ಔಷಧಗಳ ಕಾರಣದಿಂದ ಮರಣ ಸಂಭವಿಸಿದರೆ ಅದನ್ನು ಅಂಕಿಅಂಶ ರೀತಿ ನೋಡಲು ಸಾಧ್ಯವಿಲ್ಲ. ಒಂದೇ ಮರಣ ಸಂಭವಿಸಿದರೂ ಅದು ತಪ್ಪೇ ಆಗುತ್ತದೆ. ಉತ್ಪಾದಕರು ಸರ್ಕಾರದ ಮಾನದಂಡವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಂಡಿಯನ್ ಫಾರ್ಮಾಸ್ಯಿಟಿಕಲ್ ಅಸೋಸಿಯೇಷನ್, ಕರ್ನಾಟಕ ಡ್ರಗ್, ಫರ್ಮಾಸ್ಯುಟಿಕಲ್ ಅಸೋಸಿಯೇಷನ್ ಜಂಟಿಯಾಗಿ ಡ್ರಗ್ ಕಂಟ್ರೋಲ್ ಡಿಪಾರ್ಟ್ ಮೆಂಟ್ ಕರ್ನಾಟಕ ಮಾರ್ಗದರ್ಶನದಲ್ಲಿ ರೆಗ್ಯುಲೆಟರಿ ಚೇಂಜೆಸ್ ಇನ್ ಸೊಲಿಡ್ ಒರಲ್ ಡೋಸೇಜ್ ಕುರಿತು ಒಂದು ದಿನದ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
“ನಿಮಗೆ ಏನೇ ಸಮಸ್ಯೆ ಇದ್ದರೂ ನಮ್ಮ ಇಲಾಖೆ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತದೆ. ಯಾವುದೇ ಹಿಂಜರಿಕೆ ಬೇಡ. ಒಟ್ಟಿನಲ್ಲಿ ನಮ್ಮ ರಾಜ್ಯದ ಜನರಿಗೆ ಅತ್ಯುತ್ತಮ ಔಷಧ ಸಿಗಬೇಕು. ಈ ರೀತಿಯ ಕಾರ್ಯಾಗಾರಗಳು ನಿರಂತರ ನಡೆಯಬೇಕು. ಇದರಿಂದ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುತ್ತದೆ” ಎಂದರು.
“ಬದಲಾಗುತ್ತಿರುವ ತಂತ್ರಜ್ಞಾನವನ್ನು ಉತ್ಪಾದನಾ ವಲಯದಲ್ಲಿ ಅಳವಡಿಸಿಕೊಳ್ಳಲು ನಿಯಮಿತವಾಗಿ ಕಾರ್ಯಾಗಾರ ನಡೆಸಬೇಕಾದ ಅನಿವಾರ್ಯತೆ ಇದೆ. ಔಷಧಗಳ ಉತ್ಪಾದನೆಯಲ್ಲಿ ಸರ್ಕಾರದ ಮಾನದಂಡಗಳ ಕುರಿತು ಹೆಚ್ಚಿನ ಅರಿವು ಮೂಡಿಸಲು ಇದು ಅನೂಕಲವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಇಲಾಖೆಯ ಬೆಂಬಲ ನಿರಂತರ. ಒಟ್ಟಿನಲ್ಲಿ ಉತ್ಕೃಷ್ಟ ದರ್ಜೆಯ ಔಷಧ ಜನರಿಗೆ ಸಿಗುವಂತಾಗಬೇಕು. ಎಲ್ಲದರಲ್ಲೂ ಬಡವರು, ಮದ್ಯಮ ವರ್ಗದವರು, ಶ್ರೀಮಂತರ ಆಯ್ಕೆಗಳು ಬೇರೆಬೇರೆ ಆಗಿರುತ್ತದೆ. ಆದರೆ ಔಷಧಗಳ ವಿಷಯದಲ್ಲಿ ಈ ಅಯ್ಕೆ ಇರುವುದಿಲ್ಲ” ಎಂದು ಹೇಳಿದರು.





