- ಪತ್ರಿಕಾ ಸ್ವಾತಂತ್ರ್ಯ-ವಾಕ್ ಸ್ವಾತಂತ್ರ್ಯ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ
- ವಸ್ತುನಿಷ್ಠ ಸುದ್ದಿ-ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ: ಸಿಎಂ
ಊಹಾ-ಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
“ಸಂವಿಧಾನ ವಿರೋಧಿಗಳನ್ನು ಪ್ರಶ್ನಿಸದೇ ಹೋದರೆ, ಅವರನ್ನೂ ನೀವು ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗ್ತದಾ? ವಸ್ತುನಿಷ್ಠ ಸುದ್ದಿ-ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ” ಎಂದು ಹೇಳಿದರು.
“ಅಸಮಾನತೆ ಯಾಕಿನ್ನೂ ಸಮಾಜದಲ್ಲಿದೆ, ಸಂವಿಧಾನದ ವಿರುದ್ಧ ಮಾತಾಡುವವರೂ ಇದ್ದಾರೆ. ಇಂಥವರಿಂದ ಸಮಾಜಕ್ಕೆ ಆಗುವ ಹಾನಿಯನ್ನು ಪತ್ರಕರ್ತರು ವಿಶ್ಲೇಷಿಸಿ ಬರೆಯಬೇಕು” ಎಂದರು.
ಕಾಗೆ ಕುಳಿತರೆ ಸಮಾಜಕ್ಕೇನು ನಷ್ಟ?
“ಇವತ್ತು ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿಪರತೆ ಇಲ್ಲವಾಗಿ ವ್ಯಾಪಾರ ಹೆಚ್ಚಾಗಿರುವುದು ಅನಾರೋಗ್ಯಕಾರಿ ಬೆಳವಣಿಗೆ. ಸಣ್ಣ ಪತ್ರಿಕೆಗಳ ತವರೂರು ಮೈಸೂರು ಪತ್ರಿಕಾ ವೃತ್ತಿಪರತೆಗೆ ಹೆಸರಾಗಿತ್ತು. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ. ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
“ಗಂಡ ಹೆಂಡತಿ ಜಗಳ ಸುದ್ದಿ ಮಾಡ್ತೀರಲ್ಲಾ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಇಂಥದ್ದನ್ನೆಲ್ಲಾ ಸ್ಟೋರಿ ಮಾಡಿದರೆ ಮಾಧ್ಯಮಗಳ ಬಗ್ಗೆ ಜನ ಕುತೂಹಲ ಕಳೆದುಕೊಳ್ಳದೆ ಇನ್ನೇನಾಗುತ್ತದೆ” ಎಂದರು.
“ನಾನು ಶಂಕುಸ್ಥಾಪನೆ ಮಾಡಿದ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರವನ್ನು ನಾನೇ ಉದ್ಘಾಟಿಸುತ್ತೇನೆ, ಅಗತ್ಯ ನೆರವನ್ನೂ ನೀಡುವೆ” ಎಂದರು.
ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್, ಜಿಲ್ಲೆಯ ಶಾಸಕರಾದ ಜಿಟಿ ದೇವೇಗೌಡ, ಶ್ರೀವತ್ಸ, ತನ್ವೀರ್ ಸೇಠ್, ಹರೀಶ್ ಗೌಡ, ರವಿಶಂಕರ್, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಎ.ಹೆಚ್.ವಿಶ್ವನಾಥ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಮದನ್ ಗೌಡ, ಪತ್ರಕರ್ತರ ಸಂಘಗಳ ಒಕ್ಕೂಟದ ಮುಖಂಡರಾದ ಮಲ್ಲಿಕಾರ್ಜುನಯ್ಯ ಸೇರಿ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.





