ನಿನ್ನೆಯಷ್ಟೇ ದೆಹಲಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನದ ಬಗ್ಗೆ ಸವಿವರವಾಗಿ ದಾಖಲೆಗಳ ಸಹಿತ ದೇಶದ ಮುಂದಿಟ್ಟದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರು ಪ್ರಮಾಣ ಪತ್ರ ಸಲ್ಲಿಸಲಿ ಎಂದು ಹೇಳಿದೆ. ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲ ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ ರಾಹುಲ್ ಬಹುಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಅದಕ್ಕೆ ಆಯೋಗ ಉತ್ತರಿಸಲೇಬೇಕಿದೆ.
ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಭೆ, ʼನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟʼದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ಮತಗಳ್ಳತನದ ಬಗ್ಗೆ ದೇಶದೆಲ್ಲೆಡೆ ಪ್ರತಿಭಟಿಸಲಿದ್ದೇವೆ ಎಂದು ಹೇಳಿದ್ದಾರೆ. ಸಭೆಯ ನಂತರ ಅವರು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ ಹತ್ತೂವರೆಯಿಂದಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬಸ್ಗಳಲ್ಲಿ ಆಗಮಿಸಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಧ್ವಜ ಹಿಡಿದು ಬೈಕ್ ರ್ಯಾಲಿಯ ಮೂಲಕ ಸ್ವಾತಂತ್ರ್ಯ ಉದ್ಯಾನವನದೊಳಗೆ ಆಗಮಿಸಿದರು. ಈ ಸಮಾವೇಶಕ್ಕೆಂದೇ ಬೃಹತ್ ಸಭಾಂಗಣ ನಿರ್ಮಾಣ ಮಾಡಲಾಗಿತ್ತು. ಬಹುತೇಕ ಎಲ್ಲ ಸಚಿವರು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಹಿರಿಯ ನಾಯಕರು ವೇದಿಕೆಯ ಮೇಲಿದ್ದರು. ಆರಂಭದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಜಮೀರ್ ಅಹಮದ್ ಖಾನ್, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯ ಚುನಾವಣಾ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದರು.
ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಜೊತೆಯಾಗಿ ಹನ್ನೆರಡು ಗಂಟೆಗೆ ವೇದಿಕೆಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಹುಲ್ ಗಾಂಧಿ ಭಾಷಣವನ್ನು ಶಾಸಕ ಶರತ್ ಬಚ್ಚೇಗೌಡ ಕನ್ನಡೀಕರಿಸಿದರು.

ರಾಹುಲ್ ಗಾಂಧಿ ಮಾತು ಮುಗಿಯುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ ಕೆ ಶಿವಕುಮಾರ್, ಸಿ ಎಂ ಸಿದ್ದರಾಮಯ್ಯ ಚುಟುಕಾಗಿ ಮಾತನಾಡಿದರು. ತಮ್ಮ ತಮ್ಮ ನಾಯಕರು ಪೋಡಿಯಂ ಬಳಿ ಬರುತ್ತಿದ್ದಂತೆ ಬೆಂಬಲಿಗರು ಜೈಕಾರ ಕೂಗುತ್ತಿದ್ದರು. ಸರಿಯಾಗಿ ಒಂದೂವರೆಗೆ ಚುನಾವಣಾ ಆಯೋಗದ ಕಚೇರಿಗೆ ರಾಹುಲ್ ನಿಯೋಗ ತೆರಳುತ್ತಿದ್ದಂತೆ ಕಾರ್ಯಕ್ರಮ ಮುಗಿಯಿತು. ಎಲ್ಲ ನಾಯಕರ ಮಾತಿನಲ್ಲೂ ಜೋಶ್ ಇತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಉತ್ಸಾಹದಿಂದ ಮಾತನಾಡಿದರು. ಇಡೀ ಕಾರ್ಯಕ್ರಮ ಕೇವಲ ಮೂರು ಗಂಟೆ ಅವಧಿಯಲ್ಲಿ ಅರ್ಥಪೂರ್ಣವಾಗಿ ಮತ್ತು ಯಾವುದೇ ಹಾರ ತುರಾಯಿ, ಸನ್ಮಾನ, ಸ್ಮರಣಿಕೆಗಳಿಲ್ಲದೇ ಸರಳವಾಗಿ ನಡೆಯಿತು.
ಬೇರೆಲ್ಲ ರಾಜಕೀಯ ಸಮಾವೇಶಗಳಿಗೆ ಕರೆತರುವಂತೆ ನಾಯಕರು ತಮ್ಮ ತಮ್ಮ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತಂದಿದ್ದರು. ಸಭಾಂಗಣದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು ನಗರದ ಕೇಂದ್ರಭಾಗದಲ್ಲಿ ಇಂತಹ ಸಮಾವೇಶ ನಡೆದಾಗ ಟ್ರಾಫಿಕ್ ಸಮಸ್ಯೆಯಾಗುವುದು ಸಾಮಾನ್ಯ. ಆದರೆ ಇಂದಿನ ಕಾರ್ಯಕ್ರಮ ಮಧ್ಯಾಹ್ನ ಎರಡು ಗಂಟೆಗೂ ಮುನ್ನವೇ ಮುಗಿದಿತ್ತು. ಹಾಗಾಗಿ ನಗರದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿ ಅಷ್ಟೊಂದು ಕಾಡಿಲ್ಲ ಎಂದೇ ಹೇಳಬಹುದು.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ





