್ತು. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಗಳಿಂದ ಹಲವು ಅಪಘಾತಗಳು ವರಿಯಾಗುತ್ತಿರುವ ಸಮಯದಲ್ಲಿಯೇ ಚಾಲಕರು ಮತ್ತು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು.
ಇದೀಗ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಿಎಂಟಿಸಿ ಸಂಚಾರ ನಿರೀಕ್ಷಕ ಶ್ರೀನಿವಾಸ, ಘಟಕ ವ್ಯವಸ್ಥಾಪಕ ಎಂ.ಜಿ ಕೃಷ್ಣ, ಡಿಇಎಸ್ ಅರುಣ್ ಕುಮಾರ್, ಕಿರಿಯ ಸಹಾಯಕಿ ಪ್ರತಿಭಾ ಕೆ.ಎಸ್, ಹವಲ್ದಾರ್ ಮಂಜುನಾಥ ಎಂ., ಸಾರಿಗೆ ಇಲಾಖೆಯ ಪೇದೆಗಳಾದ ಮಂಜುನಾಥ ಎಸ್.ಜಿ., ಚೇತನಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ ಕೆ ಅಮಾನತುಗೊಂಡ ಅಧಿಕಾರಿಗಳು.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ಸಮೀಕರಣ, ಮತ ವಿಭಜನೆ ಸವಾಲು; ಹ್ಯಾಟ್ರಿಕ್ ಗೆಲುವಿನತ್ತ ತೇಜಸ್ವಿ ಚಿತ್ತ
ನಿಯಮಗಳ ಪ್ರಕಾರ ಬಸ್ ಚಾಲನೆಗೆ ಚಾಲಕರನ್ನು ನಿಯೋಜಿಸುವುದಕ್ಕೂ ಮುನ್ನ ಕಡ್ಡಾಯವಾಗಿ ಡಿಪೋದಲ್ಲಿ ಚಾಲಕರು ಮದ್ಯ ಸೇವನೆ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಮದ್ಯ ಸೇವನೆ ಮಾಡಿರುವುದು ಕಂಡುಬಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ತವ್ಯಕ್ಕೆ ನಿಯೋಜನೆ ಮಾಡಬಾರದು. ಆದರೆ, ಅಧಿಕಾರಿಗಳು ಮದ್ಯ ಸೇವನೆ ಮಾಡಿ ಬರುತ್ತಿದ್ದ ಚಾಲಕರಿಂದ ಲಂಚ ಪಡೆದು, ಕರ್ತವ್ಯಕ್ಕೆ ನಿಯೋಜಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.




