39 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಸಂಬಂಧ ಎಐಸಿಸಿ ಅನುಮೋದಿತ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೆಲವು ಹೆಸರುಗಳನ್ನು ಕೈಬಿಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಡಬ್ಲ್ಯೂಸಿ ಸಭೆಗೆಂದು ಬಿಹಾರ್ ತೆರಳಿದ ಸಂದರ್ಭದಲ್ಲೇ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿತ್ತು. ಇಲಾಖಾವಾರು ಆದೇಶ ಹೊರಡಿಸಲು ಶುಕ್ರವಾರ ಸೂಚನೆ ನೀಡಿದ್ದು, ಕೆಲವು ಹೆಸರುಗಳ ಬದಲಾವಣೆಯಾಗಿದೆ.
ಎಐಸಿಸಿ ಕಳುಹಿಸಿ ಪಟ್ಟಿಯಿಂದ ಸಿದ್ದರಾಮಯ್ಯ ಅವರು ನೀಲಕಂಠ ಮುಲ್ಗೆ (ಕೆಕೆಆರ್ಟಿಸಿ), ಸೈಯದ್ ಮೆಹಮೂದ್ ಚಿಸ್ಟಿ (ದ್ವಿದಳ ಧಾನ್ಯಗಳ ಅಭಿವೃದ್ಧಿ ನಿಗಮ), ಬಿ ಎಸ್ ಕವಲಗಿ (ನಿಂಬೆ ಅಭಿವೃದ್ಧಿ ಮಂಡಳಿ), ಅಂಜನಪ್ಪ (ಬೀಜ ಅಭಿವೃದ್ಧಿ ನಿಗಮ), ಶರಣಪ್ಪ ಸಲಾದ್ಪುರ (ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ), ಆರ್ ಎಸ್ ಸತ್ಯನಾರಾಯಣ (ತಾಪಮಾನ ಮಂಡಳಿ) ಮತ್ತು ಅನಿಲ್ಕುಮಾರ್ ಜಮಾದಾರ್ (ತೊಗರಿ ಅಭಿವೃದ್ಧಿ ನಿಗಮ) ಅವರನ್ನು ಕೈಬಿಟ್ಟಿದ್ದಾರೆ.
ರಾಜು ಕಾಗೆ ಹುದ್ದೆಗೆ ಸಮಸ್ಯೆಯಿಲ್ಲ
ಕಾಗವಾಡ ಶಾಸಕ ರಾಜು ಕಾಗೆ ಅಧ್ಯಕ್ಷರಾಗಿದ್ದ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಅರುಣ್ ಕುಮಾರ್ ಪಾಟೀಲ್ ಹೆಸರನ್ನು ಎಐಸಿಸಿ ಪಟ್ಟಿ ಮಾಡಿತ್ತು. ಇದು ಮುದ್ರಣ ದೋಷ ಎಂಬ ಸ್ಪಷ್ಟನೆಯೊಂದಿಗೆ ಅರುಣ್ ಪಾಟೀಲ್ರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕಕ್ಕೆ ಸೂಚಿಸಲಾಗಿದೆ. ರಾಜು ಕಾಗೆ ಹುದ್ದೆ ಅಬಾಧಿತವಾಗಿದೆ. ಆದರೆ, ಎಐಸಿಸಿ ಅನುಮೋದಿತ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ನೀಲಕಂಠ ಮುಳ್ಗೆ ಅವರನ್ನು ಶಿಫಾರಸು ಮಾಡಲಾಗಿತ್ತು.
ಎಂ.ನಿಕೇತ್ ರಾಜ್ ಅವರಿಗೆ ಅವಕಾಶ
ಎಐಸಿಸಿ ಅನುಮೋದನೆ ನೀಡಿದ್ದ ಪಟ್ಟಿಯಲ್ಲಿ ಇಲ್ಲದಿದ್ದರೂ ತುಮಕೂರು ಮೂಲದ ಎಂ.ನಿಕೇತ್ ರಾಜ್ ಅವರನ್ನು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಎಚ್.ಡಿ.ಗಣೇಶ್ ಅವರನ್ನು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇದು ಹೊಸ ಸೇರ್ಪಡೆಯಾಗಿದೆ.
ಉಪಾಧ್ಯಕ್ಷ ಹುದ್ದೆಗಳ ನೇಮಕಕ್ಕೂ ಅನುಮೋದನೆ
ಹತ್ತು ನಿಗಮ, ಮಂಡಳಿಗಳಿಗೆ ಉಪಾಧ್ಯಕ್ಷರ ನೇಮಕಕ್ಕೂ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಶಾಸಕ ವಿಶ್ವಾಸ್ ವಸಂತ ವೈದ್ಯ ಅವರನ್ನು ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.





