ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
9 ದಿನಗಳ ಸಿಐಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಬೈರತಿ ಅವರನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೆ ಹಾಜರು ಪಡಿಸಲಾಗಿತ್ತು. ಕೋರ್ಟ್ ಅವರನ್ನು ಫೆ.26ರವರೆಗೂ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಮುಖಕ್ಕೆ ಮಾಸ್ಕ್ ಧರಿಸಿ ಜಡ್ಜ್ ಮುಂದೆ ಆರೋಪಿ ಬೈರತಿ ಬಸವರಾಜು ಹಾಜರಾದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮತ್ತೆ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಮನವಿ ಮಾಡಿದರು. ಇನ್ನೂ ತನಿಖೆಗೆ ಸಂಪೂರ್ಣ ಸಹಕಾರ ನೀಡಿಲ್ಲ. ಇನ್ನಷ್ಟು ತನಿಖೆ ಅಗತ್ಯ ಇದೆ ಎಂದು ವಕೀಲರು ವಾದ ಮಂಡಿಸಿದರು.
ಬಳಿಕ ಆರೋಪಿ ಪರ ವಕೀಲರು ಕೂಡ ಪ್ರತಿವಾದ ಮಾಡಿ, ಈಗಾಗಲೇ 9 ದಿನಗಳು ಕಸ್ಟಡಿಗೆ ನೀಡಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಕಸ್ಟಡಿಗೆ ನೀಡಬಾರದು ಎಂದು ವಾದ ಮಂಡಿಸಿದರು.
ಅಂದಹಾಗೆ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದು, ವೈದ್ಯಕೀಯ ವರದಿ ಆಧರಿಸಿ ಜೈಲಿಗೆ ಕಳುಹಿಸುವಂತೆ ಬೈರತಿ ಪರ ವಕೀಲರು ಮನವಿ ಮಾಡಿದ್ದರು. ಸದ್ಯ ಫೆ.26ರವರೆಗೆ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಯದೇವ ಆಸ್ಪತ್ರೆಯಲ್ಲಿ ನೀಡಿರುವ ಡಯೆಟ್ ಪ್ಲಾನ್ ಅನ್ನು ಜೈಲಿನಲ್ಲಿ ಮುಂದುವರೆಸಲು ಕೋರ್ಟ್ ಸೂಚನೆ ನೀಡಿದೆ. ಜೈಲಿನಲ್ಲಿ ಕೂಡ ಡಯೆಟ್ ಪ್ಲಾನ್ ಪ್ರಕಾರವೇ ಊಟ ನೀಡಲು ನ್ಯಾಯಾಲಯ ಸೂಚಿಸಿದೆ.
ಫೆ.26 ರವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕಿದೆ. ಫೆಬ್ರವರಿ 26 ರಂದು ಮತ್ತೆ ಜಡ್ಜ್ ಮುಂದೆ ಹಾಜರು ಪಡಿಸಬೇಕು.





