ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ತನಿಖೆ ಶುರು ಮಾಡಿರುವ ಎಸ್ಐಟಿ, ಎರಡು ದಿನಗಳಿಂದ ಗುರುತು ಮಾಡಿದ ಜಾಗಗಳಲ್ಲಿ ಮಣ್ಣು ಅಗೆದು ಅಸ್ತಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ. ಇಂದು ಹತ್ತು ಗಂಟೆಯ ಸುಮಾರಿಗೆ ಆರನೇ ಸ್ಥಳದಲ್ಲಿ ಅಗೆದಾಗ ಮಾನವ ದೇಹದ ಕೆಲ ಮೂಳೆಗಳು ಸಿಕ್ಕಿವೆ, ತಲೆ ಬುರುಡೆ ಸಿಕ್ಕಿಲ್ಲ ಎಂದು ಎಸ್ಐಟಿ ಮೂಲಗಳಿಂದ ಈ ದಿನ.ಕಾಮ್ಗೆ ಮಾಹಿತಿ ಸಿಕ್ಕಿದೆ.
ಈ ಮೂಳೆಗಳು ಸೊಂಟದ ಕೆಳಭಾಗದವು ಎಂದು ಖಚಿತಪಡಿಸಿದ್ದಾರೆ. ಅಗೆಯುವ ಕೆಲಸ ಮುಂದುವರಿದಿದೆ. ಅವಶೇಷ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ತಜ್ಞರು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಡಾಗ್ ಸ್ಕ್ವಾಡ್ ಕೂಡ ಬಂದಿದೆ. ನಿನ್ನೆ ಮೊನ್ನೆ ಈ ರೀತಿಯ ತೀವ್ರ ಕಾರ್ಯಾಚರಣೆ ಇರಲಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.




