ಕಾಮ್ರೇಡ್ ಎಚ್ ವಿ ಅನಂತಸುಬ್ಬರಾವ್ ಅವರ ನಿಧನದ ನಂತರ ಅವರ ಪುತ್ರಿ, ಖ್ಯಾತ ಹೋರಾಟಗಾರ್ತಿ ಮತ್ತು ಚಿಂತಕಿ ಕಾಮ್ರೇಡ್ ಜ್ಯೋತಿ ಅನಂತಸುಬ್ಬರಾವ್ ಸಾರಿಗೆ ಕಾರ್ಮಿಕರ ಹೋರಾಟದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷರಾಗಿ ಜ್ಯೋತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತಿರುವ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್ ವಿ ಅನಂತಸುಬ್ಬರಾವ್ ಅವರು ಜನವರಿ 28ರಂದು ಹೃದಯಾಘಾತದಿಂದ ನಿಧನರಾಗಿದರು. ಇದೀಗ ಅನಂತಸುಬ್ಬರಾವ್ ಅವರು ಶೂನ್ಯದಿಂದ ಕಟ್ಟಿ ಬೆಳೆಸಿದ ಸಂಘಟನೆಯನ್ನು ಕಾಮ್ರೇಡ್ ಜ್ಯೋತಿ ಮುಂದುವರೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ
ಜ್ಯೋತಿ ಅನಂತಸುಬ್ಬರಾವ್ ಯಾರು?
ಜ್ಯೋತಿ ಅನಂತಸುಬ್ಬರಾವ್ ಪ್ರಖ್ಯಾತ ಕಾರ್ಮಿಕ ಮುಖಂಡರಾಗಿದ್ದ ದಿವಂಗತ ಎಚ್.ವಿ. ಅನಂತ ಸುಬ್ಬರಾವ್ ಅವರ ಪುತ್ರಿ. ಪ್ರಸ್ತುತ ಸಾಮಾಜಿಕ ಕಾರ್ಯಕರ್ತೆಯಾಗಿ ಮತ್ತು ಸಾರಿಗೆ ನೌಕರರ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಮಹಿಳಾ ಆಂದೋಲನಗಳ ಒಕ್ಕೂಟದ ಪ್ರಮುಖರಾಗಿದ್ದು, ದಕ್ಷಿಣ ಕನ್ನಡ ಭಾಗದ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಹಾಗೂ ನ್ಯಾಯಕ್ಕಾಗಿ ‘ಕೊಂದವರು ಯಾರು?’ ಎಂಬ ರಾಜ್ಯಮಟ್ಟದ ಸಮಾವೇಶ ಮತ್ತು ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿರುವ ಜ್ಯೋತು ಅವರು ಓದುಗರು ಮತ್ತು ಲೇಖಕಿಯೂ ಹೌದು. ಕ್ರಾಂತಿಕಾರಿ ಭಗತ್ ಸಿಂಗ್ ಅವರ ಆಯ್ದ ಬರಹಗಳನ್ನು ‘ಇಂಕ್ವಿಲಾಬ್ ಜಿಂದಾಬಾದ್’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ತಂದೆಯ ನಿಧನದ ನಂತರ ಕೆಎಸ್ಆರ್ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ಮೂಲಕ ಸಾರಿಗೆ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುತ್ತಿದ್ದಾರೆ.





