ಕನ್ನಡ ಸಾಹಿತ್ಯ ಪರಿಷತ್ನಲ್ಲಿ (ಕಸಾಪ) ಭಾರೀ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಲಾಗಿತ್ತು. ಇದೀಗ, ಅವ್ಯವಹಾರದ ಆರೋಪಗಳು ಸಾಬೀತಾಗಿವೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಕಸಾಪ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿಗೆ ಕಸಾಪ ಆಡಳಿತಾಧಿಕಾರಿ ಕೆ.ಎಂ ಗಾಯತ್ರಿ ಅವರು ನೋಟಿಸ್ ನೀಡಿದ್ದಾರೆ.
ಕಸಾಪದ ಹಿಂದಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಹಣಕಾಸು ಅವ್ಯವಹಾರ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 2025ರ ಅಕ್ಟೋಬರ್ನಲ್ಲಿ ಆರೋಪಗಳ ಕುರಿತು ಸರ್ಕಾರವು ತನಿಖೆಗೆ ಆದೇಶಿಸಿತ್ತು. ಮಾತ್ರವಲ್ಲದೆ, ಮಹೇಶ್ ಜೋಶಿ ಅವರ ಅಧ್ಯಕ್ಷಗಿರಿಯನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಇದೀಗ, ತನಿಖೆ ನಡೆಸಿರುವ ಬೆಂಗಳೂರು ನಗರ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಆರೋಪಗಳು ಸಾಬೀತಾಗಿವೆ. ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಶಿಫಾರಸು ಮಾಡಿವೆ. ಅದರಂತೆ, ಮಹೇಶ್ ಜೋಶಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ನಲ್ಲಿ; ಸಾಹಿತ್ಯ ಪರಿಷತ್ನ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರ, ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಸುಮಾರು 3,76,73,885 ರೂ. (3.7 ಕೋಟಿ) ಮೌಲ್ಯದ ಕಾಮಗಾರಿಗಳನ್ನು ನಾನ್ ಷೆಡ್ಯೂಲ್ ರೇಟ್ನಲ್ಲಿ, ಕೆಟಿಪಿಪಿ ನಿಯಮ ಉಲ್ಲಂಘಿಸಿ, ನಡೆಸಲಾಗಿದೆ. ಅಲ್ಲದೆ, ಕಾಮಗಾರಿಗಳಲ್ಲಿ ಹಣಕಾಸು ವ್ಯತ್ಯಾಸದ ಕಾರಣದಿಂದಾಗಿ 65,53,571 ರೂ. ಆರ್ಥಿಕ ನಷ್ಟವಾಗಿದೆ. ಜೊತೆಗೆ, ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ 1,79,200 ರೂ., ಅಗ್ನಿಶಾಮಕ ಉಪಕರಣ ಖರೀದಿಯಲ್ಲಿ 1,75,452 ರೂ. ಸೇರಿ ಒಟ್ಟು 3,54,652 ರೂ.ಗಳನ್ನು ಹೆಚ್ಚುವರಿ ಮೊತ್ತವನ್ನು ಪಾವತಿಸಲಾಗಿದೆ. ಇದೆಲ್ಲದರಿಂದ, ಕಸಾಪಗೆ ಭಾರೀ ಆರ್ಥಿಕ ನಷ್ಟ ಉಂಟಾಗಿರುವುದು ಸಾಬೀತಾಗಿದೆ ಎಂದು ವಿವರಿಸಲಾಗಿರುವುದಾಗಿ ವರದಿಯಾಗಿದೆ.
ರವೀಂದ್ರ ಕುಲಕರ್ಣಿ ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ವಿದೇಶದಿಂದ ಅವರ ಸ್ವಂತ ಖರ್ಚಿನಲ್ಲಿ ಆಗಮಿಸಿದ್ದರು. ಆದರೆ, ಅವರ ಹೆಸರಿನಲ್ಲಿ 2,57,530 ರೂ. ಬಿಲ್ ತೋರಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಸಮ್ಮೇಳನದ ಆಹ್ವಾನ ಪತ್ರಿಕೆ ಮುದ್ರಣ ಮತ್ತು ಸನ್ಮಾನಿತರಿಗೆ ಸನ್ಮಾನಕ್ಕೆ ಸಂಬಂಧಿಸಿದ ಸಾಮಾಗ್ರಿಗಳ ಖರೀದಿಗಳಲ್ಲಿಯೂ 86,57,321 ರೂ. ಹಣ ದುರುಪಯೋಗವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಗುರುತಿನ ಕಾರ್ಡ್, ಸ್ಮಾರ್ಟ್ ಕಾರ್ಡ್ ತಯಾರಿಕೆಯಲ್ಲಿ 1,40,220 ರೂ. ಆರ್ಥಿಕ ನಷ್ಟ ಉಂಟು ಮಾಡಿರುವುದು ಸಾಬೀತುಗೊಂಡಿದೆ ಎಂದು ನೋಟಿಸ್ನಲ್ಲಿ ವಿವರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ರಾಜ್ಯ ಬಜೆಟ್ | ಯಾಲಕ್ಕಿ ನಾಡು ಹಾವೇರಿಯ ನಿರೀಕ್ಷೆಗಳೇನು?
‘ಕರ್ನಾಟಕ ಪಾರದರ್ಶಕ ಕಾಯ್ದೆ-1999’ರ ಅಡಿಯಲ್ಲಿ ಸೂಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆ ವೇಳೆ ಸ್ಪಷ್ಟವಾಗಿದೆ ಕಂಡುಬಂದಿದೆ. ಈ ಎಲ್ಲ ಅಕ್ರಮಗಳಿಗೆ ಅವ್ಯವಹಾರಗಳು ನಡೆದ ಸಮಯದಲ್ಲಿ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ನೋಟೀಸ್ ಸ್ವೀಕರಿಸಿದ 7 ದಿನಗಳೊಳಗಾಗಿ ಲಿಖಿತ ಹೇಳಿಕೆ, ನೀಡಬೇಕು. ತಪ್ಪಿದ್ದಲ್ಲಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ ಜೋಶಿಗೆ ಎಚ್ಚರಿಕೆ ನೀಡಲಾಗಿದೆ.




