ಉತ್ತರ ಒಳನಾಡಿನ ಹೆಚ್ಚಿನ ಭಾಗಗಳಿಗೆ ಮುಂದಿನ ಎರಡು ದಿನಗಳವರೆಗೆ ಶೀತಗಾಳಿ ಇರುವುದಾಗಿ ಭಾರತ ಹವಾಮಾನ ಇಲಾಖೆ(ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದ್ದು, ಬೀದರ್, ಕಲಬುರಗಿ, ವಿಜಯನಗರ, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳು ಸೇರಿರುವುದಾಗಿ ತಿಳಿಸಿದೆ.
ರಾಜ್ಯದ ಒಂಬತ್ತು ಜಿಲ್ಲೆಗಳು ಡಿಸೆಂಬರ್ 20 ರಂದು ಕನಿಷ್ಠ ತಾಪಮಾನವನ್ನು 10 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕಿಂತ ಕಡಿಮೆ ದಾಖಲಿಸಿವೆ. ಹಾಗಾಗಿ ಐಎಂಡಿ ಮುಂದಿನ ಎರಡು ದಿನಗಳವರೆಗೆ ದಕ್ಷಿಣ ಒಳನಾಡಿನ ಹೆಚ್ಚಿನ ಭಾಗಗಳಿಗೆ ಶೀತಗಾಳಿಯ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ವಿಜಯಪುರದಲ್ಲಿ ಕನಿಷ್ಠ 6.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಹಾಸನ(7 ಡಿಗ್ರಿ ಸೆಲ್ಸಿಯಸ್) ಎರಡನೇ ಸ್ಥಾನದಲ್ಲಿದೆ. ಬೀದರ್ನಲ್ಲಿ 7.4 ಡಿಗ್ರಿ ಸೆಲ್ಸಿಯಸ್ ಮತ್ತು ರಾಯಚೂರಿನಲ್ಲಿ 8.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಡಿಸೆಂಬರ್ 19ರಂದು ಐದು ಜಿಲ್ಲೆಗಳಲ್ಲಿ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಡಿಸೆಂಬರ್ 19ರಂದು ವಿಜಯಪುರದಲ್ಲಿ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ನಂತರ ಬೀದರ್ನಲ್ಲಿ(7.8 ಡಿಗ್ರಿ ಸೆಲ್ಸಿಯಸ್) ಎರಡನೇ ಸ್ಥಾನದಲ್ಲಿದೆ. ಡಿಸೆಂಬರ್ 18ರಂದು ರಾಯಚೂರಿನಲ್ಲಿ ಕನಿಷ್ಠ 9.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ದಿನಗಳಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕಡಿಮೆಯಾಗಲಿದ್ದು, ನಾಗರಿಕರು ಜಾಗರೂಕರಾಗಿರಬೇಕು ಎಂದು ಐಎಂಡಿ-ಬೆಂಗಳೂರು ಪ್ರಭಾರ ನಿರ್ದೇಶಕ ಡಾ. ಎನ್. ಪುವಿಯರಸನ್ ಹೇಳಿದ್ದಾರೆ.
ಕರ್ನಾಟಕದ ಒಳನಾಡಿನ ಮೇಲೆ ಈಶಾನ್ಯ ದಿಕ್ಕಿನ ಗಾಳಿ ಮತ್ತು ಕರಾವಳಿ ಕರ್ನಾಟಕದ ಮೇಲೆ ಕೆಳಗಿನ ಉಷ್ಣವಲಯದ ಮಟ್ಟದಲ್ಲಿ ಪೂರ್ವ ದಿಕ್ಕಿನ ಗಾಳಿ ಬೀಸುವುದೇ ಇದಕ್ಕೆ ಕಾರಣವೆಂದ ಅವರು, ರಾಯಚೂರು, ಬೀದರ್, ವಿಜಯಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಶೀತ ಅಲೆಯ ಪರಿಸ್ಥಿತಿ ಇತ್ತು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಯಪುರ | ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು: ಜಿಲ್ಲಾಧಿಕಾರಿ ಡಾ. ಆನಂದ್ ಕೆ ಸೂಚನೆ
“ಶೀತಗಾಳಿಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಕಾಲೋಚಿತ ಆರೋಗ್ಯದ ಏರುಪೇರು ಪ್ರಕರಣಗಳನ್ನು ನಿರ್ವಹಿಸಲು ನಾಗರಿಕರು ಮತ್ತು ಎಲ್ಲ ಆರೋಗ್ಯ ಕೇಂದ್ರಗಳು ಉತ್ತಮವಾಗಿ ಸಿದ್ಧರಾಗಿರುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಠಾರ್ ಜ್ವರ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳ ಬಗ್ಗೆ ವೈದ್ಯಕೀಯ ವೃತ್ತಿಪರರಿಗೆ ನಿರ್ದೇಶನ ನೀಡಲಾಗಿದ್ದರೂ, ನಾಗರಿಕರೂ ಕೂಡ ಸೋಂಕು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ತಿಳಿಸಲಾಗಿದೆ.





