ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಏಳನೇ ದಿನದ ವಿಧಾನಸಭೆ ಕಲಾಪದಲ್ಲೂ ಸಿಎಂ ಬದಲಾವಣೆ ವಿಷಯ ಚರ್ಚೆಗೆ ಬಂದಿತು.
ಕುಣಿಗಲ್ ಶಾಸಕ ರಂಗನಾಥ್ ಅವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಉತ್ತರಿಸುವಾಗ ಆರ್ ಅಶೋಕ್ ಅವರು ಮಧ್ಯೆ ಪ್ರವೇಶಿಸಿ ಕ್ಷೇತ್ರಗಳ ತಾರತಮ್ಯ ಬಗ್ಗೆ ಮಾತನಾಡಿದರು. ಕೂಡಲೇ ಸಿದ್ದರಾಮಯ್ಯ ಅವರು ‘ಉರಿಯುವ ಬೆಂಕಿಗೆ ಉಪ್ಪು ಹಾಕಬೇಡಿ’ ಎಂದು ಅಶೋಕ್ ಅವರನ್ನು ಕುಟುಕಿದರು.
ಆಶೋಕ್ ಅವರು ಅಲ್ಲಿಗೆ ಸುಮ್ಮನಾಗದೇ ‘ಹಾಗಾದ್ರೆ ನಿಮಗೆ ಉರಿತಿದೆ ಎನ್ನುವುದು ಪಕ್ಕಾ ಆಯಿತು. ನೀವೇ ಐದು ವರ್ಷ ಸಿಎಂ ಆಗಿ ಇರುತ್ತೀರಾ? ಎಂದು ಪ್ರಶ್ನಿಸಿದರು. ಮುಂದುವರಿದು, “ಚಾಣಕ್ಯನ ತಂತ್ರಗಾರಿಗೆ ಕೇಳಿದ್ದೇವೆ. ನಾನೂ ಸಹ ಸಿದ್ದರಾಮಯ್ಯ ತಂತ್ರಗಾರಿಕೆ ಕುರಿತು ಪುಸ್ತಕ ಬರೆಯಲಿದ್ದೇನೆ” ಎಂದರು
ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, “ನೀವು ಎಂದಾದರೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದೀರಾ? ಬರೀ ಆಫರೇಷನ್ ಕಮಲ ಮೂಲಕ ಹಿಂಬಾಗಿಲಿನಿಂದಲೇ ಅಧಿಕಾರ ಹಿಡಿದಿದ್ದೀರಿ. ರಾಜ್ಯದ ಜನತೆ ನಿಮಗೆ ಯಾವತ್ತೂ ಆಶೀರ್ವಾದ ಮಾಡಲ್ಲ” ಎಂದು ಕಿಡಿಕಾರಿದರು.
ಆರ್ ಅಶೋಕ್ ಮಧ್ಯ ಪ್ರವೇಶಿಸಿ, “ನೀವು ಜೆಡಿಎಸ್ನವರ ಮನೆ ಬಾಗಿಲಿಗೆ ಹೋಗಿರಲಿಲ್ವಾ?” ಎಂದು ಪ್ರಶ್ನಿಸಿದರು. ಕೋಪಗೊಂಡ ಸಿದ್ದರಾಮಯ್ಯ ಅವರು, “ಯಾರೀ ಜೆಡಿಎಸ್ ಮನೆ ಬಾಗಿಲಿಗೆ ಹೋಗಿದ್ದು, ರಾಜ್ಯದಲ್ಲಿ ಬಿಜೆಪಿಯಾವರು ಅಧಿಕಾರಕ್ಕೆ ಬರಬಾರದು ಎಂದು ಅವರೇ ನಮ್ಮ ಬಳಿ ಬಂದಿದ್ದು” ಎಂದು ತಿರಗೇಟು ನೀಡಿದರು.
ವಿ ಸುನಿಲ್ ಕುಮಾರ್ ಮಧ್ಯ ಪ್ರವೇಶಿಸಿ, “ಸರ್ ಹೋಗಲಿ ನೀವೇ ಐದು ವರ್ಷ ಸಿಎಂ ಆಗಿ ಇರುತ್ತೀರಾ? ಅಥವಾ ಜನವರಿ ನಂತರ ಕುರ್ಚಿಯಿಂದ ಕೆಳಗಿಳಿಯುತ್ತೀರಾ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ. 2028ರಲ್ಲೂ ನಾವೇ ಅಧಿಕಾರಕ್ಕೆ ಮರಳಿ ಬರುತ್ತೇವೆ” ಎಂದು ಕೌಂಟರ್ ಕೊಟ್ಟರು.
ಮಾತು ಬದಲಿಸದ ಸುನಿಲ್ ಕುಮಾರ್ ‘ನೀವೂ ಐದು ವರ್ಷ ಸಿಎಂ ಆಗಿ ಇರುತ್ತೀರಾ’ ಎಂದು ಪಟ್ಟು ಹೀಡಿದು ಕೇಳಿದಾಗ, “ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ, ಮುಂದೆಯೂ ನಾನೇ ಸಿಎಂ” ಎಂದು ಹೇಳಿದರು.
“ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ” ಎಂದು ಹೇಳಿದ್ರಲ್ಲ ಅಲ್ಲೇ ಇದೆ ಉತ್ತರ ಎಂದು ನಗುತ್ತಲೇ ಸುನಿಲ್ ಕುಮಾರ್ ಮಾತು ಮುಗಿಸಿದರು.





