“ನನಗೂ ಹಾಗೂ ನನ್ನ ತಂದೆಯವರು, ಶೂದ್ರರಿಗೆ ಯಶಸ್ಸು ಹಾಗೂ ಗೌರವಯುತ ಸ್ಥಾನಮಾನ ಸಿಗಲು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಮತ್ತು ಅವರ ಸಂವಿಧಾನವೇ ಪ್ರಮುಖ ಕಾರಣ” ಎಂದು ದಾವಣಗೆರೆಯ ಕುವೆಂಪು ಭವನದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂರ್ವ ವಲಯ ಐಜಿಪಿ ಡಾ. ಬಿಆರ್ ರವಿಕಾಂತೇಗೌಡ ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ಕನ್ನಡ ಕುವೆಂಪು ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ “ಪ್ರಸ್ತುತ ದಲಿತ ಚಳುವಳಿ ಹಾಗೂ ಭಾರತೀಯ ಸಂವಿಧಾನ ಅನುಷ್ಠಾನ” ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ನಾವು ದಲಿತರಾಗಿ ಜನಿಸದಿದ್ದರೂ, ಶೂದ್ರರಾದ ಕಾರಣ, ನನಗೂ ಹಾಗೂ ನಮ್ಮ ತಂದೆಯವರಿಗೆ ಗೌರವ ಹಾಗೂ ಸ್ಥಾನಮಾನ ಸಿಕ್ಕಿರುವುದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನವೇ ಕಾರಣ. ಸಂವಿಧಾನದ ಮಹತ್ವ ಮತ್ತು ಅದರ ಸಾಮಾಜಿಕ ನ್ಯಾಯದ ಆಶಯಗಳು ಹಾಗೂ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸ ಮಾತನಾಡಿ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಜಾತಿ ರಹಿತ, ವರ್ಣ ರಹಿತ ಸಮಸಮಾಜ ನಿರ್ಮಿಸುವ ಕಡೆಗೆ ಹೋಗಬೇಕು” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿದರು. ವಿಚಾರ ಮಂಡನೆಯನ್ನು ಡಾ. ಎಚ್. ವಿಶ್ವನಾಥ್ ಹಾಗೂ ಸತ್ಯ ಭದ್ರಾವತಿ ಅವರುಗಳು ಮಂಡಿಸಿ, ಇಂದಿನ ದಲಿತ ಚಳುವಳಿಯ ಸವಾಲುಗಳು ಮತ್ತು ಸಂವಿಧಾನದ ಅನುಷ್ಠಾನದ ಅಗತ್ಯತೆಯನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದಾವಣಗೆರೆ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಅವರು ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಅನೈರ್ಮಲ್ಯ; ಕುಡುಕರ ತಾಣವಾಗಿ ಬದಲಾದ ಅಂಗಳ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಟಿ. ವೀರೇಶ್, ಆಲೂರು ನಿಂಗರಾಜ್, ಎಚ್ ಮಲ್ಲೇಶ್, ಚಿನ್ನಯ್ಯ, ಡಾ. ಸಿಎಂ ರವಿಕುಮಾರ್, ಗುರುರಾಜ್ ಸೊರಬ, ಪ್ರಭಣ್ಣ ಹೂವಿನಮಡು, ಮುಸ್ತಫಾ ಭಾಗವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪದಾಧಿಕಾರಿಗಳಾದ ಟಿ. ರವಿಕುಮಾರ್, ಎಂ. ರವಿ (ಕೆಟಿಜೆ ನಗರ), ಆರ್. ಪ್ರಭಾಕರ್ ಪಾಂಡಮಟ್ಟಿ, ರಾಂಪುರ ರಮೇಶ್, ಮಾಯಕೊಂಡ ಗುಮ್ಮನೂರು ಮಂಜುನಾಥ್, ಎಚ್. ಮಲ್ಲಿಕಾರ್ಜುನ, ಟಿ. ರವಿಕುಮಾರ್, ಕುಮಾರಿ ಚಂದನ ಎಚ್.ಎನ್. ಆಲೂರು, ವಂದಾಲಿ ಬಿ ಕಲಪನಹಳ್ಳಿ ಜಿಲ್ಲಾ ಖಜಾಂಚಿ, ಹಾಗೂ ವಿವಿಧ ತಾಲೂಕು ಪದಾಧಿಕಾರಿಗಳಾದ ಕೆಂಚಮ್ಮನಹಳ್ಳಿ ರುದ್ರೇಶ್, ಮಾರಿಕೊಪ್ಪ ಮಂಜುನಾಥ್, ಎಂ. ಕೃಷ್ಣಪ್ಪ (ಹರಿಹರ), ಮೂರ್ತಿ (ತಿಪ್ಪಗೊಂಡನಹಳ್ಳಿ), ಸುನಿಲ್ ಬಾತಿ, ಚಿಕ್ಕನಹಳ್ಳಿ ನಿಂಗರಾಜ್, ಚಿಕ್ಕತೊಗಲೇರಿ ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.





